ಬೆಂಗಳೂರು: 2025 ರ ಏಪ್ರಿಲ್ ನಿಂದ ಸೆಪ್ಟೆಂಬರ್ ಮಾಹೆಯವರೆಗೆ ರಾಜ್ಯಕ್ಕೆ ವಿದೇಶಗಳಿಂದ 80997 ಕೋಟಿ ರೂ ಬಂಡವಾಳ ಹೂಡಿಕೆಯಾಗಿರುವುದು ಐತಿಹಾಸಿಕ ದಾಖಲೆಯಾಗಿದೆ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಇಂದು ಬೆಳಿಗ್ಗೆ ವಿಧಾನಸಭೆಯ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಇಷ್ಟು ದಾಖಲೆ ಪ್ರಮಾಣದಲ್ಲಿ ಹೂಡಿಕೆಯಾಗಲು ರಾಜ್ಯ ಸರ್ಕಾರದ ಪಾರದರ್ಶಕವಾದ, ಪ್ರಗತಿಪಥವಾದ ಮತ್ತು ದಕ್ಷ ಆಡಳಿತವೇ ಕಾರಣ ಎಂದು ತಿಳಿಸಿದರು.
ನಮ್ಮ ರಾಜ್ಯವು ಡಿಸೆಂಬರ್ ಅಂತ್ಯದವರೆಗೆ 99,309 ಮಿಲಿಯನ್ ಡಾಲರ್ ನಷ್ಟು ರಫ್ತು ವಹಿವಾಟು ಮಾಡಿರುವುದು ನಮ್ಮ ಸರ್ಕಾರದ ಸಾಧನೆಯಲ್ಲವೆ. ತಲಾ ಆದಾಯ ಗಳಿಕೆಯಲ್ಲಿ ದೇಶದಾದ್ಯಂತ 1 ಲಕ್ಷ 15 ಸಾವಿರ ರೂಗಳಿದ್ದರೆ ರಾಜ್ಯದ ತಲಾ ಆದಾಯ 2 ಲಕ್ಷ 4 ಸಾವಿರ ರೂ ಇರುವುದು ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದರು.
ವಿರೋಧಪಕ್ಷದವರು ಅಭಿವೃದ್ಧಿ ಎಂದರೆ ರಸ್ತೆ, ಕಟ್ಟಡ ನಿರ್ಮಿಸುವುದು ಎಂದು ಭಾವಿಸಿದೆ. ಅದರಂತೆ ಒಂದು ವರ್ಷದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಆಗಿರುವ ಪ್ರಗತಿಯನ್ನು ಗಮನಿಸುವುದಾದರೆ 23 ಸಾವಿರ ಕೋಟಿ ರೂ ವೆಚ್ಚದಲ್ಲಿ 14 ಸಾವಿರ ಕಿ.ಮೀ ರಸ್ತೆಯನ್ನು, 389 ಸೇತುವೆ ಹಾಗೂ 605 ಕಟ್ಟಡಗಳ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಈಗಾಗಲೇ 10 ಸಾವಿರ ಕಿ.ಮೀ ರಸ್ತೆ, 237 ಸೇತುವೆ ಹಾಗೂ 457 ಕಟ್ಟಡಗಳನ್ನು ನಿರ್ಮಿಸಲಾಗಿರುವುದು ನಮ್ಮ ಸರ್ಕಾರದ ಅಭಿವೃದ್ಧಿ ಅಲ್ಲವೆ ಎಂದು ವಿರೋಧ ಪಕ್ಷದವರಿಗೆ ಹೇಳಿದರು.
ಅದೇ ರೀತಿ ರೈತರಿಗೆ ಅನುಕೂಲವಾಗಬೇಕೆಂದು ನಮ್ಮ ಸರ್ಕಾರವು ರೈತಪಥ ಯೋಜನೆಯಡಿ 1425 ಕಿ.ಮೀ ರಸ್ತೆಯನ್ನು ಸೃಜನೆ ಮಾಡಿದೆ. ಇಂದು ಸದನದಲ್ಲಿ ವಿರೋಧಪಕ್ಷದವರು ಅಂಕಿ-ಸಂಖ್ಯೆಯನ್ನು ಬದಿಗಿಟ್ಟು, ಕೆಲವರ ಭಾವನೆಗಳೊಂದಿಗೆ ವಾದ ವಿವಾದಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ನಾನು ನಮ್ಮ ಸರ್ಕಾರದ ಸಾಧನೆಗಳನ್ನು ಅಂಕಿ-ಅಂಶಗಳ ಮೂಲಕ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಮಾಹಿತಿಯನ್ನು ಸದನಕ್ಕೆ ನೀಡಿದರು.
15 ನೇ ಹಣಕಾಸಿನಲ್ಲಿ ನಿಗದಿಯಾಗಿರುವ ಬಹುಪಾಲು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಇದುವರೆವಿಗೂ ಅನುದಾನ ಬಿಡುಗಡೆಯಾಗಿರುವುದಿಲ್ಲ. ಕೇಂದ್ರ ಸರ್ಕಾರವು ತಮ್ಮದೇ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡುತ್ತಿದೆ. ಆದರೆ ಇತರೆ ರಾಜ್ಯಗಳಿಗೆ ಸರಿಯಾಗಿ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ ಎಂದರು.
