ಸಮಗ್ರ ಸುದ್ದಿ

ಸಾಧನೆಯ ಹಾದಿ ಸುಲಭದ್ದಲ್ಲ, ತಯಾರಿ ಕಠಿಣವಾಗಿರಲಿ: ಡಿಸಿಪಿ ಹರ್ಷ ಪ್ರಿಯಂವದ

Share

ಮೈಸೂರು:ಸಾಧನೆಯ ಹಾದಿ ಸುಲಭದ್ದಲ್ಲ; ಕಷ್ಟಪಟ್ಟು ಶ್ರಮಿಸಿದರೆ ಮಾತ್ರ ಉದ್ಯೋಗ ಪಡೆಯಲು ಸಾಧ್ಯ. ಪದವಿ ಮುಗಿಯುವ ಮುನ್ನವೇ ನಾವು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟತೆ ಇರಬೇಕು. ಮೊದಲ ಬಾರಿ ವಿಫಲರಾದರೂ ಧೃತಿಗೆಡದೆ, ಕ್ರಮಬದ್ಧ ಅಧ್ಯಯನ ಮುಂದುವರಿಸಿದರೆ ಯಶಸ್ಸು ಖಂಡಿತ ಎಂದು ಮೈಸೂರು ನಗರ ಪೊಲೀಸ್ ಉಪ ಆಯುಕ್ತೆ (ಡಿಸಿಪಿ) ಡಾ. ಹರ್ಷ ಪ್ರಿಯಂವದ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕರಾಮುವಿ) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಇಲ್ಲಿನ ಗಂಗಾ ಸಭಾಂಗಣದಲ್ಲಿ ಆಯೋಜಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದಿನಪತ್ರಿಕೆಗಳ ಓದು ಮತ್ತು ನಿರಂತರ ಅಧ್ಯಯನ ಅಗತ್ಯ. ಕಾರ್ಯಕ್ರಮದಲ್ಲಿ ತಮ್ಮ ಯಶಸ್ಸಿನ ಹಾದಿಯನ್ನು ನೆನಪಿಸಿಕೊಂಡ ಡಾ. ಹರ್ಷ ಪ್ರಿಯಂವದ ಅವರು, “ನನ್ನ ತಂದೆ-ತಾಯಿ ಇಬ್ಬರೂ ವೈದ್ಯರಾಗಿದ್ದರಿಂದ ನಾನು ವೈದ್ಯಕೀಯ ಕ್ಷೇತ್ರ ಆರಿಸಿಕೊಳ್ಳಬೇಕೆಂಬ ಆಸೆ ಅವರದಾಗಿತ್ತು. ಆದರೆ, ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಲವಿದ್ದಿದ್ದರಿಂದ ಯುಪಿಎಸ್ಸಿ ಪರೀಕ್ಷೆಗೆ ಪೂರ್ಣ ಸಿದ್ಧತೆ ನಡೆಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮ ಬದುಕನ್ನೇ ಬದಲಿಸುತ್ತವೆ. ಇವುಗಳನ್ನು ಎದುರಿಸುವ ವಿದ್ಯಾರ್ಥಿಗಳು ನಿಗದಿತ ವಿಷಯಗಳ ಜೊತೆಗೆ ನಿಯಮಿತವಾಗಿ ದಿನಪತ್ರಿಕೆಗಳನ್ನು ಓದಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಪುಸ್ತಕಗಳು ಲಭ್ಯವಿದ್ದು, ಅವುಗಳನ್ನು ಓದಿ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಜ್ಞಾನದ ಹರವನ್ನು ವಿಸ್ತರಿಸಿಕೊಳ್ಳಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂದು ಅವರು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು.

ಪಠ್ಯದ ಜೊತೆಗೆ ಜ್ಞಾನವ ಗಳಿಸಿ, ಸೋಲಿಗೆ ಹೆದರದೆ ಛಲವನ್ನು  ಬೆಳೆಸಿ; ಕ್ರಮಬದ್ಧ ಅಧ್ಯಯನ ನಿರಂತರವಿರಲಿ, ಶ್ರಮದ ಹಾದಿಯಲಿ ಯಶಸ್ಸು ಸಿಗಲಿ ಎಂದು ಡಾ.ಹರ್ಷ ಪ್ರಿಯಂವದ ಹೇಳಿದರು.

ಕಾರ್ಯಕ್ರಮದಲ್ಲಿ ‘ಮುಕ್ತಭಂಡಾರ’ ಎಂಬ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು, ಇಂತಹ ತರಬೇತಿ ಶಿಬಿರಗಳು ಎಲ್ಲಾ ವಿಷಯಗಳ ಸಮಗ್ರ ಅಧ್ಯಯನಕ್ಕೆ ಉತ್ತಮ ವೇದಿಕೆಯಾಗಲಿವೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಹೀಗೆ ಯಾವುದೇ ವಿಭಾಗದ ಹಿನ್ನೆಲೆಯುಳ್ಳವರಿಗೂ ಇದು ಸಹಕಾರಿಯಾಗಿದೆ. ಇದು ಕೇವಲ ಪರೀಕ್ಷೆಗಳಷ್ಟೇ ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಾಗ ಸಾಮಾಜಿಕ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಲು ಇಂತಹ ಅಧ್ಯಯನಗಳು ಪೂರಕವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿಯನ್ನು ಹೊಂದಿರಬೇಕು. ತಾವು ಏನನ್ನು ಸಾಧಿಸಬೇಕೆಂದು ಕೊಂಡಿದ್ದಾರೋ, ಅದನ್ನು ಮನಸ್ಸಿನಲ್ಲಿ ದೃಢವಾಗಿ ಸಂಕಲ್ಪಿಸಿ ಶ್ರದ್ಧೆಯಿಂದ ತಯಾರಿ ನಡೆಸಬೇಕು” ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕರಾಮುವಿ ಪರೀಕ್ಷಾಂಗ ಕುಲಸಚಿವ ಡಾ. ಸಿ.ಎಸ್. ಆನಂದಕುಮಾರ್, ಹಣಕಾಸು ಅಧಿಕಾರಿ ಡಾ. ಎಸ್. ನಿರಂಜನ್ ರಾಜ್, ಡಾ. ಶೈಲೇಶ ರಾಜ್ ಅರಸ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು ಹಾಗೂ ಬಿ. ಗಣೇಶ್ ಕೆ.ಜಿ. ಕೊಪ್ಪಲು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


Share

You cannot copy content of this page