ಸಮಗ್ರ ಸುದ್ದಿ

ಪರಿಸರ ಸಂರಕ್ಷಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಐತಿಹಾಸಿಕ ಸಾಧನೆ: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಶ್ಲಾಘನೆ

Share

ಬೆಂಗಳೂರು: 2026ರ ವಿಶ್ವ ಪರಿಸರ ದಿನಾಚರಣೆಯನ್ನು “Inspired by Nature. For Climate. For Our Future” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಸರ ಸುಸ್ಥಿರತೆ ಕ್ರಮಗಳ ದೇಶಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಶ್ಲಾಘಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಗೊಳ್ಳಲಾಗಿರುವ ಜಲ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಯಶೋಗಾಥೆಯು ದೇಶಕ್ಕೇ ಮಾದರಿಯಾಗಿದೆ ಎಂದು ಅವರು ಪ್ರಶಂಸಿದ್ದಾರೆ.

ಬೆಂಗಳೂರು ಇಂಟನ್ರ್ಯಾಷನಲ್ ಏರ್‍ ಪೋರ್ಟ್ ಲಿಮಿಟೆಡ್ ತನ್ನ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ 3P – People (ಜನರು), Planet (ಭೂಮಿ) ಮತ್ತು Profit (ಲಾಭ) ಎಂಬ ಸಮತೋಲಿತ ವಿಧಾನವನ್ನು ಅಳವಡಿಸಿಕೊಂಡು ಜವಾಬ್ದಾರಿಯುತ ಬೆಳವಣಿಗೆಯನ್ನು ಸಾಧಿಸಿರುವುದು ದೇಶಕ್ಕೆ ಹೆಮ್ಮೆ ತಂದಿದೆ.

ಪರಿಸರ ಸುಸ್ಥಿರತೆಯ ಪ್ರಮುಖ ಮೈಲಿಗಲ್ಲುಗಳು:

ಜಲ ಸಂರಕ್ಷಣೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2.36 ರ ಜಲ ಧನಾತ್ಮಕ ಸೂಚ್ಯಂಕವನ್ನು ಸಾಧಿಸಿದೆ. ಅಂದರೆ, ತಾನು ಬಳಸುವ ನೀರಿಗಿಂತ ಎರಡು ಪಟ್ಟು ಹೆಚ್ಚು ನೀರನ್ನು ಮರುಪೂರೈಸುತ್ತಿದೆ. ಸದ್ಯ ವಿಮಾನ ನಿಲ್ದಾಣವು ತನ್ನ ಕುಡಿಯುವ ನೀರಿನ ಅಗತ್ಯತೆಯ ಸುಮಾರು ಮೂರರಲ್ಲಿ ಎರಡು ಭಾಗವನ್ನು (2/3rd) ಆಂತರಿಕ ಮಳೆನೀರು ಸಂಗ್ರಹ ವ್ಯವಸ್ಥೆಯ ಮೂಲಕವೇ ಪೂರೈಸಿಕೊಳ್ಳುತ್ತಿದೆ.

ಏಷ್ಯಾದಲ್ಲೇ ಮೊದಲು – ನೆಟ್ ಝೀರೋ ಕಾರ್ಬನ್

ಏಷ್ಯಾದಲ್ಲಿಯೇ ಮೊದಲ ಬಾರಿಗೆ ನೆಟ್ ಝೀರೋ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸಾಧಿಸಿದ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. 2030 ರ ಗುರಿಗಿಂತ ಏಳು ವರ್ಷ ಮುಂಚಿತವಾಗಿಯೇ ತನ್ನ ಹೊರಸೂಸುವಿಕೆಯಲ್ಲಿ ಶೇ. 95.6 ರಷ್ಟು ಕಡಿತವನ್ನು ದಾಖಲಿಸಿದೆ. ಇದಲ್ಲದೆ,Airports Council International (ACI) ನಿಂದ ಅತ್ಯುನ್ನತ “Level 5 Carbon Accreditation” ಮಾನ್ಯತೆಯನ್ನು ಪಡೆದಿದೆ.

ಜೀವವೈವಿಧ್ಯ ಮತ್ತು ಶೂನ್ಯ ಘನತ್ಯಾಜ್ಯ:

ಭಾರತದಲ್ಲೇ ಮೊದಲ ಬಾರಿಗೆ ‘Taskforce on Nature-related Financial Disclosures (TNFD)’ ಅನ್ನು ಅಳವಡಿಸಿಕೊಂಡಿರುವ ಈ ವಿಮಾನ ನಿಲ್ದಾಣವು 5.18 ರ ಜೀವವೈವಿಧ್ಯ ಸೂಚ್ಯಂಕವನ್ನು ಹೊಂದಿದೆ. ತನ್ನದೇ ಆದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದ ಮೂಲಕ ಲ್ಯಾಂಡ್‍ಫಿಲ್‍ಗೆ ಶೂನ್ಯ ತ್ಯಾಜ್ಯ (Zero Waste to Landfill) ಗುರಿಯನ್ನು ತಲುಪಿದೆ. ಇಂತಹ ವೈಜ್ಞಾನಿಕ ಮತ್ತು ಸುಸ್ಥಿರ ಮಾದರಿಗಳನ್ನು ಇತರ ಸಂಸ್ಥೆಗಳೂ ಅಳವಡಿಸಿಕೊಂಡರೆ ದೇಶ ಹಾಗೂ ರಾಜ್ಯದಲ್ಲಿ ನೀರು, ವಿದ್ಯುತ್ ಕೊರತೆಯನ್ನು ನೀಗಿಸಬಹುದು ಮತ್ತು ಜೀವವೈವಿಧ್ಯತೆಯನ್ನು ಕಾಪಾಡಬಹುದು ಎಂದು ಮುಖ್ಯಕಾರ್ಯದರ್ಶಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Share

You cannot copy content of this page