ಬೆಂಗಳೂರು: ರಾಜಧಾನಿಯ ಕಲಾಭಿಮಾನಿಗಳಿಗೆ ಮತ್ತು ಉದಯೋನ್ಮುಖ ಗಾಯಕರಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನ’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಪರಮ್ ಕಲ್ಚರ್’ ಸಂಸ್ಥೆಯು ‘ಹರಿವಂಶ ಗ್ರೂಪ್’ ಸಹಯೋಗದೊಂದಿಗೆ ಜಯನಗರದ ಯುವಕ ಸಂಘದಲ್ಲಿ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಒಟ್ಟು 45 ಮಂದಿ ಗಾಯನ ಆಸಕ್ತರು ಭಾಗವಹಿಸಿ, ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.
ಜಾಗತಿಕ ಮಟ್ಟದಲ್ಲಿ ಭಕ್ತಿ ಸಂಗೀತದ ಮೂಲಕ ಸನ್ಸೇಷನ್ ಸೃಷ್ಟಿಸಿರುವ ಖ್ಯಾತ ಯುವ ಶಾಸ್ತ್ರೀಯ ಗಾಯಕಿ, ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತೆ ಸೂರ್ಯಗಾಯತ್ರಿ ಅವರು ಜೂನ್ 12 ಮತ್ತು 13ರಂದು ನಡೆದ ಈ ಕಾರ್ಯಾಗಾರವನ್ನು ಮುನ್ನಡೆಸಿದರು.
ನೇರ ಕಲಿಕೆಯ ಅಪೂರ್ವ ಅನುಭವ:
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 45 ಆಸಕ್ತರಿಗೆ ಸೂರ್ಯಗಾಯತ್ರಿ ಅವರಿಂದ ನೇರವಾಗಿ ಭಜನೆಗಳು, ದಾಸರಪದಗಳು ಮತ್ತು ಅಭಂಗ್ಗಳನ್ನು ಕಲಿಯುವ ಸುವರ್ಣಾವಕಾಶ ಸಿಕ್ಕಿತು. ಒಟ್ಟು 4 ಗಂಟೆಗಳ ಕಾಲ ನಡೆದ ಈ ನೇರ ಕಲಿಕಾ ಸರಣಿಯಲ್ಲಿ, ಗಾಯಕಿ ಸೂರ್ಯಗಾಯತ್ರಿ ಅವರು ತಮ್ಮ ಕಲಾ ಜರ್ನಿ ಮತ್ತು ಭಕ್ತಿ ಸಂಗೀತದ ಅನುಭವಗಳನ್ನು ಹಂಚಿಕೊಂಡರು.
ಭಾಗವಹಿಸಿದ ಎಲ್ಲರಿಗೂ ಕಲಿಕೆಗೆ ಅಗತ್ಯವಿರುವ ವಿಶೇಷ ಸಾಹಿತ್ಯ ಹಾಗೂ ನೋಟ್ಸ್ಗಳನ್ನು ವಿತರಿಸಲಾಯಿತು.
ವೇದಿಕೆ ಹಂಚಿಕೊಂಡ ಶಿಬಿರಾರ್ಥಿಗಳು:
ಈ ಕಾರ್ಯಾಗಾರವು ಕೇವಲ ಕಲಿಕೆಗೆ ಸೀಮಿತವಾಗಿರದೆ, ಶಿಬಿರಾರ್ಥಿಗಳಿಗೆ ದೊಡ್ಡ ವೇದಿಕೆಯನ್ನೂ ಕಲ್ಪಿಸಿಕೊಟ್ಟಿತ್ತು. ಕಾರ್ಯಾಗಾರದಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ ಕಲಾಭಿಮಾನಿಗಳಿಗೆ ಜೂನ್ 14ರ ಭಾನುವಾರ ಸಂಜೆ 5 ಗಂಟೆಗೆ ಮೀನಾಕ್ಷಿ ರಂಗಮಂಚದಲ್ಲಿ ನಡೆದ ಭವ್ಯ ಲೈವ್ ಕನ್ಸರ್ಟ್ನಲ್ಲಿ ಸೂರ್ಯಗಾಯತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಬಂಪರ್ ಚಾನ್ಸ್ ಲಭ್ಯವಾಗಿತ್ತು.
ಇತ್ತೀಚೆಗಷ್ಟೇ ಅಮೆರಿಕದ 29 ನಗರಗಳ ಯಶಸ್ವಿ ಪ್ರವಾಸ ಮುಗಿಸಿ ಬಂದಿರುವ ಸೂರ್ಯಗಾಯತ್ರಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾರ್ಯಾಗಾರವು ಬೆಂಗಳೂರಿನ ಸಂಗೀತ ಆಸಕ್ತರಲ್ಲಿ ಹೊಸ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.
