ಸಮಗ್ರ ಸುದ್ದಿ

ಶುದ್ಧ ಇಂಧನಕ್ಕೆ AI ಚಾಲಿತ ಜಾಗತಿಕ ಮಿಷನ್ ಸ್ಥಾಪನೆಗೆ ಭಾರತ ಒಲವು | ವಿಶ್ವ ಆರ್ಥಿಕ ವೇದಿಕೆ ಎದುರು ಜಾಗತಿಕವಾಗಿ AI ಚಾಲಿತ ಶುದ್ಧ ಇಂಧನ ಕಾರ್ಯತಂತ್ರದ ಅಗತ್ಯ ಪ್ರತಿಪಾದಿಸಿದ ಪ್ರಲ್ಹಾದ ಜೋಶಿ

Share

ದಾವೋಸ್: ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತೊಂದು ಮಹತ್ತರ ಹೆಜ್ಜೆಯತ್ತ ದಾಪುಗಾಲಿಡಲು ಬಯಸುತ್ತಿದ್ದು, ಕೃತಕ ಬುದ್ಧಿಮತ್ತೆಯ (AI) “ಜಾಗತಿಕ ಮಿಷನ್” ಸ್ಥಾಪನೆಗೆ ಒಲವು ತೋರುತ್ತಿದೆ.

ದಾವೋಸ್‌ನಲ್ಲಿ ನಡೆಯುತ್ತಿರುವ 2026ರ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ “ಕಾಲ್ ಟು ಆಕ್ಷನ್: ಸ್ಪಾಟ್‌ಲೈಟ್ ಆನ್ ದಿ ಗ್ಲೋಬಲ್ ಮಿಷನ್ ಆನ್ ಎಐ ಫಾರ್ ಎನರ್ಜಿ” ಶೀರ್ಷಿಕೆಯಡಿ ಆಯೋಜಿಸಿದ್ದ ಮಹತ್ವದ ಅಧಿವೇಶನದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ವಿಸ್ತೃತ ಭಾಷಣ ಮಾಡಿ ಜಾಗತಿಕವಾಗಿ AI ಚಾಲಿತ ಶುದ್ಧ ಇಂಧನ ಕಾರ್ಯತಂತ್ರದ ಅಗತ್ಯವನ್ನು ಪ್ರತಿಪಾದಿಸಿದರು.

ಈ ಮೂಲಕ ಶುದ್ಧ ಇಂಧನಕ್ಕಾಗಿ ಕೃತಕ ಬುದ್ಧಿಮತ್ತೆಯ “ಜಾಗತಿಕ ಮಿಷನ್‌” ಗೆ ಭಾರತ ಬದ್ಧತೆ ತೋರಿದೆ. ಇದು ಭಾರತದ ಇಂಧನ ಪರಿವರ್ತನೆಯ ಪ್ರಯಾಣ ಮತ್ತು ಜಾಗತಿಕ ಸಮುದಾಯಕ್ಕೆ ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ AI ಅವಶ್ಯಕತೆಯನ್ನು ಪ್ರಸ್ತುತಪಡಿಸಿತು.

ಇಂಧನ ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಪರಿವರ್ತನಾ ಸಾಮರ್ಥ್ಯ ಬಗ್ಗೆ ಭಾರತದ ಚಿಂತನೆಯನ್ನು ವಿಶ್ವ ಆರ್ಥಿಕ ವೇದಿಕೆ ಮುಂದೆ ಮಂಡಿಸಿದ ಪ್ರಲ್ಹಾದ ಜೋಶಿ, AI ಮುನ್ಸೂಚನೆಯನ್ನು ಸುಧಾರಿಸುತ್ತದೆ, ನಷ್ಟ – ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಿಡ್ ವಿಶ್ವಾಸಾರ್ಹತೆಯನ್ನು ಬಲಪಡಿಸುತ್ತದೆ ಎಂದು ಗಮನಸೆಳೆದರು.

ಶುದ್ಧ ಇಂಧನಕ್ಕಾಗಿ ಡಿಜಿಟಲ್ ಮೂಲಸೌಕರ್ಯ, ಪೈಲಟ್ ಆಧಾರಿತ ಮಧ್ಯಸ್ಥಿಕೆಗಳಿಂದ ಪ್ಲಾಟ್‌ಫಾರ್ಮ್ ಆಧಾರಿತ ನಿಯೋಜನೆಗೆ ಭಾರತ ಬದಲಾವಣೆ ಪಥದಲ್ಲಿದೆ. ಇದು AI-ಚಾಲಿತ ಪರಿಹಾರಗಳನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ವ್ಯವಸ್ಥಿತವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದರು.

ಸೌರ ಸುಂಕ ಶೇ.80ರಷ್ಟು ಇಳಿಕೆ:

ಭಾರತದಲ್ಲಿ ಸೌರ ಶಕ್ತಿ ಸಂಬಂಧಿತ ಸುಂಕ ಶೇ.8ರಷ್ಟು ಕಡಿಮೆಯಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆ, ಸಂಗ್ರಹಣೆ ವೆಚ್ಚ ಸ್ಪರ್ಧಾತ್ಮಕವಾಗಿದೆ. ಭಾರತದಲ್ಲಿ ಹಸಿರು ಹೈಡ್ರೋಜನ್ ಮತ್ತು ಹಸಿರು ಅಮೋನಿಯಾ ಬೆಲೆ ಜಾಗತಿಕವಾಗಿ ಅತ್ಯಂತ ಸ್ಪರ್ಧಾತ್ಮಕವಾಗಿವೆ ಮತ್ತು ದೇಶೀಯ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ 144 GW ಗೆ ವಿಸ್ತರಿಸಿದೆ. ಭಾರತವನ್ನು ಪ್ರಮುಖ ಶುದ್ಧ ಇಂಧನ ಮಾರುಕಟ್ಟೆಯಾಗಿ ಮಾತ್ರವಲ್ಲದೆ ವಿಕಸಿತ ಭಾರತ್ 2047ರ ಹಾದಿಯಲ್ಲಿ ವಿಶ್ವಾಸಾರ್ಹ ಮತ್ತು ಹೂಡಿಕೆ ಕೇಂದ್ರವಾಗಿ ಸಹ ಆಕರ್ಷಣೆಯಲ್ಲಿದೆ ಎಂದು ಸಚಿವ ಜೋಶಿ ಹೇಳಿದರು.

ಶುದ್ಧ ಇಂಧನ ನಾಯಕತ್ವದಲ್ಲಿ ಭಾರತ:

ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯ ಮೂರನೇ ದಿನ ಉನ್ನತ ಮಟ್ಟದ ಸರಣಿ ಕಾರ್ಯಕ್ರಮಗಳನ್ನು ನಡೆಸಿದ ಜೋಶಿ, ನ್ಯಾಯಯುತ, ಕೈಗೆಟುಕುವ ಮತ್ತು ಜಾಗತಿಕ ಇಂಧನ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳಿದರು.

ವಿಶ್ವ ಆರ್ಥಿಕ ವೇದಿಕೆ ಅಧ್ಯಕ್ಷ ಮತ್ತು ಸಿಇಒ ಬೋರ್ಗೆ ಬ್ರೆಂಡೆ ಮತ್ತು ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್, ಐಟಿ, ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ರಚನಾತ್ಮಕ ಚರ್ಚೆ ನಡೆಸಿದರು.

ಆರ್ಥಿಕ ಮತ್ತು ಅಭಿವೃದ್ಧಿ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ ಸಹಕಾರದ ಅಗತ್ಯವಿದೆ. ಜಾಗತಿಕ ಒಮ್ಮತಕ್ಕೆ ವಿಶ್ವ ಆರ್ಥಿಕ ವೇದಿಕೆಯಂತಹ ಬಹುಪಕ್ಷೀಯ ವೇದಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಪ್ರತಿಪಾದಿಸಿದರು.

ಸಮಗ್ರ ಇಂಧನ ಪರಿವರ್ತನೆ ಮತ್ತು ದಕ್ಷಿಣ ಸಹಕಾರಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಶುದ್ಧ ಇಂಧನಕ್ಕಾಗಿ ಜಾಗತಿಕ ಸಮುದಾಯವು ಸ್ಥಿತಿಸ್ಥಾಪಕ ಮತ್ತು ಹವಾಮಾನ-ಸುರಕ್ಷಿತ ಭವಿಷ್ಯದತ್ತ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಅಂತರಾಷ್ಟ್ರೀಯ ಸೌರ ಒಕ್ಕೂಟದಂತಹ ವೇದಿಕೆಗಳ ಸಹಕಾರವೂ ಅತ್ಯಗತ್ಯವಾಗಿದೆ ಎಂದು ಹೇಳಿದರು.

ದುಂಡುಮೇಜಿನ ಸಭೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಜಿಂಬಾಬ್ವೆ ಗಣರಾಜ್ಯದ ವಿದೇಶಾಂಗ ವ್ಯವಹಾರ ಮತ್ತು ಅಂತರಾಷ್ಟ್ರೀಯ ವ್ಯಾಪಾರ ಸಚಿವ ಅಮೋನ್ ಮುರ್ವಿರಾ ಭಾಗವಹಿಸಿದ್ದರು. ದೇವೇಂದ್ರ ಫಡ್ನವೀಸ್ ಮಾತನಾಡಿ, ಸಚಿವ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ತ್ವರಿತ ಪ್ರಗತಿ ಮತ್ತು ಸಾಧನೆ ತೋರಿದೆ ಎಂದು ಶ್ಲಾಘಿಸಿದರು.

ಶುದ್ಧ ಇಂಧನ ಸಹಯೋಗ:

WEF 2026ರಲ್ಲಿ ಪ್ರಲ್ಹಾದ್ ಜೋಶಿ ಅವರು ಮರ್ಕ್ಯುರಿಯಾ ಗ್ರೂಪ್‌ನ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿ ಗುಯಿಲೌಮ್ ವರ್ಮರ್ಷ್ ಅವರೊಂದಿಗೆ ರಚನಾತ್ಮಕ ಸಭೆ ನಡೆಸಿದರು. ಮಾರುಕಟ್ಟೆ ಆಧಾರಿತ ಕಾರ್ಯವಿಧಾನಗಳ ಮೂಲಕ ನವೀಕರಿಸಬಹುದಾದ ಶಕ್ತಿಯನ್ನು ಅಳೆಯುವುದು, ಇಂಗಾಲದ ಮಾರುಕಟ್ಟೆಗಳು ಮತ್ತು ಹವಾಮಾನ ಹಣಕಾಸು ಬಲಪಡಿಸುವುದು ಮತ್ತು ಹಸಿರು ಹೈಡ್ರೋಜನ್, ಜೈವಿಕ ಇಂಧನಗಳು ಮತ್ತು ಇಂಧನ ಸಂಗ್ರಹಣೆಯನ್ನು ಮುಂದುವರಿಸುವುದು ಸೇರಿದಂತೆ ಭಾರತದ ಶುದ್ಧ ಇಂಧನ ಮತ್ತು ಇಂಧನ ಪರಿವರ್ತನೆಯ ಆದ್ಯತೆಗಳಿಗೆ ಅನುಗುಣವಾಗಿ ಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಶೇ.50ರಷ್ಟು ಹೂಡಿಕೆ:

ಹಸಿರು ಇಂಧನದಲ್ಲಿ ಸುಮಾರು 50 ಪ್ರತಿಶತದಷ್ಟು ಹೂಡಿಕೆ ಮಾಡುವ ಮರ್ಕ್ಯುರಿಯಾ ಗ್ರೂಪ್‌ನ ಬದ್ಧತೆ ಮತ್ತು ಭಾರತದ ವಿಸ್ತರಿಸುತ್ತಿರುವ ಶುದ್ಧ ಇಂಧನ ಪರಿಸರ ವ್ಯವಸ್ಥೆಯಲ್ಲಿ ಅದರ ಆಸಕ್ತಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ವಾಗತಿಸಿದರು.


Share

You cannot copy content of this page