ಸಮಗ್ರ ಸುದ್ದಿ

ಹೆಚ್‌ಎಂಎಸ್ ಕಾನೂನು ಕಾಲೇಜಿನಲ್ಲಿ ಪದವಿ ಪ್ರದಾನ|ಕಾನೂನಿನ ಆಳವಾದ ಜ್ಞಾನದಿಂದ ಸಮರ್ಥ ‘ವಾದ’ ಮಂಡನೆ ಸಾಧ್ಯ: ಡಿಸಿಎಂ ಪರಮೇಶ್ವರ

Share

ತುಮಕೂರು: ಸಂವಿಧಾನದ ಪೂರ್ವಪೀಠಿಕೆಯಲ್ಲಿ ಸಮಾನತೆಗೆ ಮಹತ್ವ ನೀಡಲಾಗಿದ್ದರೂ, ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬ ಬಗ್ಗೆ ಗಂಭೀರ ವಿಶ್ಲೇಷಣೆ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಪರಿಣತ ನ್ಯಾಯವಾದಿಗಳಾಗಲು ನಿರಂತರ ಅಧ್ಯಯನ ಮುಖ್ಯ

ತುಮಕೂರಿನ ಶೆಟ್ಟಿಹಳ್ಳಿಯ ಸುಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ಪದವೀಧರರು ನಿರಂತರ ಅಧ್ಯಯನದ ಮೂಲಕ ಪರಿಣತ ನ್ಯಾಯವಾದಿಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ಕೆಲವೇ ನ್ಯಾಯವಾದಿಗಳನ್ನು ಹೆಚ್ಚು ಮಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾನೂನಿನ ಆಳವಾದ ಜ್ಞಾನ ಮತ್ತು ಸಮರ್ಥ ವಾದ ಮಂಡನೆಯಿಂದ ಅವರು ವಿಶ್ವಾಸ ಗಳಿಸಿದ್ದಾರೆ. ಹೊಸ ತಲೆಮಾರಿನ ವಕೀಲರೂ ಅದೇ ಮಟ್ಟದ ಪರಿಣತಿ ಸಾಧಿಸಬೇಕು ಎಂದು ಹೇಳಿದರು.

ದೇಶದಲ್ಲಿ 1,500ಕ್ಕೂ ಹೆಚ್ಚು ಕಾನೂನು ಕಾಲೇಜುಗಳಿದ್ದು, ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದಾರೆ. ಆದರೂ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ. ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಭಾರತ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಭಾರತೀಯ ಕಾನೂನು ತಜ್ಞರು ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ವೇಳೆ, ದೇಶದಲ್ಲಿ ಸೈಬರ್ ಅಪರಾಧ ದೊಡ್ಡ ಸವಾಲಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಕೇವಲ 12 ಶೇಕಡಾ ಇದ್ದರೆ, ಈಗ ಅದು ಸುಮಾರು ಶೇ. 80ಕ್ಕೆ ಏರಿಕೆಯಾಗಿದೆ. ಕಾನೂನು ಪದವಿ ಪಡೆದವರು ಕೇವಲ ವೃತ್ತಿ ದೃಷ್ಟಿಯಿಂದಲ್ಲ, ಕಾನೂನಿನ ರಕ್ಷಣೆ ಮತ್ತು ನ್ಯಾಯ ಸೇವೆಯ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಭಾರತಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಬಲಿಷ್ಠ ಸಂವಿಧಾನವನ್ನು ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನವೇ ಮೂಲ ಅಡಿಪಾಯವಾಗಿದೆ. ಸಂವಿಧಾನ ದುರ್ಬಲಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ದುರ್ಬಲವಾಗುತ್ತದೆ. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಸಂವಿಧಾನದ ವಿಧಿ 51(ಎ) ಹಾಗೂ ವಿಧಿ 12 ರಿಂದ 35ರವರೆಗೆ ನಾಗರಿಕರ ಕರ್ತವ್ಯಗಳು ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳನ್ನು ಪರಿಣಾಮಕಾರಿಯಾಗಿ ಎತ್ತಿಹಿಡಿಯಲು ಸಾಧ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಮಧುಗಿರಿ ಶಾಸಕರಾದ ಕೆ.ಎನ್.ರಾಜಣ್ಣ, ಹೆಚ್‌ಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಾಜಿ ಶಾಸಕ ಡಾ. ಶಫಿ ಅಹಮದ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಪ್ರಶಾಂತ್ ಕಾಳಪ್ಪ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ ಮುಂತಾದವರು ಉಪಸ್ಥಿತರಿದ್ದರು.


Share

You cannot copy content of this page