ಸಮಗ್ರ ಸುದ್ದಿ

ದಾಖಲೆ ರಹಿತ ಜನವಸತಿ ಪ್ರದೇಶಗಳ ಜನರ ಮನೆಗಳಿಗೆ ಖಾತಾ ನೀಡಿಕೆ ನಿಯಮಾವಳಿ ರೂಪಿಸಲು ಕಾಲಾವಕಾಶದ ಅಗತ್ಯವಿದೆ: ಸಚಿವ ಪ್ರಿಯಾಂಕ್ ಖರ್ಗೆ

Share

ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿನ ಕಂದಾಯ ಜಮೀನಿನಲ್ಲಿ ನಿವೇಶನವನ್ನು ಕೇವಲ ಕರಾರು ಒಪ್ಪಂದ ಪತ್ರದಲ್ಲಿ ಖರೀದಿಸಿ, ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡಿ, ಖಾತಾ ಒದಗಿಸುವುದಕ್ಕೆ ನಿಯಮಗಳನ್ನು ರೂಪಿಸಲು ಕಾಲಾವಕಾಶ ಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಭರವಸೆ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ  ಕಂಪ್ಲಿ ವಿಧಾನಸಭಾ ಕ್ಷೇತ್ರದ  ಶಾಸಕರಾದ ಜೆ.ಎನ್. ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬಗಳು ಕಂಪ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ನಿವೇಶನಗಳು ದೊರಕುತ್ತದೆ ಎಂದು ಈ ಹಿಂದೆ ಕಂದಾಯ ಜಮೀನಿನ ನಿವೇಶನಗಳಲ್ಲಿ ಜಮೀನಿನ ಮಾಲೀಕರೊಂದಿಗೆ ಅಗ್ರಿಮೆಂಟ್ ಪತ್ರ ಮಾಡಿಕೊಂಡು ಖರೀದಿಸಿ, ಈಗಾಗಲೇ ವಸತಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ. ಇಂತಹ ಪ್ರಕರಣಗಳು ರಾಜ್ಯಾದ್ಯಂತ ಇವೆ.  ಹೀಗಾಗಿ ಇಂತಹವರಿಗೆ ದಾಖಲೆಗಳನ್ನು ಪರಿಶೀಲಿಸಿ, ಹಕ್ಕುಪತ್ರ ಕೊಡಿಸಿ, ಇವರಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಕಂಪ್ಲಿ ಶಾಸಕರಾದ ಜೆ.ಎನ್. ಗಣೇಶ್ ಮನವಿ ಮಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಈಗಾಗಲೇ ಕಂದಾಯ ನಿವೇಶನಗಳಿಗೆ ಖರೀದಿಯ ಕ್ರಯಪತ್ರ ಮುಂತಾದ ದಾಖಲೆಗಳನ್ನು ಪರಿಶೀಲಿಸಿ, ಇ-ಸ್ವತ್ತು ನೀಡಿ, ಅವುಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಿದ್ದು, ಈವರೆಗೆ 2,936 ಅರ್ಜಿಗಳು ಸ್ವೀಕೃತವಾಗಿವೆ.  

ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಗ್ರಾಮದ ಭಾಗವಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಭೂಸುಧಾರಣಾ ಕಾಯ್ದೆ ಅನ್ವಯ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಯಿಂದ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಕಂದಾಯ ಇಲಾಖೆಯಿಂದ ಹಕ್ಕುಪತ್ರ ಒದಗಿಸಿದಲ್ಲಿ, ಗ್ರಾಮ ಪಂಚಾಯತಿಗಳಿಗೆ ಖಾತೆ ವಿತರಣೆ ಮಾಡಲು ಅವಕಾಶವಿರುತ್ತದೆ.  

ಆದರೆ ಕೇವಲ ಅಗ್ರಿಮೆಂಟ್ ಪತ್ರದ ಆಧಾರದಲ್ಲಿ ನಿವೇಶನ ಖರೀದಿಸಿ, ವಸತಿ ನಿರ್ಮಿಸಿದವರಿಗೆ, ಒಂದು ಬಾರಿಯ ಪರಿಹಾರವಾಗಿ ಖಾತಾ ಮಾಡಿಕೊಡಲು ನಿಯಮಗಳನ್ನು ರೂಪಿಸಬೇಕಾಗುತ್ತದೆ.  ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ, ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ.  ಹೀಗಾಗಿ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಇದಕ್ಕೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.


Share

You cannot copy content of this page