ಸಮಗ್ರ ಸುದ್ದಿ

ಸ್ವಚ್ಛ ಸರ್ವೇಕ್ಷಣ್ 2025-26 ರ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ 30 ದೇವಸ್ಥಾನಗಳ ಸ್ವಚ್ಛತೆ ಮಾಡಲಾಗಿದೆ: ರಾಜೇಂದ್ರ ಚೋಳನ್

Share

ಬೆಂಗಳೂರು:ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ನಗರಪಾಲಿಕೆ ರೂಪಿಸಲು ಹಾಗೂ ಸ್ವಚ್ಛ ಸರ್ವೇಕ್ಷಣ್ 2025-26 ರ ಶ್ರೇಯಾಂಕ ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಬೇಕಾಗಿದ್ದು, ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಈಗಾಗಲೇ ರೂಪಿಸಲಾಗಿರುವ *ಕಾರ್ಯಯೋಜನೆಯ (ಆ್ಯಕ್ಷನ್ ಪ್ಲಾನ್ ನಂತೆ) 3ನೇ ಭಾಗವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ 30 ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶ ಹಾಗೂ ಐತಿಹಾಸಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಶುಚಿಗೊಳಿಸಲಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

3 ಟನ್ ತ್ಯಾಜ್ಯ ತೆರವುಗೊಳಿಸಲಾಗಿದ್ದು ಹಾಗೂ ಸ್ವಚ್ಛತೆ ಕಾಪಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.

ಧಾರ್ಮಿಕ ಸ್ಥಳಗಳಾದ ದೇವಸ್ಥಾನಗಳಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುವುದರಿಂದ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಶುಚಿ ಕಾಪಾಡುವ ಉದ್ದೇಶದಿಂದ ನಗರ ನೈರ್ಮಲ್ಯ ಕಾಪಾಡುವುದು ಅಗ್ಯತ್ಯವಿರುದ್ದು, ಈ ನಿಟ್ಟಿನಲ್ಲಿ ಸ್ವಚ್ಛ ಸರ್ವೇಕ್ಷಣ್-2025-26 ರ ಕೇಂದ್ರ ನಗರ ಪಾಲಿಕೆ ರೂಪಿಸಿರುವ ಸ್ವಚ್ಛತಾ ಅಭಿಯಾನದ 3ನೇ ಭಾಗವಾಗಿ ದೇವಸ್ಥಾನಗಳನ್ನು ಹಾಗೂ ಐತಿಹಾಸಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 30 ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಚ್ಛಗೊಳಿಸಿದ ಪ್ರಮುಖ ದೇವಸ್ಥಾನಗಳು

ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ, ಹೊಂಬೇಗೌಡನಗರದ ಶ್ರೀ ಆಂಜನೇಯ ದೇವಸ್ಥಾನ, ಸಿದ್ಧಾಪುರದ ಶ್ರೀರಾಮ ದೇವಸ್ಥಾನ, ವಿವಿಪುರಂ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ, ಗುಟ್ಟಹಳ್ಳಿ ಶ್ರೀ ಶಿವಶಂಕರ ದೇವಸ್ಥಾನ, ಸುಧಾಮನಗರದ ಶ್ರೀ ಗಣೇಶ ದೇವಸ್ಥಾನ, ಚಾಮರಾಜಪೇಟೆಯ ಶ್ರೀ ರಾಮೇಶ್ವರ ದೇವಸ್ಥಾನ, ರಾಯಪುರಂನ ಶ್ರೀ ಕಲ್ಲು ನಾಗರ ದೇವಸ್ಥಾನ, ಶಿವಾಜಿನಗರದ ಶ್ರೀ ಮುತ್ಯಾಲಮ್ಮ ದೇವಸ್ಥಾನ, ಜಿಬಿಎ ಕೇಂದ್ರ ಕಛೇರಿ ಆವರಣದ ಏಳು ಸುತ್ತಿನಕೋಟೆ ಸಪ್ತಮಾತ್ರಕಾ ಶ್ರೀ ಆದಿಪರಾಶಕ್ತಿ ದೇವಸ್ಥಾನ, ಸಿ.ವಿ. ರಾಮನ್ ನಗರದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ, ಇನ್ನಿತರೆ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದ್ದು, ದೇವಸ್ಥಾನಗಳ ಸುತ್ತಮುತ್ತ ಶುಚಿಗೊಳಿಸುವುದರೊಂದಿಗೆ ತ್ಯಾಜ್ಯ ಎಸೆಯದಂತೆ ಹಾಗೂ ಶುಚಿತ್ವ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ.

ಸುಮಾರು 545 ಸಿಬ್ಬಂದಿಗಳು ಭಾಗಿ

ದೇವಸ್ಥಾನಗಳ ಸ್ವಚ್ಛತಾ ಕಾರ್ಯದಲ್ಲಿ 105 ಅಧಿಕಾರಿಗಳು/ಸ್ವಚ್ಛತಾ ಸಿಬ್ಬಂದಿಗಳು ಹಾಗೂ 442 ಪೌರ ಕಾರ್ಮಿಕರು ಸೇರಿದಂತೆ ಒಟ್ಟು 545 ಜನ ಭಾಗಿಯಾಗಿದ್ದರು.

ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರ ಮೇಲುಸ್ತುವಾರಿಯಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಡಿಜಿಎಂ ಭೀಮೇಶ್ ನಾಯಕ್, ಆಯಾಯ ವಿಭಾಗಗಳ ಎಜಿಎಂ ಗಳು, ಪೌರಕಾರ್ಮಿಕರು, ಆಟೋ ಟಿಪ್ಪರ್ ಸಿಬ್ಬಂದಿಗಳು ಭಾಗಿಯಾಗಿದ್ದರು.


Share

You cannot copy content of this page