ಸಮಗ್ರ ಸುದ್ದಿ

ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ವಿಶೇಷ ಕಾರ್ಯಾಚರಣೆ  – ಲೋಖಂಡೆ ಸ್ನೇಹಲ್ ಸುಧಾಕರ್

Share

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳು, ಪ್ರಮುಖ ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳು, ತಾತ್ಕಾಲಿಕ ನಿರ್ಮಾಣಗಳು, ವ್ಯಾಪಾರ ಮಳಿಗೆಗಳು, ಕಟ್ಟಡ ಸಾಮಗ್ರಿಗಳು, ಜಾಹೀರಾತು ಫಲಕಗಳು ಹಾಗೂ ಇತರೆ ವಸ್ತುಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ತಿಳಿಸಿದರು.

ನಗರದ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಮೀಸಲಾಗಿದ್ದು, ಅವುಗಳ ಮೇಲೆ ಅಕ್ರಮ ಒತ್ತುವರಿ ಹೆಚ್ಚುತ್ತಿರುವುದರಿಂದ ಪಾದಚಾರಿಗಳು ರಸ್ತೆ ಮೇಲೆ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಂತ ಹಂತವಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿಶೇಷ ಕಾರ್ಯಾಚರಣೆಗೆ ತಂಡ ಮತ್ತು ತೆರವು ಕಾರ್ಯಾಚರಣೆ ವಿವರಗಳು

ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರತಿ ವಾರ್ಡ್ ವ್ಯಾಪ್ತಿಯ ಕಾರ್ಯಾಚರಣೆಗೆ ಕೆಳಕಂಡ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ಒಳಗೊಂಡ ತಂಡವನ್ನು ನಿಯೋಜಿಸಲಾಗಿದೆ.

  • 4 ಮಾರ್ಷಲ್ ಸಿಬ್ಬಂದಿ
  • 10 ಮಂದಿ ಕಾರ್ಮಿಕರು
  • 3 ಟ್ರ್ಯಾಕ್ಟರ್‌ಗಳು
  • 1 ಜೆಸಿಬಿ ಯಂತ್ರ

ಸಂಬಂಧಿತ ವಾರ್ಡ್ ಎಂಜಿನಿಯರ್‌ಗಳು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಲಿದ್ದು, ತೆರವು ಕಾರ್ಯಾಚರಣೆಯನ್ನು ಸಮನ್ವಯದಿಂದ ನಡೆಸಲಿದ್ದಾರೆ ಎಂದು ತಿಳಿಸಿದರು.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 27 ರಿಂದ ಮೇ 10 ರವರೆಗೆ ನಡೆಸಲಾದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಪಾದಚಾರಿ ಮಾರ್ಗದಲ್ಲಿ ಅಡ್ಡಲಾಗಿ ಇದ್ದಂತಹ ಮಳಿಗೆಗಳು, ತಳ್ಳುವ ಗಾಡಿಗಳು, ವಾಹನ ನಿಲ್ದಾಣಗಳು, ಕಟ್ಟಡ ಸಾಮಗ್ರಿಗಳು, ಅಂಗಡಿ ಮೇಲ್ಛಾವಣಿಗಳು, ಅನಧಿಕೃತ ಜಾಹೀರಾತುಗಳು ಸೇರಿದಂತೆ ಪಾದಚಾರಿಗಳ ನಡಿಗೆಗೆ ಅನಾನುಕೂಲ ಉಂಟುಮಾಡುತ್ತಿದ್ದ ವಸ್ತುಗಳನ್ನು ತೆರವು ಮಾಡಲಾಗಿರುತ್ತದೆ.

ಕಾರ್ಯಾಚರಣೆಯ ನಡೆಸಲಾದ ಪ್ರಮುಖ ರಸ್ತೆಗಳು

ಹೂಡಿ ವಿಭಾಗ ವ್ಯಾಪ್ತಿಯಲ್ಲಿಹೂಡಿ ಸರ್ಕಲ್‌ನಿಂದ ಲಯನ್ಸ್ ಪಾರ್ಕ್ ರಸ್ತೆ, ಹೂಡಿ ಸರ್ಕಲ್‌ನಿಂದ ಕುಂದಲಹಳ್ಳಿ ಗೇಟ್, ಹೂಡಿ ಸರ್ಕಲ್‌ನಿಂದ ಅಯ್ಯಪ್ಪನಗರ ಮುಖ್ಯ ರಸ್ತೆ, ಹೂಡಿ ಸರ್ಕಲ್‌ನಿಂದ ಐಟಿಪಿಎಲ್ ಮುಖ್ಯ ರಸ್ತೆ, ಹೂಡಿ ಸರ್ಕಲ್‌ನಿಂದ ಬೆಳ್ಳಂದೂರು ವರೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಕಾಡುಗೋಡಿ ವಿಭಾಗ ವ್ಯಾಪ್ತಿಯಲ್ಲಿಚನ್ನಸಂದ್ರ ಮುಖ್ಯ ರಸ್ತೆ, ಐಟಿಪಿಎಲ್ ಮುಖ್ಯ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಕಾಡುಗೋಡಿ ಮುಖ್ಯರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ರಾಮಮೂರ್ತಿನಗರ ವಿಭಾಗ ವ್ಯಾಪ್ತಿಯಲ್ಲಿ ರಾಮಮೂರ್ತಿನಗರ ಸರ್ಕಲ್ ಇಂದ ಐಟಿಐ ಮೇನ್ ಗೇಟ್, ರಾಮಮೂರ್ತಿನಗರ ಚರ್ಚ್‌ನಿಂದ ಅಣ್ಣಪ್ಪ ಸರ್ಕಲ್, ಪೋಸ್ಟ್ ಆಫೀಸ್ ರಸ್ತೆ – ಕಲ್ಕೆರೆ ಸಂತೆ ರಸ್ತೆ, ಶೆಲ್ ಪೆಟ್ರೋಲ್ ಬಂಕ್ ಇಂದ ಎನ್.ಆರ್.ಐ ಬಡಾವಣೆ, ಅಣ್ಣಪ್ಪ ಸರ್ಕಲ್‌ನಿಂದ ಗ್ಯಾಸ್ ಗೋಡೌನ್ ರಸ್ತೆ, ರಾಮಮೂರ್ತಿನಗರ ಚರ್ಚ್‌ನಿಂದ ಬೋವಿ ಕಾಲೋನಿ ಶಾಂತಿನಗರ ಲೇಔಟ್, ಕಲ್ಕೆರೆ ಸರ್ಕಲ್‌ನಿಂದ ಬಿ. ನಾರಾಯಣಪುರ ಮೇನ್ ರೋಡ್ ವರೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಮುಂದಿನ ಕಾರ್ಯಾಚರಣೆಯ ನಡೆಸಲಾಗುವ ಪ್ರಮುಖ ರಸ್ತೆಗಳು

ದೊಡ್ಡನೆಕ್ಕುಂದಿ ವಿಭಾಗ ವ್ಯಾಪ್ತಿಯಲ್ಲಿ ಮಾರುತಿ ಅಪಾರ್ಟ್‌ಮೆಂಟ್ ರಸ್ತೆ, ಕುಂದಲಹಳ್ಳಿ ಕಾಲೋನಿ, ಬಿ.ಇ.ಎಂ.ಎಲ್ ಬಡಾವಣೆ, ಕುಂದಲಹಳ್ಳಿ – ಬ್ರೂಕ್‌ಫೀಲ್ಡ್ ಸಿಗ್ನಲ್, ಮಾರತಹಳ್ಳಿ ಬ್ರಿಡ್ಜ್‌ನಿಂದ ಬಿ.ಇ.ಎಂ.ಎಲ್ ರಸ್ತೆ, ಸಿ.ಎಂ.ಆರ್ ಕಾಲೇಜ್ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುವುದು.

ಹೊರಮಾವು ವಿಭಾಗ ವ್ಯಾಪ್ತಿಯಲ್ಲಿರಾಮಮೂರ್ತಿನಗರ ಮುಖ್ಯ ರಸ್ತೆ ಟಿಸಿ ಪಾಳ್ಯ ಮುಖ್ಯರಸ್ತೆಯಿಂದ– ರಾಘವೇಂದ್ರ ಸರ್ಕಲ್,, ರಾಘವೇಂದ್ರ ಸರ್ಕಲ್‌ನಿಂದ ಹೊರಮಾವು ಬಿಬಿಎಂಪಿ ಆಫೀಸ್, ಹೊರಮಾವು ಮುಖ್ಯರಸ್ತೆಯಿಂದ – ಬಾಬುಸಪಾಳ್ಯ ಮುಖ್ಯ ರಸ್ತೆ, ಹೊರಮಾವು ಮುಖ್ಯರಸ್ತೆಯಿಂದ– ಬೈರತಿ ಮುಖ್ಯ ರಸ್ತೆ,
ಚಳ್ಳಕೆರೆಯಿಂದ -ಸರೋಜಿನಿ ನಗರ ಮುಖ್ಯ ರಸ್ತೆ, ಹೊಯ್ಸಳ ನಗರ ಮೇನ್ ರೋಡ್, ಮುನೇಶ್ವರ ನಗರ ಮುಖ್ಯ ರಸ್ತೆ ಗಳಲ್ಲಿ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುವುದು.

ವಿಜಿನಾಪುರ  ವಿಭಾಗ ವ್ಯಾಪ್ತಿಯಲ್ಲಿರಾಮಮೂರ್ತಿನಗರ ಓಲ್ಡ್ ಪೊಲೀಸ್ ಸ್ಟೇಷನ್ ನಿಂದ ಪಾರ್ಕ್ ರಸ್ತೆ, ರಾಮಮೂರ್ತಿನಗರ  ಪೊಲೀಸ್ ಸ್ಟೇಷನ್ ನಿಂದ ಎಫ್.ಸಿ.ಐ ಗೋಡೌನ್, ವಿಜೀನಾಪುರದಿಂದ ಕೊತ್ತನೂರು ರೈಲ್ವೆ ಸ್ಟೇಷನ್, ಜುಬಿಲಿ ಸ್ಕೂಲ್ ರೋಡ್, ಕೆಆರ್ ಪುರಂ ರೈಲ್ವೆ ಸ್ಟೇಷನ್ ನಿಂದ ಐಟಿಐ ಮೇನ್ ರೋಡ್, ಕೆ ಎಸ್ ನಿಸಾರ್ ಅಹ್ಮದ್ ರಸ್ತೆಯಿಂದ ಬ್ರಿಯಲ್ ಗೋಡೌನ್, ವಿಜಿನಾಪುರ ಅಯ್ಯಪ್ಪ ದೇವಸ್ಥಾನ ರಸ್ತೆ ಇಂದ ಟೆಂಪಲ್ ಬಜಾರ್ ವರೆಗೆ ಕಾರ್ಯಾಚರಣೆ ನಡೆಸಲಾಗುವುದು.

ವರ್ತೂರು ವಿಭಾಗ ವ್ಯಾಪ್ತಿಯಲ್ಲಿವರ್ತೂರು ಅತ್ತಿಬೆಲೆ ಬಜಾರ್ ರೋಡ್, ವರ್ತೂರು ಮದೀನಾ ನಗರ ರೋಡ್,ವರ್ತುರ್ ಪೊಲೀಸ್ ಸ್ಟೇಷನ್ ಎದುರು ರಸ್ತೆ, ಗುಂಜೂರು ಮುಖ್ಯರಸ್ತೆ, ಮಧುರ ನಗರ ಮೇನ್ ರೋಡ್,  ಬಳಗೆರೆ ಮೇನ್ ರೋಡ್ ಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು.

ಕೆ.ಆರ್.ಪುರಂ ವಿಭಾಗ ವ್ಯಾಪ್ತಿಯಲ್ಲಿಐಟಿಐ ಮೇನ್ ರಸ್ತೆ ಮೇನ್ ಗೇಟ್ ಇಂದ ಕೆಆರ್ ಪುರಂ ಎಕ್ಸೆಂಶನ್ ವೆಂಗಯ್ಯನ ಕೆರೆ ರೋಡ್, ಕೆಆರ್ ಪುರಂ ಮಾರ್ಕೆಟ್ ಇಂದ ತಾಲೂಕ ಆಫೀಸ್ ರೋಡ್, ಟಿಸಿ ಪಾಳ್ಯ ಬಸ್ ಸ್ಟಾಪ್ ಇಂದ ಅಣ್ಣಪ್ಪ ಸರ್ಕಲ್ ಆನಂದಪುರ ಸರ್ಕಲ್, ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಮೀನಾಕ್ಷಮ್ಮ ದೇವಸ್ಥಾನ, ಆನಂದಪುರ ಸರ್ಕಲ್ ಇಂದ ಬಿ ಡಬ್ಲ್ಯೂ ಎಸ್ ಎಸ್ ಬಿ ಮೇನ್ ರೋಡ್ ವರೆಗೆ ಕಾರ್ಯಾಚರಣೆ ನಡೆಸಲಾಗುವುದು.

ಸಾರ್ವಜನಿಕರಲ್ಲಿ ಮನವಿ

ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪಾದಚಾರಿ ಮಾರ್ಗಗಳು ಮತ್ತು ರಸ್ತೆ ಬದಿಗಳಲ್ಲಿ ಅಕ್ರಮವಾಗಿ ಮಳಿಗೆಗಳು, ತಳ್ಳುಗಾಡಿಗಳು,  ವಸ್ತುಗಳನ್ನು ಇಡುವುದನ್ನು ನಿಲ್ಲಿಸುವಂತೆ, ಹಾಗೂ ಸ್ವಯಂಪ್ರೇರಿತವಾಗಿ ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ನಗರ ಪಾಲಿಕೆಗೆ ಸಹಕರಿಸುವಂತೆ ಅಪರ ಆಯುಕ್ತರು ಮನವಿ ಮಾಡಿದರು. ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಆಯುಕ್ತರು ಎಚ್ಚರಿಸಿದರು.


Share

You cannot copy content of this page