ಸಮಗ್ರ ಸುದ್ದಿ

ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು, ಕೊಟ್ಟಿರುವ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟೋಕ್ತಿ|ಕನ್ನಡಿಗರು, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಎಂಬುದೇ ಸರ್ಕಾರದ ಉದ್ದೇಶ

Share

ಬೆಂಗಳೂರು:ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು, ನಮ್ಮ ಸರ್ಕಾರ ಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ವೈದೇಹಿ ಆಸ್ಪತ್ರೆ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡುತ್ತಿವೆಯಲ್ಲ ಎಂದು ಕೇಳಿದಾಗ, “ಅವರುಗಳಿರುವುದೇ ಟೀಕೆ ಮಾಡಲು. ನಾವು ಏನೇ ಒಳ್ಳೆಯದು ಮಾಡಲು ಮುಂದಾದರೂ ಅದಕ್ಕೆ ಅಡ್ಡಗಾಲು ಹಾಕುವುದಕ್ಕೆ ವಿರೋಧ ಪಕ್ಷಗಳಿರುವುದು. ಅವರ ಕೈಯಲ್ಲಿ ಆಗದಿದ್ದ ಕೆಲಸ ನಾವು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಆರಂಭದಲ್ಲಿ ಕೆಲವು ಫಲಾನುಭವಿಗಳು ಬೇರೆಯವರ ದೂರವಾಣಿ ಸಂಖ್ಯೆ ಹಾಗೂ ಇತರೆ ಮಾಹಿತಿ ನೀಡಿದ್ದಾರೆ. ಬೇರೆಯವರ ಖಾತೆಗೆ ಹಣ ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಫಲಾನುಭವಿಗಳ ಖಾತೆಗೆ ಹಣ ಹೋಗುವಂತೆ ಮಾಡುವುದು ಸರ್ಕಾರದ ಉದ್ದೇಶ” ಎಂದು ತಿಳಿಸಿದರು.

“ಸರ್ಕಾರವು ಕರ್ನಾಟಕದವರಿಗೆ ಈ ಯೋಜನೆ ನೀಡುತ್ತಿದ್ದು, ಅನ್ಯ ರಾಜ್ಯದವರಿಗೆ ಈ ಯೋಜನೆ ನೀಡುವುದಿಲ್ಲ. ಉಚಿತ ವಿದ್ಯುತ್ ಅನ್ನು ನಮ್ಮ ರಾಜ್ಯದ ಮತದಾರರಿಗೆ ನೀಡಬೇಕೇ ಹೊರತು, ಬೇರೆ ರಾಜ್ಯದವರಿಗೆ ಯಾಕೆ ಕೊಡಬೇಕು? ಹೀಗಾಗಿ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದೇವೆ. ಆ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ನಮ್ಮ ಗ್ಯಾರಂಟಿ ದೇಶಕ್ಕೆ ಮಾದರಿ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳು ನಮ್ಮ ಮಾದರಿ ಅನುಸರಿಸಿವೆ” ಎಂದು ತಿಳಿಸಿದರು.

ಯೋಜನೆ ಹಣ ನಕಲಿ ಫೈನಾನ್ಸ್ ಯೋಜನೆಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುತ್ತೇವೆ

“ಕೆಲವರು ಗೃಹಲಕ್ಷ್ಮಿ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ಬೆಳಗಾವಿಯ ಪ್ರಕರಣವನ್ನು ನೋಡಿದ್ದೇವಲ್ಲ. ಇದಕ್ಕಾಗಿ ಗ್ರಾಮ ಪಂಚಾಯ್ತಿಯಿಂದ ತಾಲ್ಲೂಕು ಪಂಚಾಯ್ತಿವರೆಗೆ ಎಲ್ಲೆಲ್ಲಿ ಇಂತಹ ಸ್ಕೀಂಗಳಿವೆ ಅವುಗಳಿಗೆ ಕಡಿವಾಣ ಹಾಕಲು ನಾವು ನಿರ್ದೇಶನ ನೀಡಿದ್ದೇವೆ. ನಮ್ಮ ಹೃದಯದಿಂದ ಕೊಟ್ಟ ಯೋಜನೆಗಳಿವು. ಹೆಣ್ಣು ಕುಟುಂಬದ ಕಣ್ಣು ಎಂದು ಅವರಿಗೆ ಆರ್ಥಿಕ ಶಕ್ತಿ ಸಿಗಬೇಕು, ಅವರ ಮನೆಗಳು ಬೆಳಗಬೇಕು ಎಂದು ನೀಡಲಾಗಿದೆ. ವಿರೋಧ ಪಕ್ಷಗಳು ಹೀಗೆ ಮಾತನಾಡುತ್ತಿರಲಿ” ಎಂದು ಕಿಡಿ ಕಾರಿದರು.

ಬಿಜೆಪಿ ಸರ್ಕಾರ 1 ಸಾವಿರ ಎಕರೆ ಸ್ವಾಧೀನ ಮಾಡಿಕೊಂಡಾಗ ಯಾಕೆ ಸುಮ್ಮನಿದ್ದರು?

ಬಿಡದಿ ಪಾದಯಾತ್ರೆ ಬಗ್ಗೆ ಕೇಳಿದಾಗ, “ನಾನು ಯಾರ್ಯಾರೋ ಮಾತಿಗೆ ಉತ್ತರ ನೀಡಲು ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ 90 ಸಾವಿರ ಎಕರೆ, ತೆಲಂಗಾಣದಲ್ಲಿ 40 ಸಾವಿರ ಎಕರೆಯಲ್ಲಿ ಟೌನ್ ಶಿಪ್ ಮಾಡುತ್ತಿದ್ದಾರೆ. ಬಿಡದಿಯದು ನನ್ನ ಯೋಜನೆಯಲ್ಲ. ಕುಮಾರಸ್ವಾಮಿ ಅವರು ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರ ಈ ಜಾಗದಲ್ಲಿ 1 ಸಾವಿರ ಎಕರೆಯನ್ನು ಕೆಐಎಡಿಬಿಗೆ ಸ್ವಾಧೀನ ಪಡಿಸಿಕೊಟ್ಟಾಗ ಇವರು ಯಾಕೆ ಯಾಕೆ ಸುಮ್ಮನಿದ್ದರು? ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮಾಡಿದ್ದು ಯಾರು? ಆಗ ರೈತರನ್ನು ಕಳುಹಿಸಲಿಲ್ಲವೇ? ಇಲ್ಲಿ ರೈತರು ಜಮೀನು ನೀಡಲು ಮುಂದಾಗಿದ್ದಾರೆ. ಆದರೆ ಇವರಿಗೆ ರಾಜಕಾರಣ ಮಾಡಬೇಕು, ಮಾಡುತ್ತಿದ್ದಾರೆ” ಎಂದು ಹರಿಹಾಯ್ದರು.

ಶಾಸಕ ಇಕ್ಬಾಲ್ ಆರೋಗ್ಯವಾಗಿದ್ದಾರೆ, ಗಾಬರಿ ಬೇಡ

“ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನಿನ್ನೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ವೈದ್ಯರು ಪರಿಶೀಲನೆ ಮಾಡಿದ್ದಾರೆ. ಅವರು ಆರೋಗ್ಯವಾಗಿದ್ದು, ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ಸಂಪೂರ್ಣ ಪರೀಕ್ಷೆಗೆ ನಾವು ವೈದ್ಯರೊಂದಿಗೆ ಚರ್ಚೆ ಮಾಡಿದ್ದೇವೆ. ಎಡಗೈ ಸೆಳೆತ ಬಂದಿದ್ದು, ಮುನ್ನೆಚ್ಚರಿಕೆಯಾಗಿ ಆಸ್ಪತ್ರೆ ಸೇರಿದ್ದಾರೆ” ಎಂದು ಮಾಹಿತಿ ನೀಡಿದರು.

ವೈದ್ಯರು ಸರ್ಜರಿಗೆ ಸಲಹೆ ನೀಡಿದ್ದಾರಂತೆ ಎಂದು ಕೇಳಿದಾಗ, “ಅವರ ಆರೋಗ್ಯ ಸುಧಾರಣೆಗೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತಾರೆ” ಎಂದು ತಿಳಿಸಿದರು.


Share

You cannot copy content of this page