ಬೆಂಗಳೂರು: ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ಕಾಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಬೌರಿಂಗ್ ಆಸ್ಪತ್ರೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಏಳು ಜನ ಮೃತಪಟ್ಟಿದ್ದು, ಅದರಲ್ಲಿ 4 ಜನ ಬೀದಿ ಬದಿ ವ್ಯಾಪಾರಿಗಳು, ಇಬ್ಬರು ಕೇರಳದವರು. ಒಂದು ಮಗು ಸಾವನ್ನಪ್ಪಿದ್ದು, ಒಬ್ಬರ ಗುರುತು ಇನ್ನೂ ಸಿಕ್ಕಿಲ್ಲ. ಚಪ್ಪಲಿ ವ್ಯಾಪಾರಿ, ಬಟ್ಟೆ ವ್ಯಾಪಾರಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಕೇರಳದಿಂದ ಬಂದವರು ಮೃತಪಟ್ಟಿದ್ದಾರೆ ಎಂದರು.
ಮರಗಳು, ಕೊಂಬೆಗಳು ಬಿದ್ದು ವಾಹನಗಳಿಗೂ ಹಾನಿಯಾಗಿದೆ. ನಾಳೆಯಿಂದಲೇ ದುರ್ಬಲ ಕೊಂಬೆಗಳನ್ನು ತೆರವುಗೊಳಿಸಲು ನಾನು ನಿರ್ದೇಶನ ನೀಡಿರುವೆ. ನಗರದಲ್ಲಿ ನೂರಕ್ಕೂ ಹೆಚ್ಚು ಕಡೆ ಮರ ಬಿದ್ದಿದ್ದು, ಅಪಾಯಕಾರಿಯಾಗಿರುವ ಮರ ಹಾಗೂ ಕೊಂಬೆಗಳನ್ನು ಗುರುತಿಸಿ, ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವೆ. ನಾನು ಕನಕಪುರದಿಂದ ಮರಳುವಾಗಲೂ ಅನೇಕ ಕಡೆಗಳಲ್ಲಿ ಮರ ಬಿದ್ದಿರುವುದನ್ನು ಗಮನಿಸಿದೆ ಎಂದರು.
ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಇಲ್ಲಿ ಪರಿಹಾರಕ್ಕಿಂತ ಈ ಅಪಘಾತ ಸಂಭವಿಸಬಾರದಿತ್ತು. ಕೇರಳದ ಕುಟುಂಬಶ್ರೀ ಎನ್ನುವ ಸಂಸ್ಥೆಯ ಮುಖಾಂತರ 56 ಮಂದಿ ಪ್ರವಾಸಕ್ಕೆ ಬಂದಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಅಲ್ಲಿ ಶಾಪಿಂಗ್ ಗೆ ಬಂದಿದ್ದರು. ಆಗ ಮಳೆ ಬಂದಿದೆ. ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಆಗ ಅವರು ಮಳೆಯಿಂದ ರಕ್ಷಣೆ ಪಡೆಯಲು ಗೋಡೆ ಪಕ್ಕ ಹೋಗಿದ್ದಾರೆ. ಆಗ 8 ಅಡಿ ಎತ್ತರದ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಪ್ರೀತಿ, ಶೈಜಾ, ಶಿಜು ಎನ್ನುವ ಮೂವರು ಗಾಯಗೊಂಡಿದ್ದರು, ಈಗ ಚೇತರಿಸಿಕೊಂಡಿದ್ದಾರೆ ಎಂದರು.
ತೀರಿಕೊಂಡವರು ಲತಾ ಮತ್ತು ಸ್ಪೃತಿ. ಇವರೆಲ್ಲಾ ನ್ಯೂಟ್ರಿಷಿಯನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು. ಸರ್ಕಾರದ ಅಧಿಕಾರಿಗಳು ಸಹ ಇವರ ಜೊತೆ ಬಂದಿದ್ದಾರೆ. ಕೇರಳ ಸರ್ಕಾರಕ್ಕೂ ನಾವು ಮಾಹಿತಿ ನೀಡುತ್ತೇವೆ. ಶವ ಪರೀಕ್ಷೆ ನಡೆಸಿ ಇಲ್ಲಿಂದಲೇ ಗೌರವಯುತವಾಗಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರದ ವೈಫಲ್ಯ ಎನ್ನುವ ಬಿಜೆಪಿಯವರ ಟೀಕೆ ಬಗ್ಗೆ ಕೇಳಿದಾಗ, ವಿರೋಧ ಪಕ್ಷದವರು ಹೇಳಿದ್ದನ್ನೇ ಹೇಳುತ್ತಾರೆ. ಅವರಿಗೆ ಇನ್ನೇನು ಹೇಳುವುದು. ಅವರುಗಳು ಏನೂ ಸಹಾಯ ಮಾಡುವುದಿಲ್ಲ. ಟೀಕೆ ಮಾಡಬೇಕು, ದೂರಬೇಕು. ಮಾಧ್ಯಮಗಳ ಮುಂದೆ ಏನೋ ಒಂದು ಮಾತನಾಡಬೇಕು. ನಾವು ಏನಾದರೂ ಪರಿಹಾರ ಕಂಡು ಹಿಡಿಯಬೇಕು ಎಂದು ನಾವು ಆಲೋಚಿಸುತ್ತಿದ್ದೇವೆ ಎಂದರು.
ನಾನು ಕನಕಪುರದಲ್ಲಿ ಕೆಡಿಪಿ ಸಭೆ ಮಾಡುತ್ತಿದ್ದಾಗ, ಈ ದುರ್ಘಟನೆ ಬಗ್ಗೆ ಪೊಲೀಸ್ ಆಯುಕ್ತರು ಜಿಬಿಎ ಆಯುಕ್ತರು ನನಗೆ ಕರೆ ಮಾಡಿ ತಿಳಿಸಿದರು. ಈ ಸ್ಥಳಕ್ಕೆ ಸಿಎಂ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದು ಅತ್ಯಂತ ಹಳೆಯ ಗೋಡೆಯಾಗಿದ್ದು, ಈ ಘಟನೆ ನಡೆದಿರುವುದು ದುರ್ದೈವ. ಈ ದುರಂತ ಬಹಳ ನೋವು ತಂದಿದೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವರದಿಗಳ ಪ್ರಕಾರ ಬೆಂಗಳೂರು ಮಳೆಗೆ 8 ಸಾವು ಸಂಭವಿಸಿದೆ. ವೆಗಾ ಸಿಟಿ ಮಾಲ್ ಬಳಿ ಒಂದು ಸಾವು ಸಂಭವಿಸಿದೆ ಎಂದರು.
ಇಂತಹ ಅಪಾಯಕಾರಿ ಜಾಗಗಳಲ್ಲಿ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಕ್ರಮ ವಹಿಸಲು ಜಿಬಿಎ ಆಯುಕ್ತರಿಗೆ ಸೂಚಿಸಿರುವೆ. ಈ ಬಾರಿ ಮಳೆ ಬರುವುದಿಲ್ಲ ಎಂಬ ಆತಂಕ ಇತ್ತು, ಮಳೆ ಬರಬೇಕು. ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಬಿದಿರಲಿಲ್ಲ. ಮುಂದೆ ಇಂತಹ ಅನಾಹುತ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದು ಜಿಬಿಎ ಅಧಿಕಾರಿಗಳ ವೈಫಲ್ಯವಲ್ಲವೇ ಎಂದು ಕೇಳಿದಾಗ, ಇದು ನೂರು ವರ್ಷಗಳ ಹಳೆಯ ಆಸ್ಪತ್ರೆ. ಹೊಸ ಆಸ್ಪತ್ರೆಯಲ್ಲ. ಈ ಭಾಗವನ್ನು ಸರಿಯಾದ ರೀತಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಇದು ಜಿಬಿಎಗೆ ಸಂಬಂಧಿಸಿಲ್ಲ ಎಂದು ತಿಳಿಸಿದರು.
ಆರೋಪ ಮಾಡುವ ಸಮಯವಲ್ಲ
ಅಧಿಕಾರಿಗಳ ವಿರುದ್ಧ ಗರಂ ಆಗಿದ್ದೀರಿ ಎಂದು ಕೇಳಿದಾಗ, ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಈಗ ಅರೋಪ ಮಾಡುವ ಸಮಯವಲ್ಲ. ಪರಿಹಾರ ಕಂಡುಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
