ಬೆಂಗಳೂರು: ಸಿನಿಮಾಟೋಗ್ರಾಫ್ ಆ್ಯಕ್ಟ್ ಸಾಕಷ್ಟು ಬದಲಾವಣೆಗಳೊಂದಿಗೆ ಈಗ ಜಾರಿಗೊಂಡಿದೆ.
ಶಾಸನಬದ್ಧವಾಗಿ ಜಾರಿಗೊಂಡಿರುವ ಎಲ್ಲ ಕಾನೂನುಗಳನ್ನು ಪಾಲಿಸುವುದರೊಂದಿಗೆ ಕನ್ನಡ ಚಿತ್ರರಂಗದ ಉತ್ತೇಜನಕ್ಕೆ ಬೇಕಾದ ಸದ್ಯದ ತುರ್ತು ಕ್ರಮಗಳೇನು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಿಬಿಎಫ್ಸಿ ಸದಸ್ಯ, ಹಿರಿಯ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯ ಪಟ್ಟರು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ) ಪ್ರಾದೇಶಿಕ ಕಚೇರಿಯು ಇಲ್ಲಿನ ಮಲ್ಲೇಶ್ವರಂನ ಎಸ್ಆರ್ವಿ ಥೇಟರಿನಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಚಿತ್ರೋದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳು,ಮಾಧ್ಯಮಗಳ ಸವಾಲನ್ನು ಚಿತ್ರರಂಗ ಹೇಗೆ ಎದುರಿಸಬೇಕು.ಈ ಎಲ್ಲ ಸವಾಲುಗಳ ಮಧ್ಯೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಚಲನಚಿತ್ರಗಳಿಗೆ ಇರುವ ಜವಾಬ್ದಾರಿಗಳನ್ನು ಸೃಜನಶೀಲ ಸಿನೆಮಾ ನಿರ್ಮಾತೃಗಳು ಅರಿಯಬೇಕು. ಮೂಕ ಮತ್ತು ಕಿವುಡರಿಗೆ ಅನೇಕ ಸೌಕರ್ಯಗಳನ್ನು ಸಿನೆಮಾ ಹಾಗೂ ಸಿನೆಮಾ ಮಂದಿರಗಳು ಅಳವಡಿಸಿಕೊಳ್ಳಬೇಕು. ದೃಷ್ಟಿ ವಿಕಲಚೇತನರಿಗಾಗಿ ಬ್ರೈಲ್ ಬಳಕೆ ಬಗ್ಗೆ ನ್ಯಾಯಾಲಯದ ನಿರ್ದೇಶನಗಳು ಬಂದಿವೆ. ಅಂತಹ ಸಮುದಾಯಗಳನ್ನು ಒಳಗೊಳ್ಳಲು ನಾವೆಲ್ಲ ಒಟ್ಟಾಗಿ ಹೆಜ್ಜೆ ಇರಿಸಬೇಕು ಎಂದರು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ) ಅಧ್ಯಕ್ಷ ಶಶಿಶೇಖರ್ ವೇಂಪಾಟಿ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಅರಿಯಲು ಇಂದು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರಿಂದ ಅರ್ಥಪೂರ್ಣ ಸಲಹೆಗಳನ್ನು ಪಡೆದು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ಚಿತ್ರೋದ್ಯಮದ ಸಂಕಷ್ಟಗಳ ಕುರಿತು ನಿರ್ಮಾಪಕ ಕೃಷ್ಣೇಗೌಡ, ಹಿರಿಯ ನಟ ಎಂ.ಕೆ.ಸುಂದರರಾಜನ್, ಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ನಟ, ನಿರ್ಮಾಪಕ ಡಾಲಿ ಧನಂಜಯ್, ತರುಣ್ ಸುಧೀರ್ ,ಪ್ರಮೀಳಾ ಕುಲಕರ್ಣಿ,ವಿಶ್ವನಾಥ ಎನ್ ಆರ್ ಕೆ ಮತ್ತಿತರರು ಸಂವಾದದಲ್ಲಿ ಮಾತನಾಡಿ,
ಗ್ರಾಮೀಣ ಪರಿಸರದ ಚಿತ್ರವೊಂದನ್ನು ಚಿತ್ರೀಕರಣ ಮಾಡುವಾಗ ದನ-ಕರುಗಳು, ಅವುಗಳ ಹಾಲು ಕರೆಯುವುದು ಸಹಜವಾಗಿ ದೃಶ್ಯಗಳಲ್ಲಿ ಬರುತ್ತದೆ. ಇಂತಹ ನೀತಿಗಳನ್ನು ಜಾರಿಗೊಳಿಸುವ ಮುನ್ನ ಸಂಬಂಧಿಸಿದ ಕ್ಷೇತ್ರದ ಜನರೊಂದಿಗೆ ಚರ್ಚಿಸಿ, ಸಲಹೆ ಪಡೆಯಬೇಕಾಗಿತ್ತು. ಪ್ರಾಣಿ- ಪಕ್ಷಿಗಳನ್ನು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳದಿದ್ದರೆ ಕತೆಯಲ್ಲಿ ಮುಖ್ಯವಾಗಿ ಕಂಡು ಬರದಿದ್ದರೆ ಅಂತಹ ಚಿತ್ರಗಳಿಗೆ ಪ್ರಾಣಿ ಕಲ್ಯಾಣ ಮಂಡಳಿಯ ಅನುಮತಿ ಪಡೆಯುವದರಿಂದ ವಿನಾಯಿತಿ ನೀಡಬೇಕು, ಎಲ್ಲ ಚಲನಚಿತ್ರಗಳಿಗೆ ಎಡಿಸಿಸಿ ಪಡೆಯುವುದನ್ನು ಕಡ್ಡಾಯಗೊಳಿಸಿರುವುದು ಚಿತ್ರ ನಿರ್ಮಾಪಕರಿಗೆ ಹೊರೆಯಾಗಿದೆ ಎಂದು ಹಲವರು ಒತ್ತಾಯಿಸಿದರು.
ಸಿನೆಮಾ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯು ಯಾವ ಹಂತದಲ್ಲಿ ತಿಳಿಯುವ ಸೌಕರ್ಯ ಒದಗಿಸಬೇಕು ಎಂಬ ಅಭಿಪ್ರಾಯಗಳನ್ನು ಸಿಬಿಎಫ್ಸಿ ಅಧ್ಯಕ್ಷರಿಗೆ ತಿಳಿಸಿದರು.ಆದ್ಯತೆಯ ಮೇಲೆ ಚಲನಚಿತ್ರಗಳಿಗೆ ಪ್ರಮಾಣೀಕರಣ ನೀಡುವ ಅಗತ್ಯತೆ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆಗಳಾದವು.
ಸಿಬಿಎಫ್ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರಸಿಂಗ್, ಬೆಂಗಳೂರು ಪ್ರಾದೇಶಿಕ ಅಧಿಕಾರಿ ಯಶವಂತ್ ಶಹನಾಯ್ ಮತ್ತಿತರರು ವೇದಿಕೆಯಲ್ಲಿದ್ದರು.
