ಸಮಗ್ರ ಸುದ್ದಿ

ಗಜೇಂದ್ರ ಆನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ|ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ ಆದೇಶದಂತೆ ಕ್ರಮ

Share

ಬೆಂಗಳೂರು: ಚಾಮರಾಜನಗರ ಜಿಲ್ಲೆ ಬೂದಿಪಡಗ ಆನೆ ಶಿಬಿರದಲ್ಲಿ ಒಂಟಿಯಾಗಿದ್ದ 63 ವರ್ಷದ ಗಜೇಂದ್ರ ಆನೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದಂತೆ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಹಲವು ಬಾರಿ ಭಾಗಿಯಾಗಿ ರಾಜ್ಯದ ಹೆಮ್ಮೆಯ ಪ್ರತೀಕವಾಗಿದ್ದ ಗಜೇಂದ್ರ ಚಾಮರಾಜನಗರ ಬೂದಿಪಡಗ ಶಿಬಿರದಲ್ಲಿ ಇತ್ತೀಚೆಗೆ ಒಂಟಿಯಾಗಿ ಹೋಗಿದ್ದ.

ಸಾಮಾನ್ಯವಾಗಿ ಆನೆಗಳು ಗುಂಪಾಗಿ ವಾಸಿಸುವ ಸೂಕ್ಷ್ಮ ಮನಸ್ಸಿನ ಜೀವಿಯಾಗಿದ್ದು, ಒಂಟಿತನದಿಂದ ಕೃಶವಾಗಿದ್ದಾನೆ, ಕಾಡಿಗೆ ಮೇಯಲು ಬಿಟ್ಟರೆ, ಕಾಡಾನೆಗಳೊಂದಿಗೆ ಕಾದಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದಾನೆ. ಹೀಗಾಗಿ ಸುರಕ್ಷಿತ ಆನೆ ಶಿಬಿರಕ್ಕೆ ಗಜೇಂದ್ರನನ್ನು ಸ್ಥಳಾಂತರಿಸಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನವೂ ನಡೆಯುತ್ತಿತ್ತು. ಹಲವರು ಈಶ್ವರ ಖಂಡ್ರೆ ಅವರಿಗೆ ಮನವಿಯನ್ನೂ ಅರ್ಪಿಸಿದ್ದರು.

ಜನರ ಭಾವನೆಗಳಿಗೆ ಮತ್ತು ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಕೂಡಲೇ ನಿಯಮಾನುಸಾರ ಕ್ರಮ ವಹಿಸುವಂತೆ ಕಳೆದ 26ರಂದು ಲಿಖಿತ ಆದೇಶ ನೀಡಿದ್ದರು.
ಇಂದು ಮಧ್ಯಾಹ್ನ ಬೂದಿ ಪಡಗದಲ್ಲಿ ಗಜೇಂದ್ರನಿಗೆ ಪೂಜೆ ಸಲ್ಲಿಸಿ, ಇಲಾಖೆಯ ಆನೆ ರಕ್ಷಣೆ ವಾಹನದಲ್ಲಿ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಗಜೇಂದ್ರ ಆನೆಯ ಅಭಿಮಾನಿಗಳು, ಸಾರ್ವಜನಿಕರ ಭಾವನೆಗೆ ಸ್ಪಂದಿಸಿದ ಈಶ್ವರ ಖಂಡ್ರೆ ಅವರಿಗೆ ಸಾಮಾಜಿಕ ತಾಣಗಳಲ್ಲಿ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.


Share

You cannot copy content of this page