ಬೆಂಗಳೂರು :ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ (ತರಬೇತಿ ಕೇಂದ್ರ), ಲಾಲ್ಬಾಗ್ ವತಿಯಿಂದ 2026-27 ನೇ ಸಾಲಿನ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿಯು ದಿನಾಂಕ 02-05-2026 ರಿಂದ 28-02-2027 ರವರೆಗೆ ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ಅರ್ಹತಾ ಮಾನದಂಡಗಳು:
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ (ಬೆಂಗಳೂರು ದಕ್ಷಿಣ) ಹಾಗೂ ಕೋಲಾರ ಜಿಲ್ಲೆಗಳ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಅಭ್ಯಸಿಸಿ ತೇರ್ಗಡೆ ಯಾಗಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ: 18 ರಿಂದ 33 ವರ್ಷಗಳು. ಇತರ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷಗಳು. ಮಾಜಿ ಸೈನಿಕರಿಗೆ 33 ರಿಂದ 65 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರಬೇಕು ಮತ್ತು ಸ್ವಂತ ಸಾಗುವಳಿ ಮಾಡುತ್ತಿರಬೇಕು. ಇದಕ್ಕೆ ಪೂರಕವಾಗಿ ಪಹಣಿ ಸಲ್ಲಿಸುವುದು ಕಡ್ಡಾಯ.
ತರಬೇತಿಯ ಸೌಲಭ್ಯಗಳು ಮತ್ತು ವಿಶೇಷತೆಗಳು:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 1,750/- ಗಳ ಶಿಷ್ಯವೇತನ ನೀಡಲಾಗುವುದು (ಮಾಜಿ ಸೈನಿಕರನ್ನು ಹೊರತುಪಡಿಸಿ). ಅಭ್ಯರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು ಹಾಗೂ ಪ್ರಾಯೋಗಿಕ ತರಬೇತಿಯ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಶಕ್ತಿ ಹೊಂದಿರಬೇಕು.
ಅರ್ಜಿಯನ್ನು 2026 ನೇ ಮಾರ್ಚ್ 12 ರಿಂದ ಏಪ್ರಿಲ್ 13 ರವರೆಗೆ ಆಯಾ ಜಿಲ್ಲೆಯ ಜಂಟಿ ನಿರ್ದೇಶಕರ ಕಛೇರಿಯಲ್ಲಿ ಅಥವಾ ಇಲಾಖೆಯ ವೆಬ್ಸೈಟ್ https://horticulturedir.karnataka.gov.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಸಾಮಾನ್ಯ ವರ್ಗದವರಿಗೆ ಅರ್ಜಿ ಶುಲ್ಕ ರೂ. 30/- ಹಾಗೂ ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.15/- ಶುಲ್ಕವಿರುತ್ತದೆ. ಇದನ್ನು ಐಪಿಓ, ಡಿಡಿ ಅಥವಾ ಕೆ-2 ಚಲನ್ ಮೂಲಕ ಪಾವತಿಸಿ ಅರ್ಜಿ ಲಗತ್ತಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ 2026 ನೇ ಏಪ್ರಿಲ್ 15 ರ ಸಂಜೆ 5:30 ರೊಳಗೆ ಸಂಬಂಧಿಸಿದ ಜಿಲ್ಲಾ ಜಂಟಿ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳನ್ನು 2026 ನೇ ಏಪ್ರಿಲ್ 23 ರಂದು ನಡೆಯುವ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಲಾಲ್ಬಾಗ್ ಕಛೇರಿಯ ದೂರವಾಣಿ ಸಂಖ್ಯೆ 9886839652 / 080-22240444 ಅಥವಾ ಆಯಾ ಜಿಲ್ಲೆಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಸಹಾಯಕ ತೋಟಗಾರಿಕೆ ನಿರ್ದೇಶಕರು, ತರಬೇತಿ ಕೇಂದ್ರ, ಲಾಲ್ಬಾಗ್, ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
