ಸಮಗ್ರ ಸುದ್ದಿ

ಪಕ್ಷಕ್ಕೆ ಮುಜುಗರ ತಪ್ಪಿಸಲು ಸಚಿವ ಬಿ ನಾಗೇಂದ್ರ ರಾಜೀನಾಮೆ ಸಲ್ಲಿಕೆ: ಸಿಎಂ ಡಿ ಕೆ ಶಿವಕುಮಾರ್

Share

ಬೆಂಗಳೂರು: ಪಕ್ಷಕ್ಕೆ ಮುಜುಗರ ತಪ್ಪಿಸಲು ಸಚಿವ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಾಳೆ ಬೆಳಗ್ಗೆ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಪ್ರತಿಪಕ್ಷಗಳ ಸುಳ್ಳು ಆರೋಪಗಳು ಮತ್ತು ಸದನದ ಕಲಾಪಗಳಿಗೆ ಉಂಟಾಗುತ್ತಿರುವ ಅಡಚಣೆಯಿಂದ ನೊಂದು ಸಚಿವ ಬಿ. ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

“ಪ್ರತಿಪಕ್ಷ ಬಿಜೆಪಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಇಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿದೆ. ದಲಿತ ಮತ್ತು ಪರಿಶಿಷ್ಟ ಜಾತಿಯ ನಾಯಕರಾಗಿರುವ ನಾಗೇಂದ್ರ ಅವರು ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಕಾರಣಕ್ಕೆ ಅವರ ಮೇಲೆ ಸತ್ಯಕ್ಕೆ ದೂರವಾದ ಆರೋಪಗಳನ್ನು ಹೊರಿಸಲಾಗುತ್ತಿದೆ” ಎಂದು ಶಿವಕುಮಾರ್ ಕಿಡಿಕಾರಿದರು.

“ಒಂದೇ ವಿಚಾರಕ್ಕೆ, ಸುಳ್ಳು ಆರೋಪಕ್ಕೆ ಎರಡು ಬಾರಿ ರಾಜೀನಾಮೆ ನೀಡಿದ್ದರೆ ಅದು ನಾಗೇಂದ್ರ ಅವರು” ಎಂದು ನುಡಿದರು.

ಪಕ್ಷಕ್ಕಾಗಿ ನಾಗೇಂದ್ರ ಅವರು ತ್ಯಾಗ:

“ನಾಗೇಂದ್ರ ಅವರು ಯಾವಾಗಲೂ ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಇಂದು ಸಾಬೀತು ಮಾಡಿದ್ದಾರೆ. ಶೀಘ್ರದಲ್ಲೇ ತನಿಖೆಯಲ್ಲಿ ಅವರು ಈ ಆರೋಪಗಳಿಂದ ಮುಕ್ತರಾಗಿ ಹೊರಬರುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಪಾಲರ ಪತ್ರ ಹಾಗೂ ಕಾನೂನು ಚೌಕಟ್ಟು

ಕಾನೂನಿನ ಚೌಕಟ್ಟಿನಲ್ಲಿ ಏನೇನು ಮಾಡಬೇಕೋ ಅದನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ, ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಅಂತಿಮ ನಿರ್ಧಾರ ನಾಳೆ:

“ನಾಗೇಂದ್ರ ಅವರು ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದರೂ, ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರ ಗಮನಕ್ಕೆ ತಂದು, ಅವರೊಂದಿಗೆ ಚರ್ಚಿಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಗೆಲುವಾಯಿತಾ ಎಂದು ಕೇಳಿದಾಗ, “ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವವರಿಗೆ ಇದು ಗೆಲುವಾಗಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದರು.

“ಸದನದಲ್ಲಿ ನೋಟಿಸ್ ನೀಡಿ, ಸೂಕ್ತ ಚರ್ಚೆ ನಡೆಸಿ’ ಎಂದು ಆಹ್ವಾನ ನೀಡಿದರೂ ವಿಪಕ್ಷಗಳು ಚರ್ಚೆಗೆ ಬರದೆ ಕೇವಲ ರಾಜಕೀಯ ದುರುದ್ದೇಶದಿಂದ ಕಲಾಪಕ್ಕೆ ಅಡ್ಡಿಪಡಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷಗಳ ಒತ್ತಡಕ್ಕೆ ಸರ್ಕಾರ ಮಣಿದಿಲ್ಲ

ಇದಕ್ಕೂ ಮುನ್ನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ ಅವರು, “ಸರ್ಕಾರ ವಿಪಕ್ಷಗಳ ಒತ್ತಡಕ್ಕೆ ಮಣಿದಿಲ್ಲ” ಎಂದು ಸ್ಪಷ್ಟಪಡಿಸಿದರು.

ನಾಗೇಂದ್ರ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿಲ್ಲ

ನಾಗೇಂದ್ರ ಅವರು ನಿರಪರಾಧಿ. ತನಿಖಾ ವರದಿಗಳನ್ನು ಪರಿಶೀಲಿಸಿ, ಚರ್ಚಿಸಿದ ಬಳಿಕ ಅವರ ಮೇಲಿನ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂಬುದು ತಿಳಿದಿದೆ. ನಾಲ್ಕು ಬಾರಿ ಗೆದ್ದಿರುವ ಒಬ್ಬ ದಲಿತ ನಾಯಕನ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ ಕೇವಲ ಅವರಿಗಷ್ಟೇ ಅಲ್ಲ, ಇಡೀ ಬಡ ಜನತೆಗೆ ನೋವುಂಟು ಮಾಡಿದೆ ಎಂದರು.


Share

You cannot copy content of this page