ಸಮಗ್ರ ಸುದ್ದಿ

ಬೇಡಿಕೆ ಆಧರಿಸಿ ಹೊಸ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಕ್ರಮ: ಸಚಿವ ಶಿವರಾಜ ಎಸ್ ತಂಗಡಗಿ ಭರವಸೆ

Share

ಬೆಳಗಾವಿ: ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಆಯವ್ಯಯದಲ್ಲಿ ಮಂಜೂರಾಗುವ ಅನುದಾನ ಲಭ್ಯತೆ ಆಧರಿಸಿ ಅಗತ್ಯವಿರುವ ಕಡೆ ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗೆ ಕ್ರಮ ವಹಿಸುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಶಿವರಾಜ ಎಸ್ ತಂಗಡಗಿ ತಿಳಿಸಿದರು.  

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ತೇರದಾಳ ಶಾಸಕರಾದ ಸಿದ್ದು ಸವದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಳೆದ ವರ್ಷದಲ್ಲಿ ರಾಜ್ಯಾದ್ಯಂತ 150 ವಿದ್ಯಾರ್ಥಿ ನಿಲಯಗಳನ್ನು ತೆರೆಯಲಾಗಿದೆ. ಈ ಪೈಕಿ 31 ಜಿಲ್ಲಾ ಕೇಂದ್ರಗಳಲ್ಲಿ ಬಾಲಕ ಹಾಗೂ ಬಾಲಕಿಯರ 62 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ಉಳಿದಂತೆ ಬೇಡಿಕೆ ಆಧಾರಿಸಿ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗಿದೆ.

ರಾಜ್ಯಾದ್ಯಂತ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಪದವಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಹೆಚ್ಚಿನ ಬೇಡಿಕೆಯಿದೆ. ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಬನಹಟ್ಟಿ, ರಬಕವಿ, ತೇರದಾಳ, ಮಹಾಲಿಂಗಪುರ ಗ್ರಾಮಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 5 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ.

ಒಟ್ಟು 552 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ನೀಡಲಾಗಿದೆ.1512 ಅರ್ಜಿಗಳು ಸ್ವೀಕೃತವಾಗಿವೆ. 219 ನವೀಕರಣ 235 ಹೊಸ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗಿದೆ. 1,276 ಅರ್ಜಿಗಳು ಬಾಕಿಯಿವೆ. ತೇರದಾಳ ಮತಕ್ಷೇತ್ರದಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸುವ ಪ್ರಸ್ತಾವನೆಗಳು ಆರ್ಥಿಕ ಇಲಾಖೆಯಿಂದ ತಿರಸ್ಕೃತಗೊಂಡಿವೆ. ಆದರೂ ಶಾಸಕರ ಬೇಡಿಕೆ ಅನುಸಾರ ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ವಿದ್ಯಾರ್ಥಿ ನಿಲಯ ಮಂಜೂರಾತಿ ಕುರಿತು ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.

ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಬಹಳಷ್ಟು ವಿದ್ಯಾರ್ಥಿಗಳು ಇದ್ದು, ವಿದ್ಯಾರ್ಥಿ ನಿಲಯಕ್ಕೆ ಹೆಚ್ಚಿನ ಬೇಡಿಕೆಯಿದೆ. ತೇರದಾಳ ಹಾಗೂ ರಬಕವಿ-ಬನಹಟ್ಟಿಯಲ್ಲಿ ತಲಾ 2 ಹಾಗೂ ಮಹಾಲಿಂಗಪುರದಲ್ಲಿ 1 ವಿದ್ಯಾರ್ಥಿ ನಿಲಯಗಳಿಗೆ ಮಂಜೂರಾತಿ ನೀಡುವಂತೆ ಶಾಸಕರಾದ ಸಿದ್ದು ಸವದಿ ಸಚಿವರಲ್ಲಿ ಕೋರಿದರು.


Share

You cannot copy content of this page