ಸಮಗ್ರ ಸುದ್ದಿ

ಮುಖ್ಯಮಂತ್ರಿಗಳಿಂದ 1,775.41 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ-ಪ್ರಿಯಾಂಕ್ ಖರ್ಗೆ

Share

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗಲು ಅಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಲ್ಯಾಣ ಕರ್ನಾಟಕ ಭಾಗದ 1,775.41 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬುಧವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಂಜೆ‌ ವಿಶೇಷ ವಿಮಾನದ‌ ಮೂಲಕ ಕಲಬುರಗಿಗೆ ಅಗಮಿಸಿ‌ ಸಂಜೆ 7.40 ಗಂಟೆಗೆ ಸಾರ್ವಜನಿಕ ಉದ್ಯಾನವನದಲ್ಲಿ ಆಯೋಜಿಸಿರುವ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ 8.30 ಗಂಟೆಗೆ ಅಪ್ಪ ಕೆರೆ ಕಾಮಗಾರಿಗಳ ಉದ್ಘಾಟನೆ ಮಾಡಿ ವೀಕ್ಷಣೆ ಮಾಡಲಿದ್ದಾರೆ ಎಂದರು.

ಮುಖ್ಯಮಂತ್ರಿಗಳು ಗುರುವಾರ ಬೆಳಿಗ್ಗೆ 8.30 ಗಂಟೆಗೆ ಎಸ್.ವಿ.ಪಿ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ‌ ಮಾಡಿ ನಂತರ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ‌ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪ್ರದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಇದೇ‌ ವೇದಿಕೆಯಲ್ಲಿ ಕಲಬುರಗಿ ಜಿಲ್ಲೆಯ 1,105.63 ಕೋಟಿ ರೂ. ಮೊತ್ತದ 223 ಕಾಮಗಾರಿಗಳು ಸೇರಿದಂತೆ ಒಟ್ಟಾರೆ ಪ್ರದೇಶದ ಏಳು ಜಿಲ್ಲೆಗಳ 1,071.56 ಕೋಟಿ ರೂ.‌ ವೆಚ್ಚದ 557 ಕಾಮಗಾರಿಗಳಿಗೆ ಅಡಿಗಲ್ಲು, 703.85 ಕೋಟಿ ರೂ. ವೆಚ್ಚದ 244 ಕಾಮಗಾರಿಗಳ ಸೇರಿದಂತೆ ಒಟ್ಟು 1,775.41 ಕೋಟಿ ರೂ. ವೆಚ್ಚದ 801 ಕಾಮಗಾರಿಗಳಿಗೆ ಸಿ.ಎಂ. ಚಾಲನೆ ನೀಡಲಿದ್ದಾರೆ ಎಂದರು.

ಬರ ಘೋಷಣೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಎನ್.ಡಿ.ಆರ್.ಎಫ್ ಮಾರ್ಗದೂಚಿ ಪ್ರಕಾರವೆ ಬರಗಾಲ ಘೋಷಣೆ ಮಾಡಬೇಕಾಗುತ್ತದೆ. ನಿಯಮಾವಳಿ ಸರಳಿಕರಣಕ್ಕೆ ಒತ್ತಾಯ ಮಾಡಿದ್ದುಣ ಇದುವರೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಇನ್ನು ಎರಡು ವಾರಗಳ ಕಾಲ ಮಳೆ ಸ್ಥಿತಿಗತಿ ನೋಡಿ ಜಿಲ್ಲೆಗಳಿಂದ ವರದಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಹಿಂದೆ ಯು.ಪಿ.ಎ. ಕಾಲದಲ್ಲಿ ರೈತರ ಸಾಲ ಮನ್ನ ಮಾಡಿದ್ದು ನಮ್ಮ ಸರ್ಕಾರ. ಬರಗಾಲ ಘೋಷಣೆ‌ ಮಾಡಬೇಕೆಂಬ ವಿರೋಧ ಪಕ್ಷದವರು ಇಲ್ಲಿ ಅನಗತ್ಯ ಹೋರಾಟ ಮಾಡುತ್ತಿದ್ದಾರೆ. ಇದನ್ನು ತಮ್ಮದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎನ್.ಡಿ.ಆರ್.ಎಫ್ ನಿಯಮಾವಳಿ ಸರಳೀಕರಣ ಮಾಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಲಿ ಎಂದರು.

ತಳವಾರ ಸಮುದಾಯದವರಿಗೆ ಎಸ್.ಟಿ ಪ್ರಮಾಣ ಪತ್ರ ಕುರಿತಂತೆ ಮಾತನಾಡಿದ‌ ಸಚಿವರು, ಕಳೆದ ಬೆಳಗಾವಿ‌ ಅಧಿವೇಶನದಲ್ಲಿ ಅಂದಿನ ಸಿ‌.ಎಂ. ಸಿದ್ದರಾಮಯ್ಯ ಅವರು ಸಮುದಾಯದ‌ ಮುಖಂಡರೊಂದಿಗೆ ಚರ್ಚಿಸಿಯೇ ಆದೇಶ ಮಾಡಿದ್ದು, ಅದರಂತೆ ಅರ್ಹರಿಗೆ ಎಸ್.ಟಿ. ಪ್ರಮಾಣ ಪತ್ರ‌ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದ‌ ಗೊಂದಲವನ್ನು ನಮ್ಮ ಸರ್ಕಾರ ಹಂತ ಹಂತವಾಗಿ ಪರಿಹಾರ ಕಲ್ಪಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಎಲ್.ಸಿ. ತಿಪ್ಪಣ್ಣಪ್ಪ‌ ಕಮಕನೂರ, ಜೆಸ್ಕಾಂ‌ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಇದ್ದರು.


Share

You cannot copy content of this page