ಚಿತ್ರದುರ್ಗ: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕುಡಿಯುವ ನೀರು ಹಾಗೂ ಮೇವು ಸಮರ್ಪಕವಾಗಿ ಪೂರೈಸಲು ಅನುದಾನದ ಕೊರತೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಶೇಕಡಾ 80ರಷ್ಟು ಕೆರೆಗಳು ಬತ್ತಿ ಹೋಗಿದ್ದು, ಜಲಾಶಯಗಳಲ್ಲಿನ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕಡಿಮೆ ಬಿತ್ತನೆ: ರಾಜ್ಯಾದ್ಯಂತ ಸರಾಸರಿ ಶೇ. 15ರಷ್ಟು ಮಾತ್ರ ಬಿತ್ತನೆಯಾಗಿದ್ದು, ಚಿಕ್ಕಬಳ್ಳಾಪುರ (ಶೇ. 2), ಕೋಲಾರ (ಶೇ. 1.5 – 2) ಹಾಗೂ ಚಿತ್ರದುರ್ಗ (ಶೇ. 3 – 4) ಜಿಲ್ಲೆಗಳಲ್ಲಿ ಬಿತ್ತನೆ ತೀವ್ರ ಕುಸಿತ ಕಂಡಿದೆ.
ವಿಭಾಗೀಯ ಮಳೆ ಕೊರತೆ: ಬೆಂಗಳೂರು ಕಂದಾಯ ವಿಭಾಗದಲ್ಲಿ ಒಟ್ಟಾರೆ ಶೇ. 37ರಷ್ಟು ಮಳೆ ಕೊರತೆಯಾಗಿದ್ದು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗರಿಷ್ಠ ಶೇ. 48ರಷ್ಟು ಅಭಾವ ದಾಖಲಾಗಿದೆ.
ಅನುದಾನ ಬಿಡುಗಡೆ: ಕುಡಿಯುವ ನೀರಿನ ತುರ್ತು ನಿರ್ವಹಣೆಗೆ ಪ್ರತಿ ಜಿಲ್ಲೆಗೆ ₹5 ಕೋಟಿ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ನೀಡಲಾಗುತ್ತಿದೆ.
’ಸೂಪರ್ ಎಲ್ ನಿನೋ’ ಪ್ರಭಾವ
ಬರದ ಗಂಭೀರತೆಗೆ ಜಾಗತಿಕ ವಾಯುಗುಣ ವೈಪರೀತ್ಯವೇ ಕಾರಣ ಎಂದ ಡಿಸಿಎಂ, “ಫೆಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶ 2 ರಿಂದ 3 ಡಿಗ್ರಿಯಷ್ಟು ಹೆಚ್ಚಾಗಿರುವುದರಿಂದ ‘ಸೂಪರ್ ಎಲ್ ನಿನೋ’ ಸೃಷ್ಟಿಯಾಗಿದೆ. ಇದರಿಂದಾಗಿ ಜಗತ್ತಿನ ಶೇ. 50ರಷ್ಟು ಭಾಗದಲ್ಲಿ ಬರ ವಾತಾವರಣ ಉಂಟಾಗಿದ್ದು, ಯುರೋಪ್ನಲ್ಲೂ ತೀವ್ರ ಶಾಖದಿಂದ ಸಾವಿರಾರು ಜನರು ಮೃತಪಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ಮುಂಗಾರು ಸಕಾಲಕ್ಕೆ ಬಾರದೆ ಈವರೆಗೆ ಶೇ. 42ಕ್ಕೂ ಹೆಚ್ಚು ಮಳೆ ಕೊರತೆಯಾಗಿದೆ,” ಎಂದು ವಿವರಿಸಿದರು.
ಪರಿಹಾರ ಮತ್ತು ಉದ್ಯೋಗ ಭದ್ರತೆ
ಗುಳೆ ತಡೆಯಲು ಸೂಚನೆ: ಬಾಗಲಕೋಟೆ, ವಿಜಯಪುರ, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳಿಂದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಎನ್ಆರ್ಇಜಿಎ / ವಿಬಿ ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಸ್ಥಳೀಯವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸ ನೀಡಲು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ನಿರ್ದೇಶನ ನೀಡಲಾಗಿದೆ.
ಟ್ಯಾಂಕರ್ ನೀರು ಸರಬರಾಜು: ನೀರಿನ ಅಭಾವವಿರುವ ಕಡೆ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಹಾಗೂ ಟ್ಯಾಂಕರ್ಗಳ ಮೂಲಕ ನೀರು ಒದಗಿಸಲಾಗುವುದು.
ಮೇವಿಗೆ ಒತ್ತು: ಮುಂದಿನ 30 ರಿಂದ 40 ವಾರಗಳಿಗೆ ಆಗುವಷ್ಟು ಮೇವಿನ ಸಂಗ್ರಹವಿದ್ದು, ನೀರಾವರಿ ಸೌಲಭ್ಯವಿರುವ ರೈತರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಿಸಲಾಗುತ್ತಿದೆ.
ಸಾಪ್ತಾಹಿಕ ಸಭೆ: ತಾಲೂಕು ಮತ್ತು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ಪ್ರತಿವಾರ ನಡೆಸಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ.
ಕೇಂದ್ರಕ್ಕೆ ವರದಿ ಸಲ್ಲಿಸುವಿಕೆ
ಬರ ಘೋಷಣೆ ನಿಯಮಗಳನ್ನು ಸಡಿಲಗೊಳಿಸುವಂತೆ ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಸಚಿವರು, ಆಗಸ್ಟ್ 15ರ ನಂತರದ ಮಳೆಯ ಸ್ಥಿತಿಗತಿಯನ್ನು ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ಸಮಗ್ರ ಬರ ಪರಿಹಾರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸಂತಾಪ: ಇದೇ ಸಂದರ್ಭದಲ್ಲಿ ಅಗಲಿದ ಮಾಜಿ ಸಚಿವ ಸಿ. ವೀರಣ್ಣ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
