ಬೆಂಗಳೂರು:ರಾಜ್ಯದಲ್ಲಿ ಬರ ಪರಿಸ್ಥಿತಿ, ಮಳೆಗಾಲ, ಕುಡಿಯುವ ನೀರು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ನಾಳೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅದಕ್ಕೂ ಮುನ್ನ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲಾಗುವುದು ಎಂದರು.
ಮಳೆಗಾಲದ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಮಾಹಿತಿ
ಮಳೆಗಾಲದಲ್ಲಿ ಕೈಗೊಳ್ಳಬಹುದಾದ ಪೂರಕ ಕ್ರಮಗಳು ಹಾಗೂ ಬರಗಾಲ ತಲೆದೋರಿದಾಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುತ್ತಿರುವ ಮಾಹಿತಿ ಸರ್ಕಾರಕ್ಕೆ ಬಂದಿದ್ದು, ಇದನ್ನು ತಪ್ಪಿಸಲು ತೆಗೆದುಕೊಳ್ಳಬಹುದಾದ ಅಗತ್ಯ ಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಮಳೆಯ ಪ್ರಮಾಣ ಸೇರಿದಂತೆ ಹಲವು ಮಾಹಿತಿ ಹಾಗೂ ಅಂಕಿಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಲಾಶಯಗಳ ಭರ್ತಿ ನಂತರ ಕೃಷಿ ಚಟುವಟಿಕೆಗಳಿಗೆ ನೀರು:
“ರಾಜ್ಯದ ವಿವಿಧ ಜಿಲ್ಲೆಗಳಿಗೆ ಪರಿಸ್ಥಿತಿಗೆ ತಕ್ಕಂತೆ ಕುಡಿಯುವ ನೀರನ್ನು ನೀಡಲಾಗಿದೆ. ಮಂಡ್ಯ ಹಾಗೂ ಯಾವುದೇ ಜಿಲ್ಲೆಗಳು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಜಲಾಶಯಗಳ ನೀರಿನ ಸಂಗ್ರಹ ಪರಿಶೀಲಿಸಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಪೂರೈಸಲಾಗುವುದು. ಆದರೆ ಕುಡಿಯುವ ನೀರನ್ನು ಕೃಷಿಗೆ ಬಳಸಿ, ನಂತರ ಬಿತ್ತನೆ, ನಾಟಿ ಮುಂತಾದ ಕೆಲಸಗಳಿಗೆ ನೀರು ಸರಬರಾಜು ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬಾರದು” ಎಂದು ತಿಳಿಸಿದ ಮುಖ್ಯಮಂತ್ರಿಗಳು ಕಾವೇರಿ ಹಾಗೂ ತುಂಗಾಭದ್ರಾ ನೀರಿನ ಹಂಚಿಕೆ ವಿಚಾರದಲ್ಲಿ ನೆರೆ ರಾಜ್ಯಗಳಿಂದ ಬಹಳ ಒತ್ತಡವಿದ್ದು, ಜಲಾಶಯಗಳು ಭರ್ತಿಯಾದ ನಂತರ ರೈತರ ಕೃಷಿ ಚಟುವಟಿಕೆಗಳಿಗೂ ನೀರು ಪೂರೈಸಲಾಗುವುದು ಎಂದರು.
ಕಾವೇರಿ ನೀರು ಹಂಚಿಕೆ ಕುರಿತು ಸಂಸದರಿಗೆ ವಾಸ್ತವದ ಮನವರಿಕೆ
ಈ ಬಾರಿಯ ಸಂಸತ್ತು ಮುಂಗಾರು ಅಧಿವೇಶನದಲ್ಲಿ ಕಾವೇರಿ ನೀರು ಹಂಚಿಕೆಯ ವಿಚಾರ ಚರ್ಚೆಗೆ ಬರುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕಾವೇರಿ ನೀರಿನ ಹಂಚಿಕೆಯ ಬಗ್ಗೆ ರಾಜ್ಯವೂ ಸೂಕ್ತ ಮಾಹಿತಿಗಳನ್ನು ನೀಡುವುದಲ್ಲದೆ, ಈ ಬಗ್ಗೆ ಚರ್ಚಿಸಲು ನಾನೇ ಖುದ್ದು ನವದೆಹಲಿಗೆ ಭೇಟಿ ನೀಡುತ್ತೇನೆ. ಕಾವೇರಿ ನೀರು ಕರ್ನಾಟಕದ ಹಕ್ಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಸಂಸತ್ತಿನ ಸದಸ್ಯರಿಗೆ ನೀಡಲಾಗುವುದು. ಕಾವೇರಿ ನೀರು ಹಂಚಿಕೆಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು ಸರ್ಕಾರ ಈ ಬಗ್ಗೆ ಕಾರ್ಯತತ್ಪರವಾಗಿದೆ. ಮೇಕೆದಾಟು ಅಣೆಕಟ್ಟು ಯೋಜನೆ ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡು ರಾಜ್ಯಕ್ಕೆ ಲಾಭದಾಯಕವಾಗಿದೆ ಎಂಬುದನ್ನು ಪುನರುಚ್ಚರಿಸಿದರು.
