ಸಮಗ್ರ ಸುದ್ದಿ

ಕರಾವಳಿ ಕರ್ನಾಟಕದ ರೈಲ್ವೆ ಬೇಡಿಕೆಗೆ ಐತಿಹಾಸಿಕ ಸ್ಪಂದನೆ: ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ಪ್ರದೇಶ ಸೇರ್ಪಡೆ

Share

ಬೆಂಗಳೂರು:ಕರಾವಳಿ ಕರ್ನಾಟಕದ ಸಾರ್ವಜನಿಕರ ಹಾಗೂ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಐತಿಹಾಸಿಕ ಹಾಗೂ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದ್ದಾರೆ.

ರೈಲ್ವೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಮಂಗಳೂರು ಪ್ರದೇಶದ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸುವುದು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಾವು ಭೇಟಿ ನೀಡಿದ ಆರಂಭಿಕ ನಗರಗಳಲ್ಲಿ ಮಂಗಳೂರು ಪ್ರಮುಖವಾಗಿದ್ದು, ಜುಲೈ 2024 ರಲ್ಲಿ ಅಲ್ಲಿಗೆ ಭೇಟಿ ನೀಡಿ ದಕ್ಷಿಣ ರೈಲ್ವೆ (SR), ನೈಋತ್ಯ ರೈಲ್ವೆ (SWR) ಜನರಲ್ ಮ್ಯಾನೇಜರ್‌ಗಳು ಹಾಗೂ ಕೊಂಕಣ್ ರೈಲ್ವೆ (KRCL) ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಈ ಸಂಕೀರ್ಣ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆ ಸಭೆಯಲ್ಲಿ ಸುದೀರ್ಘ ಹಾಗೂ ಆಳವಾದ ಚರ್ಚೆಗಳನ್ನು ನಡೆಸಲಾಗಿತ್ತು.

ಸಾರ್ವಜನಿಕರ ಹಿತದೃಷ್ಟಿಯಿಂದ ಸಿದ್ಧಪಡಿಸಲಾದ ಈ ಪ್ರಸ್ತಾವನೆಗೆ ತಕ್ಷಣ ಸ್ಪಂದಿಸಿ ಅನುಮೋದನೆ ನೀಡಿದ ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಸಚಿವರು ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

ಅಧಿಸೂಚನೆಯ ಮುಖ್ಯ ವಿವರಗಳು:

  • ವಿಭಾಗೀಯ ವರ್ಗಾವಣೆ: ಉಳ್ಳಾಲದವರೆಗಿನ ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಲಾಗುವುದು.
  • ಆಡಳಿತ ಶ್ರೇಣಿ: ನೂತನ ವ್ಯವಸ್ಥೆಯಡಿ ವಿಭಾಗೀಯ ಪ್ರಧಾನ ಕಚೇರಿ ಮೈಸೂರಿನಲ್ಲಿದ್ದರೆ, ವಲಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಇರಲಿದೆ.
  • ಜಾರಿ ದಿನಾಂಕ: ಈ ನೂತನ ಆಡಳಿತಾತ್ಮಕ ಬದಲಾವಣೆಯು ಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿದೆ.

ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆಗೆ ಸೇರ್ಪಡೆಗೊಳಿಸುವುದರಿಂದ ಆಡಳಿತಾತ್ಮಕ ಅಡೆತಡೆಗಳು ನಿವಾರಣೆಯಾಗಿ, ಸಾರ್ವಜನಿಕ ಕುಂದುಕೊರತೆಗಳ ಶೀಘ್ರ ಪರಿಹಾರ ಹಾಗೂ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.


Share

You cannot copy content of this page