ಬೆಂಗಳೂರು : ಕರ್ನಾಟಕದಲ್ಲಿ ಮಾವು ಬೆಳೆಗಾರರ ಹಿತರಕ್ಷಣೆಯನ್ನು ಕಾಯುವ ಉದ್ದೇಶದಿಂದ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ (PDPS) ತೋತಾಪುರಿ ಮಾವು ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ನಿರ್ಧರಿಸಿದೆ. 2026-27ನೇ ಸಾಲಿನಲ್ಲಿ ಈ ಯೋಜನೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಖರೀದಿ ಮಿತಿ ಮತ್ತು ಮಾರುಕಟ್ಟೆ ಮಧ್ಯಪ್ರವೇಶ ದರ (MIP)
ನಿಗದಿತ ದರ: ತೋತಾಪುರಿ ಮಾವು ಖರೀದಿಸಲು ಪ್ರತಿ ಕ್ವಿಂಟಾಲ್ಗೆ ರೂ. 1,750/- ಗಳ ಮಾರುಕಟ್ಟೆ ಮಧ್ಯಪ್ರವೇಶ ದರವನ್ನು (MIP) ನಿಗದಿಪಡಿಸಲಾಗಿದೆ.ಖರೀದಿ ಪ್ರಮಾಣ: ಯೋಜನೆಯಡಿಯಲ್ಲಿ ಒಟ್ಟು 1,30,000 ಮೆಟ್ರಿಕ್ ಟನ್ ಪ್ರಮಾಣದ ತೋತಾಪುರಿ ಮಾವನ್ನು ಖರೀದಿಸುವ ಗುರಿ ಹೊಂದಲಾಗಿದೆ.
ದರದ ಮಿತಿ:
ಮಾರುಕಟ್ಟೆ ಮಧ್ಯಪ್ರವೇಶ ದರ (MIP) ಮತ್ತು ಪ್ರಚಲಿತ ಮಾರುಕಟ್ಟೆ ಧಾರಣೆಯು ಶೇ. 25 ರ ಮಿತಿಗೊಳಪಟ್ಟಿರತಕ್ಕದ್ದು.
ರೈತರ ಮಿತಿ:
ಯೋಜನೆಯಡಿ ಪ್ರತಿ ಎಕರೆಗೆ 40 ಕ್ವಿಂಟಾಲ್ನಂತೆ, ಗರಿಷ್ಟ 5 ಎಕರೆಗೆ ಸೀಮಿತಗೊಳಿಸಿ, ಗರಿಷ್ಠ 200 ಕ್ವಿಂಟಾಲ್ಗಳಿಗೆ ಮಾತ್ರ ವ್ಯತ್ಯಾಸದ ಮೊತ್ತವನ್ನು ನೀಡಲಾಗುತ್ತದೆ.
ಅನುಷ್ಠಾನದ ಸಂಸ್ಥೆಗಳು ಮತ್ತು ಸ್ಥಳಗಳು ಅನುಷ್ಠಾನ ಸಂಸ್ಥೆ
ಈ ಯೋಜನೆಯನ್ನು ತೋಟಗಾರಿಕೆ ಇಲಾಖೆಯ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಸಂಸ್ಥೆಯ ಮುಖಾಂತರ ಅನುಷ್ಠಾನ ಗೊಳಿಸಲಾಗುತ್ತಿದೆ.
ಖರೀದಿ ಕೇಂದ್ರಗಳು: ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC), ಮಾರುಕಟ್ಟೆ ಉಪ ಪ್ರಾಂಗಣ/ಉಪ ಮಾರುಕಟ್ಟೆ, ಡಿ.ಪಿ.ಸಿ (DPC) ಹಾಗೂ ಕೃಷಿ ಮಾರಾಟ ಇಲಾಖೆಯಿಂದ ಘೋಷಿಸುವ ಮಾವು ಸಂಸ್ಕರಣಾ ಘಟಕಗಳ ಮೂಲಕ ಯೋಜನೆಯನ್ನು ಜಾರಿಗೊಳಿಸಲಾಗುವುದು.
*ಮೇಲುಸ್ತುವಾರಿ **:
ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆ, ಕೃಷಿ ಮಾರಾಟ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ ಒಂದು ವಿಶೇಷ ತಂಡವನ್ನು ರಚಿಸಿ, ಈ ಯೋಜನೆಯ ಮೇಲುಸ್ತುವಾರಿ ಮತ್ತು ಅನುಷ್ಠಾನವನ್ನು ನಿರ್ವಹಿಸಲಿದ್ದಾರೆ.
ರೈತರ ನೋಂದಣಿ ಮತ್ತು ಯೋಜನೆಯ ಅವಧಿ ನೋಂದಣಿ ಪ್ರಾರಂಭ :
ಈ ಯೋಜನೆಯಡಿ ರೈತರು ಮೊದಲು ನೋಂದಣಿ ಮಾಡಿಕೊಂಡು, ಆ ನಂತರವೇ ಮಾವನ್ನು ಮಾರಾಟ ಮಾಡಬಹುದಾಗಿದೆ. ರೈತರ ನೋಂದಣಿ ಕಾರ್ಯವು ದಿನಾಂಕ: 27.06.2026 ರಿಂದ ಆಯ್ದ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರಾರಂಭವಾಗುವುದು.
ತಂತ್ರಾಂಶ: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು NeML ಸಂಸ್ಥೆಯ ಸಹಯೋಗದೊಂದಿಗೆ, ‘NeML ತಂತ್ರಾಂಶ’ದ ಮೂಲಕ ‘MIS-PDPS ಮಾವು ರೈತರ ನೋಂದಣಿ’ ಕಾರ್ಯವನ್ನು ಕೈಗೊಳ್ಳಲಿದೆ.
ಯೋಜನೆಯ ಅವಧಿ: ತಂತ್ರಾಂಶದಲ್ಲಿ ಮಾವು ಉತ್ಪನ್ನದ ಮೊದಲ ವಹಿವಾಟು (Transaction) ಆಗುವ ದಿನಾಂಕದಿಂದ ಒಂದು ತಿಂಗಳ ಅವಧಿಯವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.
ಆದ್ದರಿಂದ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅರ್ಹ ತೋತಾಪುರಿ ಮಾವು ಬೆಳೆಗಾರರು ನಿಗದಿತ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಇಬ್ರಾಹಿಂ ಮೈಗೂರ ಅವರು ಪ್ರಕಟಣೆಯಲ್ಲಿ ತಿಳಿದಿದ್ದಾರೆ.
