ಬೆಂಗಳೂರು, ನ.18: ಬೆಂಗಳೂರು ಟೆಕ್ ಸಮಾವೇಶದಲ್ಲಿ ಹೆಸರುಘಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕ್ವಾಂಟಮ್ ಸಿಟಿಯ ರೂಪುರೇಷೆಗಳನ್ನು ನಾಳೆ ಅನಾವರಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ತಿಳಿಸಿದರು.
ಇಂದು ಬೆಂಗಳೂರು ಸೈನ್ಸ್ ಗ್ಯಾಲರಿಯಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ ನ ಭಾಗವಾಗಿ ಆಯೋಜಿಸಲಾಗಿದ್ದ “ಸ್ಮಾರ್ಟ್ ಬಯೋ” ಪ್ರಶಸ್ತಿ ನೀಡಿ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗಣ್ಯರೊಂದಿಗೆ ಚರ್ಚಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಐಟಿ&ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ನಾಯಕತ್ವದಲ್ಲಿ ಬೆಂಗಳೂರು ಟೆಕ್ ಸಮಾವೇಶ, ಏಷ್ಯಾದ ಅತಿದೊಡ್ಡ ವೈಜ್ಞಾನಿಕ ವೇದಿಕೆಯಾಗಿ ಬೆಳೆದಿದ್ದು, ವಿಶ್ವದ ಪ್ರಮುಖ ದೀಪ್ಟೆಕ್, ಸ್ಟಾರ್ಟ್ಅಪ್ಗಳು, ಸಂಶೋಧಕರು ಮತ್ತು ನೀತಿ ನಿರ್ಮಾಣದ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.
ಎಲ್ಲರಿಗೂ ವಿಜ್ಞಾನ ಎನ್ನುವ ಧ್ಯೇಯವಾಕ್ಯದ ಅಡಿಯಲ್ಲಿ ನಮ್ಮ ರಾಜ್ಯದ ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರಗಳು ಮತ್ತು ತಾರಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಆಸ್ಟ್ರಾನಮಿ ಆಕ್ಸೆಸ್ ಯೋಜನೆಯ ಅಡಿಯಲ್ಲಿ ರಾಜ್ಯದ ಶಾಲೆಗಳಿಗೆ ಟೆಲಿಸ್ಕೋಪ್ಗಳ ವಿತರಣೆ ಮಾಡಲಾಗಿದ್ದು, ಗ್ರಾಮೀಣ ಮಕ್ಕಳು ಕೂಡ ಅಂತರಿಕ್ಷದ ಕುತೂಹಲಗಳನ್ನು ಕಲಿಯುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ₹300 ಕೋಟಿ ಮೌಲ್ಯದ ಸೈನ್ಸ್ ಸಿಟಿ ಕಾರ್ಯ ಚುರುಕುಗೊಂಡಿದೆ. ಇದು ಪ್ರಯೋಗಾಧಾರಿತ, ಕಲಿಕೆಯ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವ ವಾತಾವರಣ ಹೊಂದಿರಲಿದೆ. ಅಲ್ಲದೇ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಕ್ವಾಂಟಮ್ ಮಿಷನ್ ಗೆ ₹1,000 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಕರ್ನಾಟಕವನ್ನು “ಏಷ್ಯಾದ ಕ್ವಾಂಟಮ್ ಕ್ಯಾಪಿಟಲ್” ಆಗಿ ರೂಪಿಸುವುದೇ ಇದರ ಉದ್ದೇಶವಾಗಿದೆ.
ರಾಜ್ಯ ಸರ್ಕಾರವು ಭಾರತದ ಮೊದಲ ಕ್ವಾಂಟಮ್ ಸಿಟಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. ಈ ಸಿಟಿಯ ಬಗ್ಗೆ ನಾಳೆ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ರೂಪು ರೇಷೆಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಯಲ್ಲೇ, ರಾಷ್ಟ್ರೀಯ ಕ್ವಾಂಟಮ್ ಮಿಷನ್ಗೆ ಅನುಗುಣವಾಗಿ ಕ್ವಾಂಟಮ್ ಮೆಟೀರಿಯಲ್ಸ್ ಇನೋವೇಶನ್ ನೆಟ್ವರ್ಕ್ ಅನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ವಿನಂತಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಸೈನ್ಸ್ ಗ್ಯಾಲರಿ ಬೆಂಗಳೂರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿಜ್ಞಾನವನ್ನು ಕಲೆ ಮತ್ತು ವಿನ್ಯಾಸದೊಂದಿಗೆ ಮಿಶ್ರಣಗೊಳಿಸಿ ಯುವಜನತೆಗೂ ಸಾಮಾನ್ಯ ನಾಗರಿಕರಿಗೂ ವಿಜ್ಞಾನದ ಅನುಭವ ಸಿಗುವಂತೆ ಮಾಡುತ್ತಿದೆ. ಆರಂಭದಿಂದಲೇ 6 ಲಕ್ಷಕ್ಕೂ ಹೆಚ್ಚು ಜನರು ಈ ಗ್ಯಾಲರಿಯನ್ನು ಭೇಟಿ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮೈಕ್ರೋಬಯೋಟಿಎಕ್ಸ್ ಹೆಲ್ತ್ ಸಂಸ್ಥೆಗೆ ಸ್ಟಾರ್ಟ್ಅಪ್ ಆಫ್ ದಿ ಇಯರ್,ಇನ್ನ್ಏಸೇಲ್ ಟೆಕ್ನಾಲಜೀಸ್ ಪ್ರೈ ಲಿ ಅವರಿಗೆ ಇನ್ನೋವೇಟರ್ ಆಫ್ ದಿ ಇಯರ್, ಅಗೋಪಾರ್ಕ್ ಪ್ರೈ ಲಿಮಿಟೆಡ್ನ ಸಹ ಸಂಸ್ಥಾಪಕಿ ಪಾಯಲ್ ಪಟೇಲ್ ಅವರಿಗೆ ವುಮೆನ್ ಎಂಟ್ರಪ್ರೂನರ್ ಆಫ್ ದಿ ಇಯರ್ ಅವಾರ್ಡ್, ಥೇರಾಕ್ಸೆಲ್ ಹೆಲ್ತ್ಕೇರ್ ಪ್ರೈಲಿಮಿಟೆಡ್ ಅವರಿಗೆ ಬೆಸ್ಟ್ ಕ್ಯಾಂಪಸ್ ಆಫ್ ದಿ ಇಯರ್ ಅವಾರ್ಡ್, ಎಸ್ಜಿಬಿ ಆಗ್ರೋಇಂಡಸ್ಟ್ರೀಸ್, ಕೊಪ್ಪ ಮತ್ತು ಶ್ರೀ ಗೌರಿ ಭಾರ್ಗವ ಪ್ರೈ ಲಿಮಿಟೆಡ್ ಚಿಕ್ಕಮಗಳೂರು ಅವರಿಗೆ ಸ್ಟಾರ್ಟ್ಅಪ್ ಆಫ್ ದಿ ಇಯರ್ (ಬಿಯಾಂಡ್ ಬೆಂಗಳೂರು) ಪ್ರಶಸ್ತಿ ನೀಡಿ ಗೌರವಿಸಲಾಯಿತು.
