ಬೆಂಗಳೂರು: ಬೆಂಗಳೂರಿನ ತ್ಯಾಜ್ಯ, ವಾಯುಮಾಲಿನ್ಯ, ಪ್ಲಾಸ್ಟಿಕ್ ಸೇರಿದಂತೆ ಹಲವು ಸಮಸ್ಯೆ ಶಾಶ್ವತ ಪರಿಹಾರ ಸೂಚಿಸಿದ ಐದು ಸ್ಟಾರ್ಟ್ಅಪ್ಗಳನ್ನು ಅಂತಿಮವಾಗಿ ಆಯ್ಕೆ ಮಾಡಿದ್ದು, ತಲಾ 25 ಲಕ್ಷ ರೂ. ಬಹುಮಾನ ಘೋಷಿಸಲಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಬೆಂಬಲದಲ್ಲಿ ಅನ್ಬಾಕ್ಸಿಂಗ್ ಬಿಎಲ್ಆರ್ ಆಯೋಜಿಸಿದ್ದ “ನಮ್ಮ ಬೆಂಗಳೂರು ಚಾಲೆಂಜ್ʼ೨೬ ಸ್ಪರ್ಧೆಯ ವಿಜೇತ ತಂಡಗಳ ಘೋಷಣಾ ಸಮಾರಂಭದಲ್ಲಿ, ಬೆಂಗಳೂರಿನ ಸಮಸ್ಯೆಗೆ ವಿನೂತನ ಐಡಿಯಾ ನೀಡಿದ್ದ ಐದು ಸ್ಟಾರ್ಟ್ಅಪ್ಗಳನ್ನು ಬಿಐಸಿಯಲ್ಲಿ ನಡೆದ ಸಮಾರಂಭದಲ್ಲಿ ಆಯ್ಕೆ ಮಾಡಲಾಯಿತು. ನಮ್ಮ ಬೆಂಗಳೂರು ಚಾಲೆಂಜ್ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಒಟ್ಟು 60ಕ್ಕೂ ಅಧಿಕ ಅರ್ಜಿಗಳು ಈ ವೇಳೆ ಸ್ವೀಕೃತವಾಗಿದ್ದು, ಈ ಪೈಕಿ 5 ಸ್ಟಾರ್ಟ್ ಅಪ್ಗಳು ಆಯ್ಕೆಯಾದವು.
ಐದು ಸ್ಟಾರ್ಟ್ಅಪ್ಗಳು ಮಾಹಿತಿ:
1.“ಕಾರ್ಬನ್ ಕ್ರಾಫ್ಟ್ ಡಿಸೈನ್” ಸ್ಟಾರ್ಟ್ಅಪ್, (ಕೈಗಾರಿಕಾ ತ್ಯಾಜ್ಯಗಳ ಮರುಬಳಕೆಯಿಂದ ಕಾರ್ಬನ್ ಬ್ಲಾಕ್ ತಯಾರಿಕೆ) , 2.ಸತಿಕ್ಯೂ ಕಾಂಕ್ರೀಟ್ ತಯಾರಕ ಸ್ಟಾರ್ಟ್ಅಪ್ (ಕಡಿಮೆ ಇಂಗಾಲ ಬಿಡುಗಡೆ ಮಾಡುವ ಮುಂದಿನ ಪೀಳಿಗೆಯ ಸಿಮೆಂಟ್ ಬೈಂಡರ್ಗಳ ಅಭಿವೃದ್ಧಿ), 3.ಟೆಲ್ಲಸ್ ಹ್ಯಾಬಿಟಟ್” ಸ್ಟಾರ್ಟ್ಅಪ್ (ಕೊಳಚೆ ನೀರುಗಳ ಶುದ್ಧೀಕರಣ, ಮರುಬಳಕೆ), 4. ಗೋ ಡು ಗುಡ್” ಸ್ಟಾರ್ಟ್ಅಪ್ (ಆಹಾರ ಪ್ಯಾಕೇಜಿಂಗ್ನಲ್ಲಿ ಪ್ಲಾಸ್ಟಿಕ್ ಪದರಗಳನ್ನು ಸಸ್ಯ ಆಧಾರಿತ ಲೇಪನಗೊಳಿಸುವುದು, ಆರೋಗ್ಯಕ್ಕೆ ಲಾಭದಾಯಕ) 5. “ಸನ್ಬರ್ಡ್ ಸ್ಟ್ರಾ” ಸ್ಟಾರ್ಟ್ಅಪ್, (ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ, ಬಳಕೆ ನಂತರ ಗೊಬ್ಬರವಾಗಲಿದೆ).
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ಬೆಂಗಳೂರು ರಸ್ತೆ ಗುಂಡಿ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದೆ, ಇಂತಹ ಸ್ಟಾರ್ಟ್ಅಪ್ಗಳು ಹೊರಬಂದು, ಸಮಸ್ಯೆಗೆ ಪರಿಹಾರ ಸೂಚಿಸುವುದಕ್ಕೆ ನಮ್ಮ ಹೃತ್ಪೂರ್ವಕ ಸ್ವಾಗತವಿದೆ ಎಂದು ಹೇಳಿದರು.
ಕೆರೆ ನೀರು ನಿರ್ವಹಣೆ ಸಂಬಂಧ ಫ್ಲೇಜೆನ್ ಎಂಬ ಸ್ಟಾರ್ಟ್ಅಪ್ ನೀಡಿದ ಐಡಿಯಾ ಬಹಳ ವಿಭಿನ್ನವಾಗಿದ್ದು, ಅವರೊಂದಿಗೆ ಹೆಚ್ಚಿನ ಮಾತುಕತೆ ಹೊಂದುವ ಆಸಕ್ತಿ ಇದೆ. ಇಂತಹ ಇನ್ನಷ್ಟು ಐಡಿಯಾಗಳು ಹೊರಬಂದರೆ, ನಮಗೂ ಸಹಾಯವಾಗಲಿದೆ ಎಂದು ಹೇಳಿದರು.
ಅನ್ ಬಾಕ್ಸಿಂಗ್ ಬಿಎಲ್ಆರ್ನ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಪ್ರಶಾಂತ್ ಪ್ರಕಾಶ್, ಗಾರ್ಡನ್ ಸಿಟಿ ಬೆಂಗಳೂರು ಆಧುನೀಕರಣಗೊಳ್ಳುತ್ತಿದ್ದಂತೆ ಸಾಕಷ್ಟು ಹವಾಮಾನ ಒತ್ತಡಕ್ಕೆ ಒಳಗಾಗಿ ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ನಮ್ಮ ಬೆಂಗಳೂರು ಚಾಲೆಂಜ್ನನ್ನು ಪ್ರತಿವರ್ಷ ಆಯೋಜಿಸುತ್ತಾ ಬರಲಾಗಿದ್ದು, ಒಂದೊಂದು ವರ್ಗದಲ್ಲೂ ಬದಲಾವಣೆ ತರಲು ಮುಂದಾಗಿದ್ದೇವೆ, ಸರ್ಕಾರ, ಉದ್ಯಮಿಗಳು, ಕೈಗಾರಿಕೆಗಳು ಒಟ್ಟಿಗೆ ಸೇರಿದಂತೆ ಎಲ್ಲಾ ಪರಿಹಾರಗಳು ನಮ್ಮಲ್ಲಿಯೇ ಇರಲಿದೆ ಎಂಬುದು ಸಾಬೀತು ಮಾಡುತ್ತಿದ್ದೇವೆ ಎಂದು ಹೇಳಿದರು.
ಅನ್ ಬಾಕ್ಸಿಂಗ್ ಬಿಎಲ್ಆರ್ನ ಸಹ-ಸಂಸ್ಥಾಪಕಿ ಜಿ ಸಿಇಒ ಮಾಲಿನಿ ಗೋಯಲ್ ಮಾತನಾಡಿ, ನಮ್ಮಲ್ಲಿ ಸಮಸ್ಯೆಗೆ ಪರಿಹಾರ ತಿಳಿದಿದ್ದರೂ ಅದರ ಅಳವಡಿಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ನಮ್ಮ ಬೆಂಗಳೂರು ಚಾಲೆಂಜ್ ಮೂಲಕ ಪ್ರತಿ ಸಮಸ್ಯೆಗೂ ಶಾಶ್ವತ ಪರಿಹಾರ ಸೂಚಿಸಲು ಒಂದೊಂದೇ ಹೆಜ್ಜೆ ಇಡುತ್ತಿದ್ದೇವೆ, ಭವಿಷ್ಯದಲ್ಲಿ ಬೆಂಗಳೂರು ಖಂಡಿತ ಮೊದಲಿನ ವೈಭವಕ್ಕೆ ಮರಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, ಸೋಶಿಯಲ್ ಆಲ್ಫಾ ಸಂಸ್ಥಾಪಕ ಮನೋಜ್ ಕುಮಾರ್, ಬಿಐಎಎಲ್ ಸಿಇಒ ಹರಿಮರಾರ್ ಮತ್ತಿತರರು ಪಾಲ್ಗೊಂಡಿದ್ದರು.
