ಬೆಂಗಳೂರು:ವಿಜಯಪುರ ಮತ್ತು ಬೆಂಗಳೂರು ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಬೇಕು ಎಂಬ ತಮ್ಮ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿರುವುದು ಸಂತಸ ತಂದಿದೆ. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವ ವಿ.ಸೋಮಣ್ಣ ಅವರಿಗೆ ವಿಜಯಪುರ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳು ಸಲ್ಲುತ್ತವೆ. ಈ ರೈಲನ್ನು ಆದಷ್ಟು ತ್ವರಿತವಾಗಿ ಕಾಯಂ ರೈಲನ್ನಾಗಿ ಪರಿವರ್ತಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಬೆಂಗಳೂರು- ವಿಜಯಪುರ ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ರೈಲು ಸೇವೆ ಆರಂಭಿಸುವುದು ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ.
ಈ ಮನವಿಗೆ ಸ್ಪಂದಿಸಿ ನೈರುತ್ಯ ರೈಲ್ವೆಯು ಶನಿವಾರದಿಂದ ಹಿಡಿದು ಜೂನ್ 28ರವರೆಗೆ ಎರಡೂ ನಗರಗಳ ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಈ ರೈಲನ್ನು ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವೇ ಕಾಯಂ ರೈಲನ್ನಾಗಿ ಪರಿವರ್ತಿಸಬೇಕು ಎಂದು ಅವರು ಈಗ ಮತ್ತೊಮ್ಮೆ ಕೇಂದ್ರ ಸಚಿವರಿಬ್ಬರಿಗೂ ಪತ್ರ ಬರೆದಿದ್ದಾರೆ.
ಈ ರೈಲನ್ನು ಕಾಯಂ ಮಾಡುವುದಲ್ಲದೆ ಜನರಿಗೆ ಅನುಕೂಲವಾಗುವ ಹಾಗೆ ಸರಿಯಾದ ಸಮಯದಲ್ಲಿ ಓಡಿಸಬೇಕು ಎಂದು ಅವರು ಪತ್ರದ ಮೂಲಕ ಕೋರಿದ್ದಾರೆ. ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 6ಕ್ಕೆ ವಿಜಯಪುರ ತಲುಪುವ ಹಾಗೆ ವೇಳಾಪಟ್ಟಿ ನಿಗದಿಪಡಿಸಬೇಕು. ಅದೇ ರೀತಿ ವಿಜಯಪುರ ದಿಂದ ರಾತ್ರಿ 8ಕ್ಕೆ ಬಿಟ್ಟು ಬೆಳಿಗ್ಗೆ 6ಕ್ಕೆ ಬೆಂಗಳೂರು ತಲುಪುವ ಹಾಗೆ ಮಾಡಬೇಕು ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಈಗ ಬಿಟ್ಟಿರುವ ವಿಶೇಷ ರೈಲು ವಿಜಯಪುರದ ಕಡೆಯಿಂದ ಹೊರಟು ಬೆಂಗಳೂರಿನ ಯಶವಂತಪುರ ನಿಲ್ದಾಣವನ್ನು ಬೆಳಗಿನ ಜಾವ 4 ಗಂಟೆಗೆ ತಲುಪಲಿದೆ. ಈ ಸಮಯದಲ್ಲಿ ಪ್ರಯಾಣಿಕರು ತಮ್ಮ ಮನೆಗಳಿಗೆ ತಲುಪುವುದು ಕಷ್ಟವಾಗಲಿದೆ. ಹೀಗಾಗಿ, ಬೆಳಗ್ಗೆ 5.30ರಿಂದ 6 ಗಂಟೆ ನಡುವೆ ಯಶವಂತಪುರಕ್ಕೆ ತಲುಪುವಂತೆ ವೇಳಾಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.
ಒಂದೂವರೆ ತಿಂಗಳ ಕಾಲ ಪ್ರತೀ ಶನಿವಾರ ಬೆಂಗಳೂರು ನಗರದ ಯಶವಂತಪುರದಿಂದ ಈ ವಿಶೇಷ ರೈಲು ವಿಜಯಪುರಕ್ಕೆ ಹೊರಡಲಿದೆ. ಅತ್ತ ಕಡೆಯಿಂದ ಭಾನುವಾರ ಹೊರಟು ಬರಲಿದೆ.
ಈ ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಮತ್ತು ಬೆಂಗಳೂರು ಮಧ್ಯೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ ಕಾಲ ಹಿಡಿಯುತ್ತಿದೆ. ಹುಬ್ಬಳ್ಳಿ ಬೈಪಾಸ್ ಮೂಲಕ ರೈಲು ಸೇವೆ ಆರಂಭಿಸಿದರೆ ಇದನ್ನು 10 ಗಂಟೆಗಳಿಗೆ ಇಳಿಸಬಹುದು. ಇದರಿಂದ ವಿಜಯಪುರ ಜಿಲ್ಲೆಯಿಂದ ರಾಜಧಾನಿಗೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ನಾವು ಗಮನ ಸೆಳೆದಿದ್ದೆವು ಎಂದು ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
