ಸಮಗ್ರ ಸುದ್ದಿ

ಯುವಜನತೆ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರ; ಸಂಸತ್ತಿನಲ್ಲಿ ಚರ್ಚಿಸಿ: ಸಿಎಂ ಡಿ ಕೆ ಶಿವಕುಮಾರ್ ಆಗ್ರಹ

Share

ದೆಹಲಿ:ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಈ ದೇಶದ ಯುವ ಜನತೆಯ ಭವಿಷ್ಯಕ್ಕಾಗಿ ಹೋರಾಟ ಮಾಡಲಾಗುತ್ತಿದೆ‌. ಕೇಂದ್ರ ಸರ್ಕಾರ ಯುವಜನತೆಯ ಹೋರಾಟ ಹತ್ತಿಕ್ಕುತ್ತಿರುವುದು ದುರದೃಷ್ಟಕರ. ನಮಗೆ ನ್ಯಾಯ ಬೇಕು. ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಸಿಎಂ ಡಿ‌‌ ಕೆ ಶಿವಕುಮಾರ್ ಅವರು ಆಗ್ರಹಿಸಿದರು.

ದೆಹಲಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆ ಬಳಿಕ ಶಿವಕುಮಾರ್ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದರು.

ಯುವ ಸಮೂಹ ಈ ದೇಶದ ಭವಿಷ್ಯ. ಹೋರಾಟ ಅವರ ಹಕ್ಕು. ಅವರಿಗೆ ರಕ್ಷಣೆ ನೀಡುವುದು ನಮ್ಮ ಸಂವಿಧಾನದ ಹಕ್ಕು. ನಾವೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ಈಗ ಬಲವಂತವಾಗಿ ಅವರು ನಮ್ಮನ್ನು ತಡೆಯಲು, ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಬಂಧನಕ್ಕೆ ಹೆದರುವುದಿಲ್ಲ:

ಸುಮಾರು ನೂರಕ್ಕೂ ಹೆಚ್ಚು ಸಂಸತ್ ಸದಸ್ಯರು ಸೇರಿ ಪ್ರತಿಭಟಿಸುತ್ತಿದ್ದಾರೆ. ಈ ಬಂಧನಕ್ಕೆಲ್ಲಾ ಯಾರೂ ಹೆದರುವುದಿಲ್ಲ. ನಾವು ಅದನ್ನು ಎದುರಿಸುತ್ತೇವೆ. ನಮಗೆ ನ್ಯಾಯ ಬೇಕು. ಈ ದೇಶದ ಯುವಕರು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ವಿದ್ಯಾರ್ಥಿಗಳು ಎಷ್ಟು ನೋವನ್ನು ಅನುಭವಿಸಿದ್ದಾರೆಂದು ಮಾಧ್ಯಮಗಳು ನೋಡಿವೆ. ಈ ದೇಶದ ಭವಿಷ್ಯ ಅವರಲ್ಲಿದೆ ಎಂದು ಹೇಳಿದರು.


Share

You cannot copy content of this page