ಬೆಳಗಾವಿ: ಕಳೆದ ಎರಡು ಮೂರು ದಿನಗಳಿಂದ ಕೋಲಾರ ತಾಲೂಕು ಗರಡುಪಾಳ್ಯ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರದಲ್ಲಿ ನನ್ನ ಹೆಸರನ್ನೂ ತಳುಕು ಹಾಕಿ, ನಾನೇ ಒತ್ತುವರಿ ಮಾಡಿದ್ದೇನೆ ಎಂದೂ ಆರೋಪಿಸಲಾಗಿದೆ.
ಸಾರ್ವಜನಿಕ ಜೀವನದಲ್ಲಿ ನಾವು ಕೆಲಸ ಮಾಡುವಾಗ ನಮ್ಮ ಕೆಲಸವನ್ನು ಒಪ್ಪುವವರು-ವಿರೋಧಿಸುವವರು ಇದ್ದೇ ಇರುತ್ತಾರೆ. ಇದು ಸಾರ್ವಜನಿಕ ಜೀವನದ ಅವಿಭಾಗ್ಯ ಅಂಗ. ನಿಷ್ಠುರವಾಗಿ ಕೆಲಸ ಮಾಡುವಾಗ ಅದನ್ನು ಒಪ್ಪುವವರು ಇರುತ್ತಾರೆ. ನಿಷ್ಠುರ ಕೆಲಸ ಮಾಡಿದ್ದಕ್ಕಾಗಿ ಬಾಧಿರಾಗುವುದೂ ಇರುತ್ತದೆ. ನಿಷ್ಠುರವಾಗಿ ಕೆಲಸ ಮಾಡುವವರನ್ನು ಸಿಲುಕಿಸಲು ಯತ್ನಿಸುವ ಪ್ರಯತ್ನವನ್ನು ಹಲವು ಮಾಡುತ್ತಾರೆ. ಅದಕ್ಕೆ ಚಿಂತೆಗೀಡಾಗುವ ಅಗ್ಯವಿಲ್ಲ.
ಗರಡುಪಾಳ್ಯ ಗ್ರಾಮವು ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ್ದ ಗ್ರಾಮ. 1923ರಲ್ಲಿ ಮಹರಾಜರು ಖರೀದಿದ್ದರು. ಅವರು ಅಲ್ಲಿ ಕೃಷಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ರಸಾಯನಿಕ ಗೊಬ್ಬರವನ್ನ ಹೊರದೇಶದಿಂದ ಆಮದು ಮಾಡಿ, ಇಲ್ಲಿ ರೈತರಿಗೆ ಪರಿಚಯ ಮಾಡಿಸುವ ಕೇಂದ್ರವನ್ನಾಗಿ ನಡೆಸಲಾಗುತ್ತಿತ್ತು. ಇದುಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟ್ರಸ್ಟ್ಗೆ ಸೇರಿದ ಜಮೀನು. ಇದರ ವ್ಯವಹಾರವನ್ನು ಮಹಾರಾಜರ ಸೆಕ್ರೆಟರಿ ನಾರಾಯಣ ಸ್ವಾಮಿ ನೋಡಿಕೊಳ್ಳುತ್ತಿದ್ದರು. ಅದನ್ನು ಆ ನಾರಾಯಣ ಸ್ವಾಮಿ ಅವರು 1953ರಲ್ಲಿ ನಮ್ಮ ತಾತ ಚೌಡೇಗೌಡರಿಗೆ 10 ವರ್ಷಗಳ ಭೋಗ್ಯಕ್ಕೆ ನೀಡಿದ್ದರು.
ಭೋಗ್ಯದ ಅವಧಿ ಮುಗಿಯುವುದಕ್ಕೂ ಮೊದಲೇ ರಾಜಮನೆತನದವರು ಆ ಭೂಮಿಯನ್ನು ಮಾರಾಟಕ್ಕೆ ಇಟ್ಟರು. ಚೌಡೇಗೌಡರು ಆ ಜಮೀನು ಖರೀದಿಸುವುದಾಗಿ ಹೇಳಿದರೂ, ಸರಿಯಾದ ಸಮಯಕ್ಕೆ ಹಣ ಹೊಂದಿಸಲಾಗಲಿಲ್ಲ. ಆದ್ದರಿಂದ, ಜಮೀನನ್ನು 1959ರಲ್ಲಿ ಅಬೀಬುಲ್ಲಾ ಖಾನ್ ಅವರಿಗೆ ಮಾರಾಟ ಮಾಡಿದರು. ಅದರ ವಿರುದ್ಧ ನಮ್ಮ ತಾತ ಕೋಲಾರ ವಿಶೇಷ ಜಿಲ್ಲಾಧಿಕಾರಿ ಬಳಿ ದೂರು ದಾಖಲಿದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಅಬೀಬುಲ್ಲಾ ಖಾನ್ ಅವರೇ ಭೂಮಿ ಮಾಲೀಕರು ಎಂದು ಆದೇಶ ನೀಡಿದ್ದರು.
ಜಿಲ್ಲಾಧಿಕಾರಿಯ ಆದೇಶದಲ್ಲಿ; “ಗರಡುಪಾಳ್ಯ ಎಂಬ ಇಡೀ ಹಳ್ಳಿಯು ಒಬ್ಬ ಮಾಲೀಕನಿಗೆ ಸೇರಿದ್ದು. ಯಾರೂ ವಾಸ ಮಾಡದೇ ಇರುವ ‘ಬೇಚರಾಗ್’ ಗ್ರಾಮ. ಈ ಹಳ್ಳಿಯು ಶ್ರೀಕಂಠದತ್ತ ಒಡೆಯರ್ ಟ್ರಸ್ಟ್ಗೆ ಸೇರಿದ್ದಾಗಿದ್ದು, 1953ರಲ್ಲಿ ಇಡೀ ಹಳ್ಳಿಯನ್ನು ರಾಜಮನೆತನವು ಭೋಗ್ಯಕ್ಕೆ ನೀಡಿತ್ತು. ಬಳಿಕ, ಅಬೀಬುಲ್ಲಾ ಖಾನ್ ಅವರಿಗೆ 47,601 ರೂ. ಮಾರಾಟ ಮಾಡಿದೆ” ಎಂದು ಬರೆದಿದ್ದರು.
ಬಳಿಕ, ಈ ಆದೇಶವನ್ನು ಪ್ರಶ್ನಿಸಿ ಮೈಸೂರ್ ಅಪಿಲೇಟ್ ಟ್ರಿಬ್ಯೂನಲ್ನಲ್ಲಿ ಚೌಡೇಗೌಡರು ಮೇಲ್ಮನವಿ ದಾಖಲಿಸಿದರು. ಆಗ, ಅಬೀಬುಲ್ಲಾ ಖಾನ್ ಅವರು ಒಪ್ಪಂದಕ್ಕೆ ಬಂದರು. ಗ್ರಾಮದ ಸಂಪೂರ್ಣ 256 ಎಕರೆ ಒಡೆತನವನ್ನು ಚೌಡೇಗೌಡರಿಗೆ ಬಿಟ್ಟುಕೊಟ್ಟರು. ಇದೆಲ್ಲವೂ ‘ಸೇಲ್ ಡೀಡ್’ (ಕ್ರಯ)ನಲ್ಲಿ ಸ್ಪಷ್ಟವಾಗಿದೆ. ಅಂದಿನಿಂದ ಈವರೆಗೆ ನಾವು ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇವೆ.
ಈ ಜಮೀನಿನಲ್ಲಿ ಎರಡು ಕೆರೆಗಳಿವೆ. ಆ ಕಾರಣಕ್ಕಾಗಿಯೇ, ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಆ ಕೆರೆಗಳ ಭೂಮಿಯು ನಮ್ಮ ಕುಟುಂಬದ ಹೆಸರಿನಲ್ಲಿದೆ.
ಆದರೆ, ಆ ಕೆರೆಗೆಳು ಅಸ್ತಿತ್ವದಲ್ಲಿವೆ. ಕೆರೆಗಳು ಮತ್ತು ಕೆರೆಗಳಿಗೆ ಹೊಂದಿಕೊಂಡಿರುವ ನಾಲೆಗಳ ಯಾವುದೇ ಒಂದಿಂಚೂ ಭೂಮಿಯನ್ನು ಒತ್ತುವರಿ ಮಾಡಲಾಗಿಲ್ಲ. ಬೇಕಿದ್ದರೆ ಯಾರು ಬೇಕಿದ್ದರೂ ಪರಿಶೀಲಿಸಲು ಬರಬಹುದು. ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು.
