ಬೆಂಗಳೂರು: ಗುಡ್ ಫ್ರೈಡೆ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ಕೇರಳದ ಕರಾವಳಿ ನಗರಿ ಕಣ್ಣೂರು ನಡುವೆ ಮಂಗಳೂರು ಜಂಕ್ಷನ್ ಮಾರ್ಗವಾಗಿ ಒಂದು ಟ್ರಿಪ್ ವಿಶೇಷ ರೈಲನ್ನು ಕಾರ್ಯಾಚರಣೆಗೊಳಿಸಲಿದೆ.
ರೈಲು ಸಂಖ್ಯೆ 06551 ಯಶವಂತಪುರ–ಕಣ್ಣೂರು ವಿಶೇಷ ಎಕ್ಸ್ಪ್ರೆಸ್ ರೈಲು ಏಪ್ರಿಲ್ 2, 2026ರ ಗುರುವಾರ ಬೆಳಿಗ್ಗೆ 11.50ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಏಪ್ರಿಲ್ 3ರ ಶುಕ್ರವಾರ ಮುಂಜಾನೆ 3.00 ಗಂಟೆಗೆ ಕಣ್ಣೂರು ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 06552 ಕಣ್ಣೂರು–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 3ರ ಶುಕ್ರವಾರ ಬೆಳಿಗ್ಗೆ 8.45ಕ್ಕೆ ಕಣ್ಣೂರಿನಿಂದ ಹೊರಟು, ಅದೇ ದಿನ ರಾತ್ರಿ 9.30ಕ್ಕೆ ಯಶವಂತಪುರವನ್ನು ತಲುಪಲಿದೆ.
ಈ ವಿಶೇಷ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟವಾಳ, ಮಂಗಳೂರು ಜಂಕ್ಷನ್, ಕಾಸರಗೋಡು, ಕಾಂಜನಗಾಡ್ ಮತ್ತು ಪಯ್ಯನ್ನೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲು ಒಟ್ಟು 21 ಬೋಗಿಗಳನ್ನು ಹೊಂದಿರಲಿದ್ದು, ಅವುಗಳಲ್ಲಿ 2 ಎಸಿ ಟು-ಟಯರ್, 6 ಎಸಿ ತ್ರೀ-ಟಯರ್, 7 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್ ಕಮ್ ಜನರೇಟರ್ ಕಾರ್ ಮತ್ತು ಬ್ರೇಕ್ ವ್ಯಾನ್ ಗಳು ಇರಲಿವೆ.
