ಸಮಗ್ರ ಸುದ್ದಿ

ಭವಿಷ್ಯದ ಆರೋಗ್ಯ ವಲಯ ಎಐ, ಕ್ವಾಂಟಮ್‌ ಕಂಪ್ಯೂಟಿಂಗ್‌ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅವಲಂಬಿಸಿದೆ: ಸಚಿವ ಎನ್‌ ಎಸ್‌ ಭೋಸರಾಜು

Share

ಬೆಂಗಳೂರು: ಭವಿಷ್ಯದ ಆರೋಗ್ಯ ವಲಯವು ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಡೇಟಾ ಸೈನ್ಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ‘ಕ್ವಾಂಟಮ್ ಸಿಟಿ’ ನಿರ್ಮಿಸುವ ಮಹತ್ವಾಕಾಂಕ್ಷೆ ಹೊಂದಿದ್ದು, ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಆರೋಗ್ಯವೇ ಭಾಗ್ಯ. ರೋಗಮುಕ್ತ ಹಾಗೂ ಆರೋಗ್ಯವಂತ ಸಮಾಜ ಮಾತ್ರ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. ಇಂದು ಭಾರತವು ಏಷ್ಯಾ ಮಾತ್ರವಲ್ಲದೆ ಜಗತ್ತಿನ ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿ ಹೊರಹೊಮ್ಮಿದೆ. ನಮ್ಮ ವೈದ್ಯರು, ವಿಜ್ಞಾನಿಗಳು ಮತ್ತು ಫಾರ್ಮಾ ವಲಯದ ಪರಿಣತಿಯಿಂದಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ರಾಷ್ಟ್ರಗಳ ರೋಗಿಗಳು ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಜಗತ್ತಿಗೆ ಲಸಿಕೆ ಹಾಗೂ ಔಷಧಿಗಳನ್ನು ಪೂರೈಸುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಾಗತಿಕವಾಗಿ ಸಾಬೀತುಪಡಿಸಿದೆ,” ಎಂದು ಸಚಿವರು ಶ್ಲಾಘಿಸಿದರು.

“ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ, ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮತ್ತು ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು ಎಐ ಹಾಗೂ ರೊಬೊಟಿಕ್ಸ್ ನೆರವಾಗುತ್ತಿವೆ. ಔಷಧಿಗಳ ಸಂಶೋಧನೆಯನ್ನು ವೇಗಗೊಳಿಸಲು ಮತ್ತು ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ವಿಧಾನ (Personalised medicine) ಒದಗಿಸಲು ಕ್ವಾಂಟಮ್ ಕಂಪ್ಯೂಟಿಂಗ್ ನಿರ್ಣಾಯಕ ಪಾತ್ರ ವಹಿಸಲಿದೆ. ಔಷಧ ಸಂಶೋಧನೆಗಾಗಿ ದೇಶದ ಮೊದಲ ಸ್ವದೇಶಿ ಕ್ವಾಂಟಮ್ ಕಂಪ್ಯೂಟರ್ ಹೊಂದಿರುವ ಹೆಗ್ಗಳಿಕೆ ಬೆಂಗಳೂರಿನದ್ದಾಗಿದೆ. ಕ್ಯುಪಿಐ-ಎಐ (QpiAi) ಮತ್ತು ಕ್ವಾಂಟಮ್ ಬಯೋಸೈನ್ಸಸ್‌ನಂತಹ (Quantum Biosciences) ನವೋದ್ಯಮಗಳು ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ,” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ‘ಕ್ವಾಂಟಮ್ ಸಿಟಿ’ ನಿರ್ಮಿಸುವ ಗುರಿ ಹೊಂದಿದೆ. ಈ ಕ್ವಾಂಟಮ್ ಸಿಟಿಯಲ್ಲಿ ಆರೋಗ್ಯ ವಲಯದ ಸಂಶೋಧನೆಗಾಗಿಯೇ ಪ್ರತ್ಯೇಕ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ವಿಜ್ಞಾನಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಸಂಸ್ಥೆಗಳು ಇಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲು ವೇದಿಕೆ ಕಲ್ಪಿಸಲಾಗುವುದು. ಈ ಅತ್ಯಾಧುನಿಕ ಆರೋಗ್ಯ ಮತ್ತು ಸಂಶೋಧನಾ ವ್ಯವಸ್ಥೆಯನ್ನು ಕಟ್ಟುವಲ್ಲಿ ಕೈಜೋಡಿಸುವಂತೆ ಉದ್ಯಮ ವಲಯವನ್ನು ಆಹ್ವಾನಿಸುತ್ತೇನೆ,” ಎಂದು ಸಚಿವರು ತಿಳಿಸಿದರು.

“ತಂತ್ರಜ್ಞಾನ ಕೇವಲ ನಗರಗಳಿಗೆ ಸೀಮಿತವಾಗಬಾರದು. ಗ್ರಾಮೀಣ ಭಾಗದಲ್ಲಿ ಈಗಲೂ ಅಪೌಷ್ಟಿಕತೆ, ಟಿಬಿ, ಮಲೇರಿಯಾ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳಿವೆ. ನನ್ನ ತವರು ಜಿಲ್ಲೆ ರಾಯಚೂರಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ‘ಪೆರಿಫೆರಲ್ ಕ್ಯಾನ್ಸರ್ ಸೆಂಟರ್’ (Peripheral Cancer Centre) ಪ್ರಾರಂಭಿಸಿದ್ದೇವೆ. ಅಪೌಷ್ಟಿಕತೆ ಕುರಿತು ಅಧ್ಯಯನ ನಡೆಸಲು ರಾಯಚೂರು ವಿಶ್ವವಿದ್ಯಾಲಯದಲ್ಲಿ ‘ಜೀನೋಮ್ ಲ್ಯಾಬ್’ (Genome Lab) ಸ್ಥಾಪಿಸಲಾಗಿದೆ.
ಇಡೀ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ವಲಯದ ಚಿತ್ರಣವನ್ನೇ ಬದಲಿಸಬಲ್ಲ ‘ಏಮ್ಸ್’ (AIIMS) ಆಸ್ಪತ್ರೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ನಮ್ಮ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ,” ಎಂದು ಅವರು ಮಾಹಿತಿ ನೀಡಿದರು.

“ಸರ್ಕಾರವೊಂದೇ ಆರೋಗ್ಯ ವಲಯದಲ್ಲಿ ಸಂಪೂರ್ಣ ಬದಲಾವಣೆ ತರಲು ಸಾಧ್ಯವಿಲ್ಲ. ಗ್ರಾಮೀಣ ಭಾರತದ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಲು ಆಸ್ಪತ್ರೆಗಳು, ವೈದ್ಯರು ಮತ್ತು ತಂತ್ರಜ್ಞಾನ ತಜ್ಞರು ತಮ್ಮ ಸಮಯ ಹಾಗೂ ಸಂಪನ್ಮೂಲದ ಒಂದು ಭಾಗವನ್ನು ಮೀಸಲಿಡಬೇಕು. ನಿಮ್ಮ ಸಣ್ಣ ಕೊಡುಗೆಯೂ ದೊಡ್ಡ ಬದಲಾವಣೆ ತರಬಲ್ಲದು,” ಎಂದು ಸಚಿವರು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಗಣ್ಯರು, ತಂತ್ರಜ್ಞಾನ ತಜ್ಞರು, ಉದ್ಯಮಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.


Share

You cannot copy content of this page