ಸಮಗ್ರ ಸುದ್ದಿ

ಶ್ರೀ ದುರದುಂಡೇಶ್ವರ ಮಠದ ಶೈಕ್ಷಣಿಕ, ದಾಸೋಹ ಸೇವೆ ನಿರಂತರ : ಸತೀಶ ಜಾರಕಿಹೊಳಿ

Share

ಬೆಳಗಾವಿ: 400 ವರ್ಷಗಳ ಇತಿಹಾಸ ಹೊಂದಿರುವ ಅರಭಾವಿ ಶ್ರೀ ದುರದುಂಡೇಶ್ವರ ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ದಾಸೋಹ ಸೇವೆ ಇಂದಿಗೂ ನಡೆದುಬಂದಿದ್ದು, ಇಂದು ಅನೇಕ ನಾಗರಿಕರ ಬಾಳಿನ ದಾರಿದೀಪವಾಗಿ ಈ ದುರದುಂಡೇಶ್ವರ ಮಠವು ನಡೆದು ಮುಂದೆ ಸಾಗುತ್ತಿದ್ದು ಈ ಶ್ರೀ ಮಠದ ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ಸಹಕಾರ ಇದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಅವರು ಘಟಪ್ರಭಾ ಪಟ್ಟಣದ ಜಗದ್ಗುರು ಶ್ರೀ ದುರದುಂಡೇಶ್ವರ ಮಠ ಟ್ರಸ್ಟ್ ಅರಭಾವಿಮಠ ಇದರ ಪ್ರೌಢ ಶಾಲೆ ಹಾಗೂ ಪಿ ಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಮಾತನಾಡಿ 50 ವರ್ಷಗಳ ಹಿಂದೆ ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹಿಂದಿನ ಶ್ರೀಗಳು ಪ್ರಾರಂಭಿಸಿದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಬೆಳವಣಿಗೆಗೆ ಸದಾ ಪಾತ್ರ ವಹಿಸಿದೆ, ಇಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ತಮ್ಮ ಮನೆತನ, ಹುಟ್ಟಿದ ಊರು, ಕಲಿತ ಶಾಲೆಗೆ ಕೀರ್ತಿ ತರುವ ಕೆಲಸ ಮಾಡುವ ಕೆಲಸ ಮಾಡಬೇಕು. ಈ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ. ಎಲ್ಲ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬೆಳವಣಿಗೆಗೆ ಮುಂದೆ ಬರಬೇಕು ಎಂದರು.

ಪ್ರಸಕ್ತ ಶಿಕ್ಷಣದಲ್ಲಿ ಕ್ವಾಂಟಿಟಿ ಇದೆ ಆದರೆ ಕ್ವಾಲಿಟಿ ಇಲ್ಲ, ಪಾಲಕರು ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಗಮನ ಹರಿಸಬೇಕು, ಶಿಕ್ಷಣದ ಜೊತೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಶ್ರಮಿಸಿ ಇಂದು ಈ ಉನ್ನತ ಮಟ್ಟದ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಿಂದಿನ ದಿ. ಶ್ರೀಗಳು ಹಾಗೂ ಈಗಿನ ಶ್ರೀಗಳ ಪರಿಶ್ರಮ ಹಾಗೂ ಈ ಭಾಗದ ಜನ ಶ್ರೀ ಮಠದ ಮೇಲೆ ಇರುವ ನಂಬಿಕೆ ಕಾರಣ ಎಂದರು.

ಸಾನಿಧ್ಯ ವಹಿಸಿ ಅರಭಾವಿ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ಮೊದಲಿನ ಕಾಲದಲ್ಲಿ ಶಿಕ್ಷಣದ ಕೊರತೆ ಇತ್ತು ಆದರೆ ಅವರಲ್ಲಿ ಸಂಸ್ಕಾರ ಇತ್ತು, ಆದರೆ ಈಗ ಉತ್ತಮ ಮಟ್ಟದ ಶಿಕ್ಷಣ ವ್ಯವಸ್ಥೆ ಇದೆ ಆದರೆ ಸಂಸ್ಕಾರ ಇಲ್ಲಾ ಅಣ್ಣ ತಮ್ಮಂದಿರು ಪಾಲು ತೆಗೆದುಕೊಳ್ಳುತ್ತಾರೆ ಆದರೆ ನಾವು ಕಲಿತ ಶಿಕ್ಷಣದಲ್ಲಿ ಪಾಲು ಕೊಡಲು ಆಗದು, ಶಿಕ್ಷಣದಿಂದ ಎಲ್ಲವು ಸಾಧ್ಯ ಇಲ್ಲಾ, ವಿವೇಕದಿಂದ ಎಲ್ಲ ಇದೆ. ಒಬ್ಬ ವ್ಯಕ್ತಿ 9 ನೇ ತರಗತಿ ಫೇಲ್ ಆಗಿ ಉಪ್ಪಿನಕಾಯಿ ಉದ್ಯೋಗ ಮಾಡಿ ಸಾವಿರ ರೂ ಗಳಿಸಿ, ಫೇಲಾದ ವಿದ್ಯಾರ್ಥಿಗಳನ್ನು ಕರೆಸಿಕೊಂಡು ವ್ಯಾಪಾರ ಮಾಡಿ, ಲಕ್ಷಾಂತರ ಗಳಿಸಿ, ಒಂದು ಮಾಧ್ಯಮ ಖರೀದಿ ಮಾಡಿ ಇಂದು ಈ ಟಿವಿ ಮಾಡಿ, ರಾಮೋಜಿ ಫಿಲಂ ಸಿಟಿ ಮಾಡಿ ದೇಶಕ್ಕೆ ಮಾದರಿ ಆಗಿ ಅನೇಕರಿಗೆ ಉದ್ಯೋಗ ಕೊಟ್ಟವರು ರಾಮೋಜಿರಾವ್ ಅವರ ಆದರ್ಶ ಕಲಿಯಬೇಕು ಎಂದರು.

400 ವರ್ಷಗಳಿಂದ ಅರಭಾವಿ ಮಠ ಅನೇಕ ಸಾಮಾಜಿಕ, ಶೈಕ್ಷಣಿಕ, ದಾಸೋಹ ಕೆಲಸ ಮಾಡಿ ಮುನ್ನಡೆದಿದೆ, ರಾಜ ಮಲಸರ್ಜ, ಸಾಂಗ್ಲಿ ಪೆಶ್ವೇಗಳು ಮಠದ ಭಕ್ತರು, ಮಠವನ್ನು ಅನೇಕ ಪವಾಡ ಮಹಾನ್ ಶ್ರೀಗಳು ನಡೆಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ್ ಲಕ್ಷ್ಮಣನಿಗೆ ಆಶ್ರಯ ನೀಡಿದ ಮಠ ಅಂದು ಇಂದು ದಾಸೋಹ ನಿರಂತರವಾಗಿ ನಡೆದಿದೆ ಎಂದರು. ನಮ್ಮ ಹೈಸ್ಕೂಲ್ ಹಳೇ ವಿದ್ಯಾರ್ಥಿಗಳು ಜಾಗೃತವಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಬೆಳಗಾವಿ- ನಾಗನೂರ ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಶ್ರೀ ದುರದುಂಡೇಶ್ವರ ಶ್ರೀಗಳ ಕನಸನ್ನು ಇಂದು ಶ್ರೀ ಗುರುಬಸವ ಮಹಾಸ್ವಾಮಿಗಳು ಕೋಟ್ಯಂತರ ರೂ. ಗಳನ್ನು ಖರ್ಚು ಮಾಡಿ ಸುಸಜ್ಜಿತ ಕಟ್ಟಡ ಮಾಡಿ ಈ ಭಾಗದ ವಿದ್ಯಾರ್ಥಿಗಳ ಕನಸಿನ ವ್ಯಾಸಂಗಕ್ಕೆ ಅನು ಮಾಡಿದ್ದಾರೆ. ಸ್ಕಿಲ್ ಇಂಡಿಯಾ ತನ್ನ ಜ್ಞಾನದಿಂದ ಇಂದು ನಾವು ಏನೂ ಬೇಕಾದರೂ ಸಾದಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ 1968 ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿಗೆ ಶುಲ್ಕ ತೆಗೆದುಕೊಳ್ಳದೆ ಗುಣಮಟ್ಟದ ಶಿಕ್ಷಣ ನೀಡಿ ಇಂದು ಸುಸಜಿತ ಕಟ್ಟಡ ಹೊಂದಿ ಈ ಭಾಗದ ವಿದ್ಯಾರ್ಥಿಗಳಿಗೆ ಬೆಳಕಾಗಿದೆ ಎಂದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಜೀವನದಲ್ಲಿ ಮುಂದೆ ಬರಲು ಗುಣಮಟ್ಟದ ಶಿಕ್ಷಣ ಅತೀ ಅವಶ್ಯ ಇದ್ದು ಸ್ಪರ್ಧೆ, ಗ್ಲೋಬಲ್ ಕ್ವಾಲಿಟಿ ಶಿಕ್ಷಣದಿಂದ ಪೈಪೋಟಿ ಮಾಡಿ ಶಿಕ್ಷಣ ನೀಡುತ್ತಿದ್ದು ಇದರ ಸದುಪಯೋಗ ಈ ಭಾಗದ ಜನ ಪಡೆಯಬೇಕು ಎಂದರು.


Share

You cannot copy content of this page