ಸಮಗ್ರ ಸುದ್ದಿ

ಸೆಮಿಕಾನ್ ಇಂಡಿಯಾ-2026 ಸಮಾವೇಶದಲ್ಲಿ ಸಚಿವ ಎಂ ಬಿ ಪಾಟೀಲ ಭಾಗಿ | ಸ್ಯಾಮ್ಸಂಗ್, ಎರಿಕ್ಸನ್ ಸೇರಿ ಹಲವು ಕಂಪನಿಗಳೊಂದಿಗೆ ಹೂಡಿಕೆ ಮಾತುಕತೆ

Share

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಮಹತ್ವಾಕಾಂಕ್ಷಿ `ಸೆಮಿಕಾನ್ ಇಂಡಿಯಾ-2026’ ಸಮಾವೇಶದ ಮೊದಲ ದಿನವಾದ ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಮಲೇಷ್ಯಾ ಮತ್ತು ನೆದರ್ಲೆಂಡ್ಸ್ ದೇಶಗಳ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಯೂಲರ್ ಮೋಟಾರ್ಸ್, ನೆಕ್ಸ್ಪೀರಿಯಾ, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್, ಎರಿಕ್ಸನ್, ಸಿ.ಜಿ.ಸೆಮಿ, ಆಕ್ಸಿರೋ ಮತ್ತು ಲಿಂಡೆ ಕಂಪನಿಗಳೊಂದಿಗೂ ಅವರು ವಿಸ್ತೃತ ವಿಚಾರ ವಿನಿಮಯ ಕೈಗೊಂಡಿದ್ದಾರೆ.

ಅವರು ಸಮಾವೇಶಕ್ಕೆ ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿದ್ದಾರೆ. ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯೆಲ್ ಸಚಿವರೊಂದಿಗೆ ತೆರಳಿದ್ದಾರೆ.

ಬಂಡವಾಳ‌ ಆಕರ್ಷಿಸಲೆಂದೇ ಸಚಿವರು ಕಳೆದ ವಾರ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ಗೆ ಐದು ದಿನಗಳ ಪ್ರವಾಸ ಕೈಗೊಂಡು ರೋಡ್ ಶೋ ಮತ್ತು ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಅವರೀಗ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದಾರೆ. ಸಮಾವೇಶದ ಎರಡನೆಯ ದಿನವಾದ ಶುಕ್ರವಾರವೂ ಹಲವು ಕಂಪನಿಗಳೊಂದಿಗೆ ಅವರ ಮಾತುಕತೆ ನಿಗದಿಯಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದೆಹಲಿ ಮೂಲದ ಯೂಲರ್ ಮೋಟಾರ್ಸ್ ವಿದ್ಯುತ್ ಚಾಲಿತ ತ್ರಿಚಕ್ರ ಮತ್ತು ಚತುಶ್ಚಕ್ರ ವಾಹನಗಳನ್ನು ರಾಜ್ಯದಲ್ಲಿ ತಯಾರಿಸುವ ಯೋಜನೆಯನ್ನು ಮುಂದಿಟ್ಟಿದೆ. ನಾವು ಇದಕ್ಕೆ ವಿಜಯಪುರ ಸೂಕ್ತ ಸ್ಥಳವೆಂದು ಹೇಳಿದ್ದೇವೆ. ಇದು ಈಡೇರಿದರೆ ಸರಕು ಸಾಗಣೆ ಮತ್ತು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ವಾಣಿಜ್ಯೋದ್ದೇಶದ ಸಂಚಾರ ಎರಡೂ ಸುಗಮವಾಗಲಿವೆ. ಅಲ್ಲದೆ, ತನ್ನ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೊಡಲಿದೆ ಎಂದಿದ್ದಾರೆ.

ನಮ್ಮ ದೇಶದ್ದೇ ಆದ ಎಲ್ ಟಿ ಫುಡ್ಸ್ ಸಮೂಹವು ಬ್ರ್ಯಾಂಡೆಡ್ ಬಾಸ್ಮತಿ ಅಕ್ಕಿ, ವಿಶೇಷವಾದ ಅಕ್ಕಿ, ಸಾವಯವ ಪದಾರ್ಥಗಳ ವಹಿವಾಟಿಗೆ ಹೆಸರಾಗಿದೆ, ಇದು ರಾಯಚೂರಿನಲ್ಲಿ ಈಗಾಗಲೇ ತನ್ನ ಘಟಕ ಹೊಂದಿರುವ ಕಂಪನಿಯು ಭತ್ತ ಬೆಳೆಯುವ ಪ್ರದೇಶದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದು, ನಮ್ಮಲ್ಲಿ ವಿಶೇಷವಾಗಿ ಬೆಳೆಯುವ ಸೋನಾ ಮಸೂರಿ ಮತ್ತು ಕೋಲಂ ಅಕ್ಕಿಯ ಕಡೆಗೆ ಗಮನ ಹರಿಸಿದೆ. ಇಂತಹ ಯೋಜನೆಯಿಂದ ರೈತರಿಗೆ ಅನುಕೂಲವಾಗುವ ಜತೆಗೆ ಇಳುವರಿ ಹೆಚ್ಚಳದ ಲಾಭ ತಂದುಕೊಡಲಿದೆ ಎಂದು ಅವರು ನುಡಿದಿದ್ದಾರೆ.

ಸ್ಯಾಮ್ಸಂಗ್ ಕಂಪನಿಯು ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ‌ ಜತೆಗೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ನೆಲೆಯೂರಿದೆ. ಕಂಪನಿಯು ರಾಜ್ಯದಲ್ಲಿ ತನ್ನ‌ ತಯಾರಿಕಾ ಸ್ಥಾವರನ್ನು ಸ್ಥಾಪಿಸಬೇಕು ಎನ್ನುವ ವಿಚಾರವನ್ನು ನಾವು ಮುಂದಿಟ್ಟಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನ ಸಿಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರು ಸಮಾವೇಶಕ್ಕೆ ಆಗಮಿಸಿರುವ ನೂರಾರು ಕಂಪನಿಗಳ ಬೂತ್ ಗಳಿಗೆ ಭೇಟಿ ಕೊಟ್ಟರು. ಅಲ್ಲದೆ, ನೆದರ್ಲೆಂಡ್ಸ್ ಮತ್ತು ಮಲೇಷ್ಯಾ ಪೆವಿಲಿಯನ್ ಗಳಿಗೆ ಕೂಡ ತೆರಳಿ, ಆ ದೇಶದ ಹಲವು ಕಂಪನಿಗಳ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು.

ಮಾತುಕತೆಯಲ್ಲಿ ಯೂಲರ್ ಮೋಟಾರ್ಸ್ ಕಂಪನಿಯ ಸಹ ಉಪಾಧ್ಯಕ್ಷ ದಶರಥ್ ಸಿಂಗ್, ಮೂಲಸೌಕರ್ಯ ವ್ಯವಸ್ಥಾಪಕ ರಜತ್ ಸಜ್ವಾನ್, ಎಲ್.ಟಿ.ಫುಡ್ಸ್ ಕಂಪನಿಯ ಸಿಇಒ ವಿವೇಕ್ ಚಂದ್ರ, ಸಿಡಿಒ ಮೋನಿಕಾ ಜಾಗಿಯಾ, ಉಪಾಧ್ಯಕ್ಷೆ ಅನು ಶರ್ಮಾ, ಸ್ಯಾಮ್ಸಂಗ್ ಕಂಪನಿಯ ನಿರ್ದೇಶಕ ಶರತ್ ಚಂದ್ರ, ಪ್ರಧಾನ ವ್ಯವಸ್ಥಾಪಕ ನಿತಿನ್ ಶರ್ಮ ಭಾಗವಹಿಸಿದ್ದರು.


Share

You cannot copy content of this page