ಬೆಂಗಳೂರು: ರಕ್ತದಾನವನ್ನು “ಮಹಾದಾನ” ಅಥವಾ “ಜೀವದಾನ” ಎಂದು ಕರೆಯಲಾಗುತ್ತದೆ. ನಮ್ಮ ಸಣ್ಣ ಪ್ರಯತ್ನವೊಂದು ಮತ್ತೊಬ್ಬರ ಜೀವವನ್ನು ಉಳಿಸುವ ಶಕ್ತಿ ಹೊಂದಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹೇಳಿದರು.
ಇಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ದಿವಂಗತ ನಿರ್ಮಲಾ ಬಾಳಿಗಾ ಅವರ ಸ್ಮರಣಾರ್ಥ ‘ಲಹರಿ’ ಅಡ್ವೊಕೇಟ್ ಪೋರಂ ಹಾಗೂ ಅವರ ಕುಟುಂಬಸ್ಥರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿಗಳು, “ನ್ಯಾಯಾಲಯದ ನಾಲ್ಕು ಚೌಕಟ್ಟಿನಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗಳು ಪ್ರತಿದಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕುಟುಂಬಗಳ ಜೀವನವನ್ನು ಕಾಯುತ್ತಾರೆ. ಆದರೆ ಇಂದು ಆ ಸೀಮೆಯಿಂದ ಹೊರಬಂದು, ರಕ್ತದಾನ ಮಾಡುವ ಮೂಲಕ ನೇರವಾಗಿ ವ್ಯಕ್ತಿಯ ಜೀವ ಉಳಿಸುವ ಉದಾತ್ತ ಕಾರ್ಯದಲ್ಲಿ ಭಾಗಿಯಾಗಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ಆಧುನಿಕ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ. ರಕ್ತವು ಕೇವಲ ಮನುಷ್ಯನ ಕರುಣೆ ಮತ್ತು ಪ್ರೀತಿಯಿಂದ ಮಾತ್ರ ಹೊರಹೊಮ್ಮಲು ಸಾಧ್ಯ. ಆದ್ದರಿಂದ ರಕ್ತದಾನವು ಅತ್ಯಂತ ಶ್ರೇಷ್ಠ ಸೇವೆಯಾಗಿದೆ” ಎಂದು ತಿಳಿಸಿದರು.
ಈ ಸತ್ಕಾರ್ಯಕ್ಕೆ ಕಾರಣಕರ್ತರಾದ ಲಹರಿ ಸಂಸ್ಥೆ, ನಿರ್ಮಲಾ ಬಾಳಿಗಾ ಅವರ ಕುಟುಂಬಸ್ಥರು ಹಾಗೂ ರಕ್ತದಾನ ಮಾಡಿದ ಪ್ರತಿಯೊಬ್ಬ ದಾನಿಗಳಿಗೂ ನ್ಯಾಯಾಂಗ ಇಲಾಖೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಿಟಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿಗಳಾದ ಕೆ.ಎಸ್. ಭರತ್ ಕುಮಾರ್, ಲಹರಿ ಅಡ್ವೊಕೇಟ್ ಪೋರಂನ ಕಾರ್ಯದರ್ಶಿ ಸುಮನ ಬಾಳಿಗ ಸೇರಿದಂತೆ, ರಿಜಿಸ್ಟ್ರಾರ್, ವಕೀಲರು, ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
