ತುಮಕೂರು: ಉಪ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ತುಮಕೂರು ಜಿಲ್ಲಾ ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ಬರ ಪರಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಪರಿಶೀಲನಾ ಸಭೆಗಳನ್ನು ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. 31 ಜಿಲ್ಲೆಗಳಲ್ಲಿ ಏನೆಲ್ಲ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಮಳೆಮಾಪನ ಕೇಂದ್ರ ಸರಿ ಇಲ್ಲ ಎಂದು ಗೊತ್ತಾದ ತಕ್ಷಣವೇ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಆಧುನಿಕ ಯಂತ್ರಗಳನ್ನು ಅಳವಡಿಸುವಂತೆ ತಿಳಿಸಲಾಗಿದೆ ಎಂದರು.
ಜಿಲ್ಲೆಗೆ ಬರುವ ಎಲ್ಲ ಅಧಿಕಾರಿಗಳು ಶಾಸಕರುಗಳನ್ನು ಭೇಟಿ ಮಾಡಬೇಕು. ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲ್ಲೂಕಿಗೆ ಹೋದಾಗ ಜನಪ್ರತಿನಿಧಿಗಳ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದನ್ನು ನಿರ್ಲಕ್ಷಿಸಿದರೆ ಅಂಥವರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮುಂದುವರೆದು, ನಿಮಗೆ ಜವಾಬ್ದಾರಿ ಇಲ್ಲವಾದರೆ ಹೇಗೆ? ಒಂದು ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುತ್ತೇನೆ. ಇಲಾಖೆಗೆ ಸಂಬಂಧಿಸಿದಂತೆ ಶಾಸಕರುಗಳಿಗೆ ಸಹಕಾರ ನೀಡದಿದ್ದರೆ, ಜಿಲ್ಲೆಗೆ ಏಕೆ ಬರುತ್ತೀರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರಿಗೆ ವಾರದೊಳಗೆ ಮೇವಿನ ಬೀಜಗಳನ್ನು ವಿತರಿಸಬೇಕು. ನೀರಿನ ಲಭ್ಯತೆ ಇದ್ದು, ಮೇವು ಬೆಳೆಯಲು ಮುಂದಾಗುವ ರೈತರಿಗೆ ಬೀಜ ವಿತರಿಸಬೇಕು. ಬೆಳೆದ ಮೇವನ್ನು ದುಡ್ಡು ಕೊಟ್ಟು ಖರೀದಿಸಿ. ಪ್ರತಿ ತಾಲ್ಲೂಕು ಅಧಿಕಾರಿಗಳಿಗೆ ಈಗಾಗಲೇ ಹಣ ನೀಡಿದ್ದೇವೆ. ಕುಡಿಯುವ ನೀರಿಗೆ ಅಂತಲೇ ಪ್ರತ್ಯೇಕ ಅನುದಾನವನ್ನು ನೀಡಲಾಗಿದೆ. ಕುಡಿಯುವ ನೀರಿಗಾಗಿ ಕೊರೆಸುವ ಬೋರ್ವೆಲ್ಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇದು ವಿಳಂಬವಾಗಬಾರದು. ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ಸ್ವಷ್ಟ ನಿರ್ದೇಶನ ನೀಡಿದರು.
ದೇಶದ ಎಲ್ಲ ಕಡೆ ಬರ ಇರುವುದರಿಂದ ಬೇರೆ ರಾಜ್ಯಗಳಿಂದ ಮೇವು ತರಿಸುವುದು ಕಷ್ಟ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಈ ವಿಚಾರದಲ್ಲಿ ಯಾವುದೇ ರೀತಿಯ ಸಬೂಬು ಹೇಳಿದರೂ ಕೇಳುವುದಿಲ್ಲ. ಅವಶ್ಯ ಇರುವ ಕಡೆಗಳಲ್ಲಿ ಬೋರ್ವೆಲ್ ಕೊರೆಸಿ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಸೂಚಿಸಿದರು.
ಬರ ಪರಿಸ್ಥಿತಿಯನ್ನು ಎದುರಿಸಲು ನಿಯಮಗಳನ್ನು ನೋಡುತ್ತ ಕುಳಿತರೆ ಕೆಲಸ ಆಗುವುದಿಲ್ಲ. ಜನರು ಮತ್ತಷ್ಟು ಸಮಸ್ಯೆ ಎದುರಿಸುತ್ತಾರೆ. ಹೀಗಾಗಿ, ಕುಡಿಯುವ ನೀರಿಗೆ ಮಾತ್ರ ಟಾಸ್ಕ್ಫೋರ್ಸ್ನಲ್ಲಿ ನೀವೇ ತೀರ್ಮಾನ ತೆಗೆದುಕೊಳ್ಳಿ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳು ಗಮನ ಹರಿಸಬೇಕು. ನಿಯಮಗಳನ್ನು ಸಡಿಲಿಕೆ ಮಾಡಿ, ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸಿ ಎಂದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು, ಇದರಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿರುವುದಾಗಿ ಕೇಂದ್ರಕ್ಕೆ ತಿಳಿಸಲಾಗಿದೆ. ಹೆಚ್ಚಿನ ಮೊತ್ತದ ಅನುದಾನ ರಾಜ್ಯ ಸರ್ಕಾರವೇ ಭರಿಸಬೇಕಿದೆ. ಹೀಗಾಗಿ, ನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವುದಿಲ್ಲ. ರಾಜ್ಯ ಸರ್ಕಾರವೇ ನಡೆಸುತ್ತದೆ ಎಂದು ತೀರ್ಮಾನವನ್ನು ಹೇಳಿರುವುದಾಗಿ ಈ ವೇಳೆ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಬರ ಪರಿಸ್ಥಿತಿ ಎದುರಿಸಲು ತಾಲ್ಲೂಕು ಮಟ್ಟದಲ್ಲಿ ನಿರಂತರವಾಗಿ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಚರ್ಚೆ ನಡೆಸಿ, ಜಿಲ್ಲಾ ಟಾಸ್ಕ್ ಫೋರ್ಸ್ಗೆ ಈ ಬಗ್ಗೆ ತಿಳಿಸಿ. ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಸರ್ಕಾರಕ್ಕೆ ವರದಿ ನೀಡಬೇಕು. ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆಗಳ ಬಗ್ಗೆ ಕೂಡಲೇ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಡೆಂಘಿ, ಚಿಕೂನ್ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ವರದಿಯಾಗುತ್ತಿವೆ. ಪಾವಗಡ ಗಡಿಭಾಗದ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗಳಲ್ಲಿ ಲ್ಯಾಬ್ಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಓವರ್ ಹೆಡ್ ಟ್ಯಾಂಕ್ಗಳನ್ನು ಬಹುತೇಕ ಕಡೆ ಸ್ವಚ್ಛಗೊಳಿಸುತ್ತಿಲ್ಲ. ತಾಲ್ಲೂಕು ಪಂಚಾಯತ್ ಇಒ ಗಳು ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ಶುದ್ಧ ನೀರು ಸರಬರಾಜು ಮಾಡದಿದ್ದರೆ ಜನರಿಗೆ ಆರೋಗ್ಯದ ಸಮಸ್ಯೆಯಾಗುತ್ತದೆ. ಈ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿ ಎಂದರು.
ವಿಮೆ ಕಂಪೆನಿಯವರು ಸರಿಯಾಗಿ ಬೆಳೆನಷ್ಟ ಪರಿಹಾರ ನೀಡುವುದಿಲ್ಲ ಎಂಬುದಾಗಿ ಜನರಿಂದ ದೂರುಗಳಿವೆ. ಈ ಬಗ್ಗೆ ವಿಮೆ ಕಂಪೆನಿಯವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಸೂಚನೆ ನೀಡಲಾಗುವುದು ಎಂದು ಈ ವೇಳೆ ತಿಳಿಸಿದರು.
ಪಿಡಿಒ, ಇಒ, ತಹಶೀಲ್ದಾರ್ ಟಾಸ್ಕ್ಫೋರ್ಸ್ ಸಭೆ ಮಾಡಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು. ಡಿಸಿ ಮತ್ತು ಸಿಇಒ ಅವರು ತಮ್ಮ ಹಂತದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ನಿಯಮ ಸಡಿಲಗೊಳಿಸಬೇಕಿರುವುದನ್ನು ಸರ್ಕಾರಕ್ಕೆ ವರದಿ ಸಲ್ಲಿಸಿ, ಗಮನಕ್ಕೆ ತರಬೇಕು ಎಂದು ನಿರ್ದೇಶಿಸಿದರು.
ತಾಲ್ಲೂಕು ನೋಡಲ್ ಅಧಿಕಾರಿಗಳು ಕುಡಿಯುವ ನೀರು ಮತ್ತು ಬರ ಸಮಸ್ಯೆಯನ್ನು ತುರ್ತು ಸಮಸ್ಯೆ ಎಂದು ಪರಿಗಣಿಸಿ ಮುತುವರ್ಜಿಯಿಂದ ಕೆಲಸ ಮಾಡಬೇಕು. ಸಾಕಷ್ಟು ಮಳೆ ಬಂದರೆ ಈ ಪರಿಸ್ಥಿತಿ ಇರುವುದಿಲ್ಲ. ಮಳೆಯಾಗದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಜುಲೈ 25ರಂದು ಚಿತ್ರದುರ್ಗದಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮೋಡ ಬಿತ್ತನೆ ಬಗ್ಗೆ ಈಗಾಗಲೇ ಸಿಎಂ ಮುಂದೆ ಪ್ರಸ್ತಾಪವಾಗಿದೆ. ಮೋಡ ಬಿತ್ತನೆಯ ನಂತರ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬುದರ ಕುರಿತು ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
