ಸಮಗ್ರ ಸುದ್ದಿ

ಕೆಎಸ್ಆರ್ ಬೆಂಗಳೂರು–ಸಿಂಧನೂರು ಡೈಲಿ ಎಕ್ಸ್’ಪ್ರೆಸ್ ವೇಳಾಪಟ್ಟಿ ಪರಿಷ್ಕರಣೆ

Share

ಬೆಂಗಳೂರು: ಕಾರ್ಯಾಚರಣೆಯ ವೇಗವನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು–ಸಿಂಧನೂರು ಡೈಲಿ ಎಕ್ಸ್’ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಜೂನ್ 20, 2026 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಈ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ ಈಗಿರುವ 00:15 ಗಂಟೆಯ ಬದಲಾಗಿ 23:40 ಗಂಟೆಗೆ ಹೊರಡಲಿದೆ.

ವೇಳಾಪಟ್ಟಿಯ ಈ ಬದಲಾವಣೆಯ ಹಿನ್ನೆಲೆಯಲ್ಲಿ, ಜೂನ್ 19, 2026 ರಂದು ಮಾತ್ರ ವಿಶೇಷವಾಗಿ ಎರಡು ಸೇವೆಗಳನ್ನು ಒದಗಿಸಲಾಗುತ್ತಿದೆ. ಅಂದು ರೈಲು ಸಂಖ್ಯೆ 17391 ಎಂದಿನಂತೆ ಹಳೆಯ ವೇಳಾಪಟ್ಟಿಯ ಪ್ರಕಾರ 00:15 ಗಂಟೆಗೆ ಹೊರಡಲಿದೆ. ಇದರ ಜೊತೆಗೆ, ಅದೇ ದಿನ (ಜೂನ್ 19) 23:40 ಗಂಟೆಗೆ ಮತ್ತೊಂದು ವಿಶೇಷ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಇದು ಕೇವಲ ಒಂದು ದಿನದ ಮಟ್ಟಿಗೆ ರೈಲು ಸಂಖ್ಯೆ 17381 ಕೆಎಸ್ಆರ್ ಬೆಂಗಳೂರು–ಸಿಂಧನೂರು ಎಕ್ಸ್’ಪ್ರೆಸ್ ಸಂಖ್ಯೆಯಡಿ ಸಂಚರಿಸಲಿದೆ. ಜೂನ್ 20 ರಿಂದ ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಸಂಖ್ಯೆ 17391 ನಿಯಮಿತವಾಗಿ 23:40 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿದೆ.

ಮಾರ್ಗಮಧ್ಯದ ಕೆಲವು ನಿಲ್ದಾಣಗಳಲ್ಲಿ ತಲುಪುವ ಮತ್ತು ಹೊರಡುವ ಸಮಯವನ್ನು ಪರಿಷ್ಕರಿಸಲಾಗಿದೆ. ಈ ರೈಲು ಮಲ್ಲೇಶ್ವರಂ ನಿಲ್ದಾಣಕ್ಕೆ 00:20/00:21 ಗಂಟೆಯ ಬದಲಾಗಿ 23:46/23:47 ಗಂಟೆಗೆ, ಯಶವಂತಪುರಕ್ಕೆ 00:26/00:27 ಗಂಟೆಯ ಬದಲಾಗಿ 23:52/23:54 ಗಂಟೆಗೆ, ಚಿಕ್ಕಬಾಣಾವರಕ್ಕೆ 00:37/00:38 ಗಂಟೆಯ ಬದಲಾಗಿ 00:04/00:05 ಗಂಟೆಗೆ, ದೊಡ್ಡಬೆಲೆಗೆ 00:54/00:55 ಗಂಟೆಯ ಬದಲಾಗಿ 00:21/00:22 ಗಂಟೆಗೆ, ಕ್ಯಾತಸಂದ್ರಕ್ಕೆ 01:14/01:15 ಗಂಟೆಯ ಬದಲಾಗಿ 00:41/00:42 ಗಂಟೆಗೆ, ತುಮಕೂರಿಗೆ 01:22/01:23 ಗಂಟೆಯ ಬದಲಾಗಿ 00:48/00:49 ಗಂಟೆಗೆ ಮತ್ತು ಗುಬ್ಬಿ ನಿಲ್ದಾಣಕ್ಕೆ 01:37/01:38 ಗಂಟೆಯ ಬದಲಾಗಿ 01:03/01:04 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಉಳಿದ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರಾಮನಗರದಲ್ಲಿ ಒಡೆಯರ್ ಎಕ್ಸ್’ಪ್ರೆಸ್ ರೈಲಿಗೆ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆ

ನೈರುತ್ಯ ರೈಲ್ವೆಯು ಮೈಸೂರು–ಕೆಎಸ್ಆರ್ ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 12613/12614) ರೈಲುಗಳಿಗೆ ರಾಮನಗರಂ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆಗೆ ಅವಕಾಶ ಕಲ್ಪಿಸಿದೆ. ಈ ನಿಲುಗಡೆಯು ಮೇ 5, 2026 ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಇದರ ಅನ್ವಯ, ರೈಲು ಸಂಖ್ಯೆ 12613 ಮೈಸೂರು–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ರಾಮನಗರಂ ನಿಲ್ದಾಣಕ್ಕೆ 12:41 ಗಂಟೆಗೆ ಆಗಮಿಸಿ, 12:42 ಗಂಟೆಗೆ ನಿರ್ಗಮಿಸಲಿದೆ.

ಅದೇ ರೀತಿ, ರೈಲು ಸಂಖ್ಯೆ 12614 ಕೆಎಸ್ಆರ್ ಬೆಂಗಳೂರು–ಮೈಸೂರು ಎಕ್ಸ್’ಪ್ರೆಸ್ ರೈಲು ರಾಮನಗರಂ ನಿಲ್ದಾಣಕ್ಕೆ 16:01 ಗಂಟೆಗೆ ಆಗಮಿಸಿ, 16:02 ಗಂಟೆಗೆ ನಿರ್ಗಮಿಸಲಿದೆ.

ರಾಮನಗರಂ ಮತ್ತು ಸುತ್ತಮುತ್ತಲಿನ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಸುಗಮ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಾಯೋಗಿಕ ನಿಲುಗಡೆಯನ್ನು ಪರಿಚಯಿಸಲಾಗಿದೆ.


Share

You cannot copy content of this page