ಸಮಗ್ರ ಸುದ್ದಿ

ಜಾತ್ರೆ, ಧಾರ್ಮಿಕ ಆಚರಣೆಯಿಂದ ಸಂಸ್ಕೃತಿ, ಪರಂಪರೆಯ ಪುನರುತ್ಥಾನ: ಈಶ್ವರ ಖಂಡ್ರೆ

Share

ಮಳವಳ್ಳಿ: ಜಾತ್ರೆ, ಉತ್ಸವ, ರಾಜಗೋಪುರ ಲೋಕಾರ್ಪಣೆಯಂತಹ ಧಾರ್ಮಿಕ ಆಚರಣೆಗಳಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆಯ ಪುನರುತ್ಥಾನವಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಮಳವಳ್ಳಿ ತಾಲೂಕಿನ ಹಲಸಳ್ಳಿ ಗವಿಮಠದಲ್ಲಿಂದು ರಾಜಗೋಪುರ ಮತ್ತು ಬಸವದ್ವಾರ ಲೋಕಾರ್ಪಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆದಾಗ ಬಂಧು ಮಿತ್ರರು ಒಗ್ಗೂಡುತ್ತಾರೆ. ಸಂಬಂಧಗಳು ಗಟ್ಟಿಗೊಳ್ಳುತ್ತವೆ.
ನಡುಗನ್ನಡ ಮಹಾಕವಿ ಹಾಗೂ ಸಂಸ್ಕೃತ ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಶ್ರೀ ಷಡಕ್ಷರ ದೇವರು ಹಲವು ಕೃತಿಗಳನ್ನು ರಚಿಸಿ ಈ ನಾಡಿಗೆ ಬೆಳಕು ನೀಡಿದ್ದಾರೆ, ಬಸವೇಶ್ವರ ಸ್ವಾಮಿ ಇಲ್ಲಿ ಗುಹೆಯಲ್ಲಿ ಮೂಡಿ ಈ ಕ್ಷೇತ್ರ ಪವಿತ್ರವಾಗಿದೆ ಎಂದರು.

ಪರಿಸರ ಪ್ರೇಮಿಗಳಾಗಿದ್ದ ಪೂರ್ವಜರು:

ನಮ್ಮ ಪೂರ್ವಜರು ಮಹಾನ್ ಪರಿಸರ ಪ್ರೇಮಿಗಳಾಗಿದ್ದರು. ನಮಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಇರುವಂತೆಯೇ ಖಗ, ಮೃಗ, ಕೀಟ, ಸಸ್ಯಗಳಿಗೂ ಬದುಕುವ ಹಕ್ಕಿದೆ ಎಂದು ತಿಳಿದಿದ್ದರು. ಬೆಟ್ಟ, ಗುಡ್ಡಗಳನ್ನೂ ಪೂಜಿಸುತ್ತಿದ್ದರು. ವನಮಹೋತ್ಸವ ಆಚರಿಸುವ ಮೂಲಕ ಕಾಡಿಗೆ ಗೌರವ ನೀಡುತ್ತಿದ್ದರು. ಪ್ರಕೃತಿ ಪರಿಸರ ಉಳಿಸಿದ್ದಾರೆ ಎಂದರು.

ಆದರೆ ಇಂದು ಆಧುನಿಕ ಜೀವನಶೈಲಿ ನಮ್ಮ ನಿದ್ದೆ ಗೆಡಿಸಿದೆ. ನಮ್ಮ ಯುವಜನರು ನಮ್ಮ ಸಂಸ್ಕೃತಿ, ಪರಂಪರೆ ಮರೆಯುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಮಾದಕ ದ್ರವ್ಯ ವ್ಯಸನಿಗಳಾಗಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಯುವಜನರಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು. ನಮ್ಮ ಯುವಜನರು ವ್ಯಸನ ಮುಕ್ತರಾಗಿ, ಶಾರೀರಿಕವಾಗಿ ಸದೃಢರಾಗಿ ಸರಿಯಾದ ಮಾರ್ಗದಲ್ಲಿ ಸಾಗಲು ಪೂಜ್ಯರು ದಾರಿ ತೋರಿಸಬೇಕು ಎಂದರು.

ವೀರಶೈವ ಲಿಂಗಾಯತ ಸಮಾಜಕ್ಕೆ ಭವ್ಯ ಇತಿಹಾಸ ಇದೆ. ನಾವು ಕೇವಲ ನಮ್ಮ ಪೂರ್ವಜರ ಹಿರಿಮೆಯ ಬಗ್ಗೆ ಹೆಮ್ಮಪಟ್ಟರೆ ಸಾಲದು, ವರ್ತಮಾನದ ಜೀವಂತಿಕೆಯನ್ನೂ ಉಳಿಸಬೇಕು. ಇದಕ್ಕಾಗಿ ಶ್ರಮಿಸಿ ನಮ್ಮ ಸಮಾಜದ ಗರಿಮೆ ಎತ್ತಿಹಿಡಿಯಬೇಕು ಎಂದರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದರು, ದಾಸೋಹದ ಮಹತ್ವ ತಿಳಿಸಿದರು. ನಾವು ದುಡಿದು ಗಳಿಸಬೇಕು, ಗಳಿಸಿ ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.

ನುಡಿದಂತೆ ನಡೆ, ಈ ಜನ್ಮ ಕಡೆ ಎಂಬ ಶರಣವಾಣಿ ಸ್ಮರಿಸಿದ ಅವರು, ವೀರಶೈವ ಲಿಂಗಾಯತ ಮಠಮಾನ್ಯಗಳು ಈ ನಿಟ್ಟಿನಲ್ಲಿ ಅಕ್ಷರ, ಆಶ್ರಯ, ಅನ್ನ ದಾಸೋಹದ ಮೂಲಕ ಅದ್ಭುತ ಕಾರ್ಯ ಮಾಡುತ್ತಿವೆ. ಆಧುನಿಕ ಸಮಾಜದ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.
ಎಲ್ಲ ಧರ್ಮ, ಜಾತಿ, ಭಾಷೆಯವರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯಕೊಟ್ಟ ಸಮುದಾಯ ವೀರಶೈವ ಲಿಂಗಾಯತ ಸಮುದಾಯ. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ದೌರ್ಬಲ್ಯವಿದೆ. ಹೀಗಾಗಿ ನಾವು ಸಂಘಟಿತರಾಗಿ ನಮ್ಮ ಉಳಿವಿಗಾಗಿ ಶ್ರಮಿಸಬೇಕು ಎಂದರು.

ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವೂ ಕಲುಷಿತವಾಗುತ್ತಿದೆ:

ಇಂದು ಎಲ್ಲ ಕ್ಷೇತ್ರಗಳಂತೆ ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವೂ ಕಲುಷಿತವಾಗುತ್ತಿರುವುದು ಆತಂಕದ ವಿಷಯ. ಈ ನಿಟ್ಟಿನಲ್ಲಿ ಪೂಜ್ಯರು, ಹಿರಿಯರು, ಮಠಾಧಿಪತಿಗಳು ಧಾರ್ಮಿಕ ಕ್ಷೇತ್ರದ ಪಾವಿತ್ರ್ಯ ಸಂರಕ್ಷಣೆಗೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.

ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ ಎಂದ ಅವರು, ಇಂತಹ ಕಾರ್ಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಾಡುತ್ತಿದೆ. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ವೀ.ಲಿಂ.ಭವನ, ವಿದ್ಯಾರ್ಥಿನಿಲಯ ನಿರ್ಮಾಣ ಮಾಡುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.

ತಮ್ಮನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ ಅವರು, ಇಂದು ಸಮಾಜ ಕವಲು ದಾರಿಯಲ್ಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ನಮ್ಮ ಸಮಾಜದ ಮುಂದೆಯೂ ಅನೇಕ ಸಮಸ್ಯೆಗಳಿವೆ. ಅನೇಕ ಸವಾಲುಗಳಿವೆ. ಆ ಸವಾಲುಗಳನ್ನು ಮೆಟ್ಟಿನಿಲ್ಲಲು ಶ್ರಮಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶಿವರಾತ್ರೀ ದೇಶಿಕೇಂದ್ರ ಮಹಾಸ್ವಾಮೀಜಿ, ಹಲಸಹಳ್ಳಿ ಗವಿಮಠದ ಪರಮಪೂಜ್ಯ ಶ್ರೀ ಷಡಕ್ಷರಿ ಸ್ವಾಮೀಜಿ ಮಾಜಿ ಶಾಸಕ ಅನ್ನದಾನಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page