ಸಮಗ್ರ ಸುದ್ದಿ

ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು|ತೀರಿಸಲಾಗದ ಋಣದ ಹೆಸರೇ ಅವ್ವ ನನ್ನ ಪ್ರತಿ ಉಸಿರಿನ ಚೈತನ್ಯದ ಹೂವೇ ಅವ್ವ: ಸಭಾಪತಿ ಬಸವರಾಜ ಎಸ್ ಹೊರಟ್ಟಿ

Share

ಬೆಂಗಳೂರು: ಅವ್ವ ಎನ್ನುವ ಎರಡಕ್ಷರ ನನ್ನ ಪಾಲಿಗೆ ಕೇವಲ ಹೆಸರಲ್ಲ, ಅದು ನನ್ನ ಬದುಕಿನ ಅಕ್ಷಯ ಚೈತನ್ಯ. ಎದೆಯ ಒರತೆಯಲ್ಲಿ ಸದಾಕಾಲ ತಿಳಿನೀರಿನ ಬುಗ್ಗೆಯಂತೆ ಉಕ್ಕುವ ಅವ್ವನ ನೆನಪುಗಳೇ ನನ್ನ ಜೀವನದ ದಾರಿದೀಪ, ನನ್ನ ಪ್ರತಿ ದಿನ ಆರಂಭವಾಗುವುದೇ ಅವ್ವನ ಸ್ಮರಣೆಯಿಂದ. ಬಾಲ್ಯದಲ್ಲಿ ಅವ್ವ ಹಾಡುತ್ತಿದ್ದ ಆ ಜೋಗುಳದ ಮಧುರ ಧ್ವನಿ ಇಂದಿಗೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ, ಮನಸ್ಸಿಗೆ ನೆಮ್ಮದಿ ನೀಡುತ್ತಿದೆ‌ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಅವರು ಹೇಳಿದ್ದಾರೆ.

ವಿಶ್ವ ತಾಯಂದಿರ ದಿನವಾದ ಇಂದು‌ ಅವರು ಮಾತನಾಡುತ್ತಾ, ಅವ್ವ ನನ್ನ ಪಾಲಿನ ಸರ್ವಸ್ವ ಅವಳು ನನ್ನನ್ನು ಸದಾ ಕಾಯುವ ಶಕ್ತಿ ಪ್ರೀತಿಯಿಂದ ಕಾಡುವ ಮಮತೆ. ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಪ್ರತಿಯಾಗಿ ನಾವು ಏನನ್ನೂ ನೀಡಿದರೂ ಅದು ಕಡಿಮೆಯೇ. ಈ ಜನ್ಮವಷ್ಟೇ ಅಲ್ಲ ನೂರು ಜನ್ಮ ಎತ್ತಿ ಬಂದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ.

ನಮ್ಮ ತಾಯಿ ಶ್ರೀಮತಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಸವಿನೆನಪಿನಲ್ಲಿ ಸ್ಥಾಪಿಸಿರುವ ‘ಅವ್ವ ಸೇವಾ ಟ್ರಸ್ಟ್ ಮೂಲಕ ನೊಂದವರಿಗೆ ಆಸರೆಯಾಗುವುದು, ಸಾಧಕರನ್ನು ಗುರುತಿಸುವುದು ಮತ್ತು ಪ್ರತಿಭಾವಂತರಿಗೆ ನೆರವಾಗುವ ಸಮಾಜಮುಖಿ ಕೆಲಸಗಳಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ಎಂದು‌ ತಿಳಿಸಿದರು.

ತಾಯಿಯಿಲ್ಲದ ಬದುಕು ಶೂನ್ಯ, ತಾಯಿಯನ್ನು ಗೌರವಿಸುವುದು ಎಂದರೆ ದೈವವನ್ನು ಪೂಜಿಸಿದಂತೆ. ಈ ಸುದಿನದಂದು ಜಗತ್ತಿನ ಎಲ್ಲಾ ತಾಯಂದಿರಿಗೂ ಶಿರಬಾಗಿ ನಮಿಸುತ್ತಾ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ ಎಂದು ತಿಳಿಸಿದರು.


Share

You cannot copy content of this page