ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡಲಿರುವ ಆಯೋಜಕರು, ಸಂಘ-ಸಂಸ್ಥೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿಕೆ ಹಾಗೂ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಗತ್ಯ ಸರಕ್ಷತಾ ಕ್ರಮಗಳನ್ನು ಪಾಲಿಸಲು ಕ್ಷೇತ್ರಾಧಿಕಾರಿಗಳಿಗೆ ಬೆಸ್ಕಾಂ ಸೂಚನೆ ನೀಡಿದೆ.
ಬೆಸ್ಕಾಂ ಉಪ ವಿಭಾಗಾಧಿಕಾರಿಗಳು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ವಿಳಂಬ ಅನುಸರಿಸದೆ ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸಿಕೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.
ಬೆಸ್ಕಾಂ ಮಾರ್ಗಸೂಚಿ: ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ನೀಡಿದ ತಕ್ಷಣ ಸಂಬಂಧಪಟ್ಟ ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಪೆಂಡಾಲ್ ನಿರ್ಮಿಸಿರುವ ಸಮಾರಂಭ ಸ್ಥಳವನ್ನು ಪರಿಶೀಲಿಸಿ, ಸದರಿ ಸ್ಥಳವು ಸುರಕ್ಷತೆಯಿಂದ ಕೂಡಿದೆಯೇ ಎಂಬದನ್ನು ಖಾತ್ರಿ ಪಡಿಸಿಕೊಂಡು ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಬೇಕು.
ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ ಬೇರೆ ಎಲ್ಲಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಬಂದಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಅರ್ಜಿಯನ್ನು ಸ್ವೀಕರಿಸಬೇಕು. ವೈರಿಂಗ್ ಅಳವಡಿಕೆಯು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ ಸುರಕ್ಷತಾ ನಿಯಾಮವಳಿಗೆ ಬದ್ಧವಾಗಿರಬೇಕು ಹಾಗೂ ವಿದ್ಯುತ್ ಪೂರೈಕೆಯಾಗುವ ಮೊದಲು ಅರ್ತ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ (ಇಎಲ್ಸಿಬಿ) ಅನ್ನು ಕಡ್ಡಾಯವಾಗಿ ಹೊಂದಿರಬೇಕು.
ಗಣೇಶ ವಿಸರ್ಜನೆ ಮೆರವಣಿಗೆ ಹಾದು ಹೋಗುವ ಮಾರ್ಗಗಳ ಅಕ್ಕಪಕ್ಕದಲ್ಲಿ ವಿದ್ಯುತ್ ಮಾರ್ಗಗಳ ಪರಿಶೀಲನೆ ಮಾಡಿ, ಯಾವುದೇ ವಿದ್ಯುತ್ ಅಪಘಾತಕ್ಕೆ ಎಡೆಮಾಡದಂತೆ ಎಚ್ಚರವಹಿಸಬೇಕು. ಸಡಿಲವಾಗಿರುವ ಹಾಗೂ ಜೋತು ಬಿದ್ದಿರುವ ವಿದ್ಯುತ್ ಮಾರ್ಗವನ್ನು ತಕ್ಷಣ ಸರಿಪಡಿಸಬೇಕು ಎಂದು ಬೆಸ್ಕಾಂ ಸೂಚಿಸಿದೆ.
ಮೆರವಣಿಗೆ ಸಂದರ್ಭದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿರುವ ವಿದ್ಯುತ್ ಮೂಲ ಸೌಕರ್ಯಗಳು ( ಟಿಸಿ, ಆರ್ಎಂಯು ಹಾಗೂ ಎಲ್ ಟಿ ಡಿಸ್ಟ್ರಿಬ್ಯೂಷನ್ ಬಾಕ್ಸ್) ಹಾಗೂ ಇನ್ನಿತರ ವಿದ್ಯುತ್ ಪರಿಕರಗಳ ಇರುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮನವರಿಕೆಯಾಗುವಂತೆ ಡೇಂಜರ್ ಜೋನ್ ಎಂದು ನಮೂದಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಿ-ಪೈಡ್ ಮೀಟರ್ ಲಭ್ಯವಿಲ್ಲದ ಸಂಧರ್ಭದಲ್ಲಿ ಅಥವಾ 30ದಿನಕ್ಕಿಂತ ಕಡಿಮೆ ಅವಧಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕೋರಿದರೆ, ಸಾಮಾನ್ಯ ವಿದ್ಯುತ್ ಮಾಪಕಗಳನ್ನು ಅಳವಡಿಸಿ, ತಾಂತ್ರಾಂಶದಲ್ಲಿ ವಿದ್ಯುತ್ ಸಂಪರ್ಕದ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಬೇಕು. ವಿದ್ಯುತ್ ಬಳಕೆಯ ಪ್ರಮಾಣವನ್ನು ತಂತ್ರಾಂಶದಲ್ಲಿ ದಾಖಲಿಸಬೇಕು.
ಬೆಸ್ಕಾಂ ವಿದ್ಯುತ್ ಮೂಲ ಸೌಕರ್ಯಗಳಿಗೆ ಯಾವುದೇ ಬ್ಯಾನರ್ , ಪೊಸ್ಟರ್ ಗಳನ್ನು ಕಟ್ಟಬಾರದು ಎಂದು ಸೂಚಿಸಲಾಗಿದೆ.
