ಸಮಗ್ರ ಸುದ್ದಿ

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Share

ಮಂಗಳೂರು: ಹೊರ ರಾಜ್ಯ, ‌ಹೊಸ ದೇಶಗಳಲ್ಲೂ ಉದ್ಯಮ ಸ್ಥಾಪಿಸಿರುವ ಕರಾವಳಿ ಭಾಗದ ಉದ್ಯಮಿಗಳು ತವರಿನತ್ತ ಮುಖ ಮಾಡುತ್ತಿದ್ದು, ಅವರಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.

ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳು ಇಡೀ ವಿಶ್ವದಲ್ಲೆ ಗಮನ ಸೆಳೆಯಲಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರಾವಳಿ ಅಭಿವೃದ್ಧಿಗೆ ಪಣತೊಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,‌ ಅಧಿಕಾರಿ ವರ್ಗದವರಿಗೆ ಅಭಿನಂದನೆ ಹೇಳಲು ಬಯಸುವೆ. ಮುಂದೆ ಇತಿಹಾಸ ಸೃಷ್ಟಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸರ್ಕಾರದ ಒಂದು ಕರೆಗೆ ಮೂರು ಜಿಲ್ಲೆಗಳ ಉದ್ಯಮಿಗಳು ಬಂದು ಸೇರಿದ್ದಾರೆ. ಇದು ಜನ್ಮ ಭೂಮಿ ಮೇಲೆ ಉದ್ಯಮಿಗಳು ಇಟ್ಟಿರುವ ಪ್ರೀತಿ ತೋರುತ್ತದೆ. ಎಲ್ಲಿಯ ಬೆಳಗಾವಿ ಎಲ್ಲಿಯ ಉಡುಪಿ, ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಬಂದೆ. ಇಂದು ಉಡುಪಿ ಜಿಲ್ಲೆ ಮೇಲೆ ವಿಶೇಷ ಅಭಿಮಾನ ನನ್ನಲ್ಲಿ ಮೂಡಿದೆ ಎಂದರು‌.

ಪ್ರವಾಸೋದ್ಯಮ ಹಾಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ಉತ್ತರ ಕರ್ನಾಟಕದ ಬಹುತೇಕ ಮಂದಿ ಕರಾವಳಿ ಕಡೆ ಬರುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಸಿಆರ್ ಝೆಡ್ ಕ್ಲಿಯರ್ ಮಾಡಲು ನಮ್ಮ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈ ಮೂರು ಜಿಲ್ಲೆಗಳನ್ನು ಬೆಳೆಸೋಣ, ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ಆರ್ಥಿಕ ಶಕ್ತಿ ಸಿಗುವಂತೆ ಮಾಡೋಣ ಎಂದು ಹೇಳಿದರು.


Share

You cannot copy content of this page