ಸಮಗ್ರ ಸುದ್ದಿ

ಕರ್ನಾಟಕ ಹಾಗೂ ಕೇರಳಂ ರಾಜ್ಯ ಸಹೋದರರಂತೆ: ಸಿಎಂ ಡಿ ಕೆ ಶಿವಕುಮಾರ್

Share

ಅಲಪುಳ್ಳ/ಕೇರಳಂ:ಕರ್ನಾಟಕ ಹಾಗೂ ಕೇರಳಂ ರಾಜ್ಯ ಸಹೋದರರಂತಿದೆ. ಎರಡೂ ರಾಜ್ಯಗಳು ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೇರಳಂನ ಅಲಪುಳ್ಳದಲ್ಲಿ ಶನಿವಾರ ನಡೆದ 72ನೇ ಆವೃತ್ತಿಯ ನೆಹರೂ ಟ್ರೋಫಿ ಬೋಟ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತೋಷ ತಂದಿದೆ. ನಮ್ಮ ಶ್ರೇಷ್ಠ ನಾಯಕರಾದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಈ ಕ್ರೀಡೆಗೆ ಆದ್ಯತೆ ನೀಡಿ ದೊಡ್ಡ ಸಂದೇಶ ನೀಡಿದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಕಾಂಗ್ರೆ ಅಧಿಕಾರದಲ್ಲಿದ್ದಾಗಲೆಲ್ಲ ಸಮಾಜದ ಎಲ್ಲಾ ವರ್ಗದ ಜನ ಅಧಿಕಾರದಲ್ಲಿದ್ದಂತೆ. ಇಂದು ಈ ರಾಜ್ಯದ ಎಲ್ಲಾ ಯುವಕರು ಈ ಕ್ರೀಡಾಕೂಟವನ್ನು ಆನಂದಿಸುತ್ತಿದ್ದೀರಿ. ಕರ್ನಾಟಕದಲ್ಲಿ ಮೈಸೂರು ದಸರಾವನ್ನು ಸಂಭ್ರಮದಿಂದ ಆಚರಿಸುವಂತೆ ಕೇರಳಂನಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ” ಎಂದರು.

“ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕೂಡ ನಿಮ್ಮ ಜೊತೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಾವು ನೀರು, ಹವಾಮಾನ, ಸಂಸ್ಕೃತಿ ಸೇರಿದಂತೆ ಎಲ್ಲವನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಶ್ರೀಮತಿ ಇಂದಿರಾ ಗಾಂಧಿ ಹಾಗೂ ಶ್ರೀಮತಿ ಸೋನಿಯಾ ಗಾಂಧಿ ಅವರು ಸಂಸತ್ ಪ್ರವೇಶಿಸಲು ಕರ್ನಾಟಕ ವೇದಿಕೆಯಾಗಿತ್ತು. ರಾಹುಲ್ ಗಾಂಧಿ ಹಾಗೂ ಶ್ರೀಮತಿ ಪ್ರಿಯಾಂಕ ಗಾಂಧಿ ಅವರು ಸಂಸತ್ ಪ್ರವೇಶಿಸಲು ಕೇರಳಂ ರಾಜ್ಯ ವೇದಿಕೆಯಾಗಿದೆ” ಎಂದರು.

ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಳ್ಳುತ್ತದೆ

“ಸತೀಶನ್ ಅವರ ನೇತೃತ್ವದ ಸರ್ಕಾರ ರಾಜ್ಯದ ಕಲ್ಯಾಣಕ್ಕೆ ಶ್ರಮಿಸಲಿದ್ದು, ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲಿದೆ. ಯುಡಿಎಫ್ ಮೈತ್ರಿಕೂಟ ಒಟ್ಟಾಗಿ ಕೆಲಸ ಮಾಡಲಿದ್ದು, ನಾವೆಲ್ಲರೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವ ದೊಡ್ಡ ಸಂದೇಶ ರವಾನಿಸಲಿದೆ” ಎಂದರು.

“ಇಲ್ಲಿರುವ ಎಲ್ಲಾ ಸ್ಪರ್ಧಿಗಳು ಹಾಗೂ ಆಡಳಿತ ಮಂಡಳಿಯವರಿಗೆ ಶುಭ ಕೋರುತ್ತೇನೆ. ಕರ್ನಾಟಕ ನಿಮ್ಮ ಜತೆಗೆ ನಿಲ್ಲಲಿದೆ, ನೀವು ಕರ್ನಾಟಕ ರಾಜ್ಯದ ಜತೆಯಾಗಿ ನಿಲ್ಲಬೇಕು. ಎರಡೂ ರಾಜ್ಯದವರು ಸಹೋದರರಂತೆ ಸಾಗಬೇಕು” ಎಂದು ಕರೆ ನೀಡಿದರು.


Share

You cannot copy content of this page