ಬೆಂಗಳೂರು: ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕಲ್ಪಿಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯಕ್ತ ಆಶ್ರಯದಲ್ಲಿ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಮಿಡ್ ವೈಫರಿ ಆಧಾರಿತ ಆರೈಕೆ ಘಟಕ ಮತ್ತು ತಾಯಿ ಹಾಲು ಸಂಗ್ರಹಣಾ ಕೇಂದ್ರ (ಶಿಶು ಸಂಜೀವಿನಿ) ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕಲ್ಪಿಸಿಕೊಂಡು ಬರುತ್ತಿದೆ. ತಾಯಿ ಮಗುವಿನ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಶಿಶು ಸಂಜೀವಿನಿ ಯೋಜನೆ ಮಹತ್ವದಾಗಿದೆ ಎಂದು ಹೇಳಿದರು.
ಶಿಶು ಸಂಜೀವಿನಿ ಯೋಜನೆಯಿಂದ ಮುಂಚಿತವಾಗಿ ಹೆರಿಗೆ ಆಗುವ ಮಕ್ಕಳಿಗೆ ಮತ್ತು ಪೌಷ್ಟಿಕಾಂಶ ಕೊರತೆಯಿರುವ ಮಕ್ಕಳಿಗೆ ಉಪಯುಕ್ತವಾಗುತ್ತದೆ. ತಾಯಿಯಂದರಿಗೆ ಹಾಲು ಸಂಗ್ರಹಿಸಿ ಇಟ್ಟುಕೊಳ್ಳುವುದರಿಂದ ಅನಾನುಕೂಲ ಉಂಟಾಗುತ್ತದೆ ಹಾಗೂ ಎದೆ ಹಾಲನ್ನು ಕೊಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿ ಹೇಳಬೇಕು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿ ತಾಯಿ ಎದೆ ಹಾಲು ಸಂಗ್ರಹ ಘಟಕವನ್ನು ಪ್ರಾರಂಭಿಸಲಾಗಿದೆ ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಮಕ್ಕಳ ಆರೋಗ್ಯ ಕಾಪಾಡುವುದು ಮತ್ತು ಮಕ್ಕಳ ಮರಣ ಸಂಖ್ಯೆಯನ್ನು ತಪ್ಪಿಸುವ ಸದುದ್ದೇಶದಿಂದ ಶಿಶು ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ ತಾಯಿ ಮಗುವಿನ ಆರೋಗ್ಯ ಕಾಪಾಡುವುದು ಅತಿ ಮುಖ್ಯ. ವರದಿಗಳ ಪ್ರಕಾರ ತಾಯಿ ಮಗುವಿನ ಆರೋಗ್ಯ ಹೆಚ್ಚಿರುವ ಕಡೆ ಆರ್ಥಿಕ ಪ್ರಗತಿಯನ್ನು ನಾವು ಕಾಣಬಹುದು. ಜಿಲ್ಲಾಯಲ್ಲಿ ಸಂಭವಿಸುವ ತಾಯಿ ಮಗುವಿನ ಮರಣದ ಬಗ್ಗೆ ತಜ್ಞ ವೈದ್ಯರ ವರದಿಯ ಕುರಿತು ಪ್ರತಿಯೊಂದು ಪ್ರಕರಣಕ್ಕೂ ಒಂದು ಗಂಟೆಗೂ ಹೆಚ್ಚುಕಾಲ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ತಾಯಿ ಮಗುವಿನ ಮರಣವನ್ನು ತಡೆಗಟ್ಟಲು ಶಿಶು ಸಂಜೀವಿನಿ ಯೋಜನೆ ತರಲಾಗಿದೆ. ತಾಯಿಯ ಎದೆ ಹಾಲಿಗಿಂತ ಸರ್ವ ಶ್ರೇಷ್ಠ ಉಡುಗೊರೆ ಮತ್ತೊಂದಿಲ್ಲ. ಜಿಲ್ಲೆಯ ಎಲ್ಲಾ ಶಾಸಕರುಗಳು ಮಿಡ್ ವೈಫರಿ ಆಧಾರಿತ ಆರೈಕೆ ಘಟಕ ಮತ್ತು ತಾಯಿ ಹಾಲು ಸಂಗ್ರಹಣ ಕೇಂದ್ರ ಘಟಕ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಮಿಮ್ಸ್ ನಿರ್ದೇಶಕ ನರಸಿಂಹಸ್ವಾಮಿ, ಮುಡಾ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
