ಬೆಂಗಳೂರು:ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನಕ್ಕೂ ಮುನ್ನ, ವೇದಿಕೆ ಮೇಲೆ ಸಭೀಕರತ್ತ ಮುಖಮಾಡಿ ತಮ್ಮ ಮೇಲೆ ನಂಬಿಕೆ ಇಟ್ಟು ಈ ಮಹತ್ತರ ಜವಾಬ್ದಾರಿ ಕೊಟ್ಟಿರುವ ಕರ್ನಾಟಕದ ಸಮಸ್ತ ಜನತೆಗೆ ಅಡ್ಡಬಿದ್ದು ನಮಿಸಿ, ಧನ್ಯವಾದ ಅರ್ಪಿಸಿದರು.
ಲೋಕಭವನದ ವೇದಿಕೆಯಲ್ಲಿ ಕನ್ನಡದ ಕಂಪು
ಈ ಪ್ರಮಾಣ ವಚನ ಹಿನ್ನೆಲೆಯಲ್ಲಿ ಇಂದು ಲೋಕಭವನ ಸಂಪೂರ್ಣವಾಗಿ ಕನ್ನಡದ ಕಂಪಿನಲ್ಲಿ ಮಿಂದೆದ್ದಿತ್ತು. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಡಲಾಗಿದ್ದ ವೇದಿಕೆ ಹಾಗೂ ಅಲಂಕಾರಗಳು ಕೆಂಪು ಹಳದಿ ಬಣ್ಣಗಳಿಂದ ಕನ್ನಡದ ಅಸ್ಮಿತೆಯ ಪ್ರತೀಕವಾಗಿತ್ತು.
ಇನ್ನು ಲೋಕಭವನದಲ್ಲಿ ರಾಷ್ಟ್ರಗೀತೆ ಜೊತೆಗೆ ನಾಡಗೀತೆ ಹಾಡುವ ಮೂಲಕ ಕನ್ನಡತನ ರಾರಾಜಿಸುತಿತ್ತು. ಇನ್ನು ತಮ್ಮ ಜೀವನದ ವಿಶೇಷ ಕ್ಷಣದಲ್ಲಿ ಶಿವಕುಮಾರ್ ಅವರು ರೇಷ್ಮೆ ಪಂಚೆ, ಶರ್ಟ್ ಧರಿಸಿ ತಮ್ಮ ಮೂಲವನ್ನು ಎತ್ತಿ ತೋರಿದರು. ಶಿವಕುಮಾರ್ ಅವರು ಧರಿಸಿದ್ದ ಶಲ್ಯದಲ್ಲಿ ಕಾಂಗ್ರೆಸ್ ತ್ರಿವರ್ಣ ಧ್ವಜ, ಕೈಯಲ್ಲಿ ಭಾರತದ ಸಂವಿಧಾನ ಪುಸ್ತಕ ಹಿಡಿಯುವ ಮೂಲಕ ತಾನೋಬ್ಬ ಭಾರತೀಯ ಅದರಲ್ಲೂ ಕಟ್ಟಾ ಕಾಂಗ್ರೆಸಿಗ ಎಂಬುದನ್ನು ಸಾರಿದರು.
ಗಣ್ಯರ ಪ್ರತಿಮೆಗೆ ನಮನ:
ಪ್ರಮಾಣ ವಚನ ಕಾರ್ಯಕ್ರಮ ಬಳಿಕ ಶಿವಕುಮಾರ್ ಅವರು ವಿಧಾನಸೌಧಕ್ಕೆ ಬಂದರು. ವಿಧಾನಸೌಧ ಪ್ರವೇಶಿಸುವ ಮುನ್ನ ತಮ್ಮ ಚಪ್ಪಲಿಯನ್ನು ತೆಗೆದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಚ ನಮನ ಸಲ್ಲಿಸಿದರು. ನಂತರ ಜಗಜ್ಯೋತಿ ಬಸವಣ್ಣ, ನಾಡಪ್ರಭು ಕೆಂಪೇಗೌಡ, ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸಿದರು.
ವಿಧಾನಸೌಧದ ಉತ್ತರ ದ್ವಾರದ ಮೆಟ್ಟಿಲಿಗೆ ನಮಿಸಿ ಪ್ರವೇಶ
ನಂತರ ವಿಧಾನಸೌಧದ ಉತ್ತರ ದ್ವಾರದ ಮೆಟ್ಟಿಲುಗಳಿಗೆ ನಮಿಸಿ ವಿಧಾನಸೌಧ ಪ್ರವೇಶಿಸಿದರು. ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿ ಕಚೇರಿಗೆ ಪ್ರವೇಶಿಸಿದ ಡಿ.ಕೆ ಶಿವಕುಮಾರ್ ಅವರು ಪುರೋಹಿತರ ವೇದಘೋಷಗಳ ಮಧ್ಯೆ ಮುಖ್ಯಮಂತ್ರಿ ಕುರ್ಚಿಗೆ ನಮಿಸಿ, ತಮ್ಮ ಸ್ಥಾನವನ್ನು ಅಲಂಕರಿಸಿದರು.
ನಂತರ ಅಧಿಕಾರ ವಹಿಸಿಕೊಂಡ ಕಡತಕ್ಕೆ ಸಹಿ ಹಾಕಿದ ಶಿವಕುಮಾರ್ ಅವರು ತಮ್ಮ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳಾಗಿ ತಮ್ಮ ಕರ್ತವ್ಯವನ್ನು ಆರಂಭಿಸಿದರು.
