ಸಮಗ್ರ ಸುದ್ದಿ

ಯುದ್ಧ ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ರಾಯಭಾರಿಗಳ ಜತೆ ಮಾತುಕತೆ; ಸಚಿವ ಪ್ರಹ್ಲಾದ ಜೋಶಿ

Share

ನವದೆಹಲಿ: ಇರಾನ್-ಇಸ್ರೇಲ್ ಯುದ್ಧ ಸನ್ನಿವೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಅಲ್ಲಿನ ರಾಯಭಾರಿ ಕಚೇರಿ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಜಗತ್ತಿನ ಎಲ್ಲೇ ಆಗಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿದೆ. ಹಿಂದೆ ಯುಕ್ರೇನ್ ಅಲ್ಲಿ ಸಿಲುಕಿದ್ದವರನ್ನು ಮರಳಿ ಕರೆ ತಂದಿದ್ದೇವೆ. ಭಾರತೀಯರು ಎಲ್ಲೇ ಇದ್ದರೂ ಅವರ ಸುರಕ್ಷತೆಗೆ ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ ಎಂದಿದ್ದಾರೆ.

ಇರಾನ್-ಇಸ್ರೇಲ್ ಯುದ್ಧದ ಭೀಕರತೆಯಿಂದಾಗಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಈ ಸಂಬಂಧ ಹಿರಿಯ ಸಚಿವರೊಂದಿಗೆ ತುರ್ತು ಚರ್ಚೆ ನಡೆಸಿದ್ದು, ಎಲ್ಲಾ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರು ಆತಂಕ ಪಡಬೇಕಿಲ್ಲ; ಕನ್ನಡಿಗರು ಮಾತ್ರವಲ್ಲ ಭಾರತೀಯರನ್ನೆಲ್ಲ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರ್ವ ಸನ್ನದ್ಧವಾಗಿದೆ. ಈಗಾಗಲೇ ರಾಯಭಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಯಾರೊಬ್ಬರೂ ಆತಂಕ ಪಡಬೇಕಿಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ, ಆತಂಕಿತ ಕುಟುಂಬಸ್ಥರಿಗೆ ಸ್ಥೈರ್ಯ ಹೇಳಿದ್ದಾರೆ.

ಯುದ್ಧಪೀಡಿತ ಪ್ರದೇಶಗಳಲ್ಲಿ ವಿಮಾನ ಸಂಚಾರ ಅಪಾಯಕಾರಿ ಆಗಿದ್ದು, ತಜ್ಞರ ಸಲಹೆ ಪಡೆಯಲಾಗುತ್ತಿದೆ. ಭಾರತೀಯರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದಿರುವ ಸಚಿವರು, ವಿಧಾನಪರಿಷತ್ ಸದಸ್ಯ ಭೋಜೇಗೌಡರು ಸೇರಿದಂತೆ ಸಂಕಷ್ಟದಲ್ಲಿರುವ ಎಲ್ಲಾ ಕನ್ನಡಿಗರ ರಕ್ಷಣೆಗೆ ಶ್ರಮಿಸುತ್ತೇವೆಂದು ಜೋಶಿ ಹೇಳಿದ್ದಾರೆ.

ದುಬೈನಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತರುತ್ತೇವೆ: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ವೇಳೆ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಯಾರೂ ಆತಂಕಪಡಬೇಕಿಲ್ಲ. ಸದ್ಯ ದುಬೈನಿಂದ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ಅಲ್ಲಿರುವವರನ್ನು ವಾಪಸ್ ಕರೆತರುವ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.


Share

You cannot copy content of this page