ಬೆಂಗಳೂರು: ವಿವಿಧ ಮೂಲಗಳಲ್ಲಿ ಚದುರಿಹೋಗಿರುವ ಸಾರ್ವಜನಿಕ ದತ್ತಾಂಶವನ್ನು ಸುಲಭವಾಗಿ ಹುಡುಕಲು, ಮೌಲ್ಯಮಾಪನ ಮಾಡಲು ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕರ್ನಾಟಕ ಸರ್ಕಾರದ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಸಾರ್ವಜನಿಕ ಸಂಪನ್ಮೂಲ ‘ತಥ್ಯಕೋಶ’ (Tathyakosh.in) ಬಳಕೆಗೆ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಇಂದು ವಿಕಾಸಸೌಧದಲ್ಲಿ ಚಾಲನೆ ನೀಡಿದರು.
“ಡೇಟಾ ಪಡೆಯಲು ಅಂತರ್ಜಾಲದ ವಿವಿಧ ತಾಣಗಳಲ್ಲಿ ಅಲೆದಾಡುವ ಬದಲಿಗೆ, ‘ತಥ್ಯಕೋಶ’ವು ಒಂದೇ ವೇದಿಕೆಯಲ್ಲಿ ದತ್ತಾಂಶವನ್ನು ಸಮಗ್ರವಾಗಿ ಒದಗಿಸಲಿದೆ. ಸಾರ್ವಜನಿಕ ದತ್ತಾಂಶವನ್ನು ಸುಲಭವಾಗಿ ಪತ್ತೆಹಚ್ಚಿ, ಪರಿಶೀಲಿಸಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ವೇದಿಕೆ ನೆರವಾಗಲಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
458 ಮೂಲಗಳಿಂದ 15 ಲಕ್ಷಕ್ಕೂ ಅಧಿಕ ಡೇಟಾಸೆಟ್ಗಳು
‘ತಥ್ಯಕೋಶ’ವು ದೇಶದ 458 ವಿವಿಧ ದತ್ತಾಂಶ ಮೂಲಗಳಿಂದ 15 ಲಕ್ಷಕ್ಕೂ ಅಧಿಕ ಡೇಟಾಸೆಟ್ಗಳನ್ನು ಒಂದೇ ವೇದಿಕೆಯಲ್ಲಿ ಹುಡುಕಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ಸಾರ್ವಜನಿಕ ಉಪಯುಕ್ತ ದತ್ತಾಂಶಕ್ಕಾಗಿ ಸರ್ಕಾರದ ವಿವಿಧ ಅಂತರ್ಜಾಲ ತಾಣಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಇತರ ಡೇಟಾ ಸಂಗ್ರಹಣಾ ವೇದಿಕೆಗಳನ್ನು ಪ್ರತ್ಯೇಕವಾಗಿ ಹುಡುಕಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ‘ತಥ್ಯಕೋಶ’ವನ್ನು ರೂಪಿಸಲಾಗಿದೆ.
ಸಂಶೋಧಕರು, ನವೋದ್ಯಮಿಗಳು, ದತ್ತಾಂಶ ವಿಜ್ಞಾನಿಗಳು ಹಾಗೂ ನೀತಿ ನಿರೂಪಕರು ದೇಶದ ವಿವಿಧ ಮೂಲಗಳಿಂದ ಲಭ್ಯವಿರುವ ಸಾರ್ವಜನಿಕ ದತ್ತಾಂಶವನ್ನು ಒಂದೇ ಸ್ಥಳದಲ್ಲಿ ಹುಡುಕಿ, ಪರಿಶೀಲಿಸಿ ಮತ್ತು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಈ ವೇದಿಕೆ ನೆರವಾಗಲಿದೆ.
“ನಮ್ಮ ವಿವಿಧ ಸಂಸ್ಥೆಗಳಲ್ಲಿ ಈಗಾಗಲೇ ಅಪಾರ ಪ್ರಮಾಣದ ದತ್ತಾಂಶ ಲಭ್ಯವಿದೆ. ಆದರೆ ಅದನ್ನು ಸುಲಭವಾಗಿ ಪತ್ತೆಹಚ್ಚುವುದು, ವ್ಯವಸ್ಥಿತಗೊಳಿಸುವುದು ಹಾಗೂ ಪರಿಣಾಮಕಾರಿಯಾಗಿ ಬಳಸುವುದು ಒಂದು ಸವಾಲಾಗಿದೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ‘ತಥ್ಯಕೋಶ’ವನ್ನು ಮುಕ್ತ, ವಾಣಿಜ್ಯೇತರ ಡಿಜಿಟಲ್ ಸಾರ್ವಜನಿಕ ಸಂಪನ್ಮೂಲವಾಗಿ ನಿರ್ಮಿಸಲಾಗಿದೆ. ದೇಶಿ ದತ್ತಾಂಶವನ್ನು ಆಧರಿಸಿ ಸಂಶೋಧಕರು, ನವೋದ್ಯಮಿಗಳು ಮತ್ತು ನೀತಿ ನಿರೂಪಕರು ಹೊಸ ಆವಿಷ್ಕಾರಗಳನ್ನು ರೂಪಿಸಲು ಇದು ಪ್ರಮುಖ ಮೂಲಸೌಕರ್ಯವಾಗಲಿದೆ” ಎಂದು ಸಚಿವರು ಹೇಳಿದರು.
ದತ್ತಾಂಶ ಎಲ್ಲಿದೆ ಎಂಬುದನ್ನು ಹುಡುಕುವ ಸವಾಲಿಗೆ ಪರಿಹಾರ
‘ತಥ್ಯಕೋಶ’ವು ದೇಶದ ದತ್ತಾಂಶ ವ್ಯವಸ್ಥೆಯಲ್ಲಿರುವ ಪ್ರಮುಖ ಸವಾಲೊಂದನ್ನು ಪರಿಹರಿಸುವ ಉದ್ದೇಶ ಹೊಂದಿದೆ. ದೇಶದಲ್ಲಿ ದತ್ತಾಂಶದ ಕೊರತೆ ಇಲ್ಲ. ಆದರೆ ದತ್ತಾಂಶ ಎಲ್ಲಿದೆ, ಅದು ಸಂಬಂಧಿತವಾಗಿದೆಯೇ, ವಿಶ್ವಾಸಾರ್ಹವಾಗಿದೆಯೇ ಮತ್ತು ಬಳಕೆಗೆ ಲಭ್ಯವಿದೆಯೇ ಎಂಬುದನ್ನು ಗುರುತಿಸುವುದೇ ಪ್ರಮುಖ ಸವಾಲಾಗಿದೆ.
ಈ ಕುರಿತು ಮಾತನಾಡಿದ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಅಶೋಕ್ ಕಾಮತ್, ಸಂಶೋಧಕರು, ನೀತಿ ನಿರೂಪಕರು ಮತ್ತು ನವೋದ್ಯಮಿಗಳು ಅಗತ್ಯವಿರುವ ದತ್ತಾಂಶವನ್ನು ಹೊಸದಾಗಿ ಹುಡುಕಲು ಸಮಯ ಹಾಗೂ ಸಂಪನ್ಮೂಲ ವ್ಯಯಿಸುವ ಮೊದಲು, ಈಗಾಗಲೇ ಲಭ್ಯವಿರುವ ದತ್ತಾಂಶವನ್ನು ಸುಲಭವಾಗಿ ಪತ್ತೆಹಚ್ಚುವ ವ್ಯವಸ್ಥೆ ಅಗತ್ಯವಿದೆ. ಈ ಉದ್ದೇಶವನ್ನು ‘ತಥ್ಯಕೋಶ’ ಪೂರೈಸಲಿದೆ ಎಂದು ಹೇಳಿದರು.
16 ಪ್ರಮುಖ ಕ್ಷೇತ್ರಗಳ ದತ್ತಾಂಶ
‘ತಥ್ಯಕೋಶ’ದಲ್ಲಿ ದತ್ತಾಂಶವನ್ನು ಕ್ಷೇತ್ರ, ಭೌಗೋಳಿಕ ವ್ಯಾಪ್ತಿ, ಕಾಲಾವಧಿ, ಸ್ವರೂಪ ಮತ್ತು ಲಭ್ಯತೆ ವಿಧಾನ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಆರೋಗ್ಯ, ಕೃಷಿ, ಶಿಕ್ಷಣ, ಮೂಲಸೌಕರ್ಯ, ಪರಿಸರ, ಆರ್ಥಿಕತೆ ಮತ್ತು ಆಡಳಿತ ಸೇರಿದಂತೆ ಒಟ್ಟು 16 ಪ್ರಮುಖ ಕ್ಷೇತ್ರಗಳ ದತ್ತಾಂಶವನ್ನು ವೇದಿಕೆ ಒಳಗೊಂಡಿದೆ.
ಭಾರತಕ್ಕೆ ಸಂಬಂಧಿಸಿದ ದತ್ತಾಂಶ ಹೊಂದಿರುವ 346 ಭಾರತೀಯ ಮೂಲಗಳು ಹಾಗೂ 37 ಅಂತರರಾಷ್ಟ್ರೀಯ ದತ್ತಾಂಶ ಭಂಡಾರಗಳಿಂದ ಮಾಹಿತಿಯನ್ನು ಇದು ಸಂಗ್ರಹಿಸುತ್ತದೆ.
ಸಂಶೋಧಕರು ಮತ್ತು ದತ್ತಾಂಶ ವಿಜ್ಞಾನಿಗಳಿಗೆ ಅನುಕೂಲ
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮಾತನಾಡಿ, “ಪ್ರತಿಯೊಂದು ದತ್ತಾಂಶವನ್ನು ಪ್ರತ್ಯೇಕವಾಗಿ ಹುಡುಕುವ ಅಗತ್ಯವಿಲ್ಲದೆ, ‘ತಥ್ಯಕೋಶ’ವು ಬಳಕೆದಾರರಿಗೆ ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. ವಿಶ್ವಾಸಾರ್ಹ ಹಾಗೂ ಬಳಕೆಗೆ ಸಿದ್ಧವಾಗಿರುವ ದತ್ತಾಂಶದ ಸಂಘಟಿತ ಸಂಗ್ರಹಗಳನ್ನು ಗುರುತಿಸುವುದು ಇದರಿಂದ ಸುಲಭವಾಗಲಿದೆ. ಸಂಶೋಧಕರು ಮತ್ತು ದತ್ತಾಂಶ ವಿಜ್ಞಾನಿಗಳ ಅಮೂಲ್ಯ ಸಮಯವನ್ನು ಇದು ಉಳಿಸಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆ (ಕೆಐಟಿಎಸ್)ಯ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಅಶೋಕ್ ಕಾಮತ್, ಐಐಟಿಎಸಿಬಿ ಅಧ್ಯಕ್ಷ ಪ್ರೊ. ಅಶೋಕ್ ಮಿಶ್ರಾ ಹಾಗೂ ಅಕ್ಸೆಲ್ ಟೆಕ್ನಾಲಜಿ ಫೋರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮನ್ ದಾಶ್ ಉಪಸ್ಥಿತರಿದ್ದರು.
