ಬೆಂಗಳೂರು:ಭೂಮಿ- ಪ್ರಕೃತಿಯನ್ನು ಆರಾಧಿಸುವ ನಮ್ಮ ಮೂಲ ಸಂಸ್ಕೃತಿ ಹಾಗೂ ಜಾನಪದ ಕಲೆಗಳನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿಯೇ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಕ್ಕೂರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಮೊದಲ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಂದು ಐಟಿ ಸಿಟಿ ಬೆಂಗಳೂರಿನಲ್ಲಿದ್ದೇವೆ. ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಈ ಕಾಂಕ್ರೀಟ್ ಕಾಡಿನಲ್ಲಿ ನೆಲೆಗೊಂಡಿದ್ದೇವೆ. ಆದರೆ, ನಮ್ಮ ಮೂಲ ಹಳ್ಳಿಗಳಲ್ಲಿವೆ ಎಂಬುದನ್ನು ನಾವು ಮರೆಯಬಾರದು. ಹೀಗಾಗಿ ನಮ್ಮ ಹಳ್ಳಿ ಸೊಗಡಿನ ಮಣ್ಣಿನ ಸಂಸ್ಕೃತಿ, ದೇಸಿ ಸಂಸ್ಕೃತಿ ಹಾಗೂ ಜಾನಪದ ಕಲೆಗಳನ್ನು ಪರಿಚಯಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.
ನಗರ ಭಾಗದ ಇಂದಿನ ಮಕ್ಕಳಿಗೆ ನಮ್ಮ ಹಳ್ಳಿ ಹೇಗಿರುತ್ತೆ? ನಮ್ಮ ಹಳ್ಳಿಯ ಬದುಕಿನ ಖುಷಿ ಎಂತಹದ್ದು? ಭತ್ತ ರಾಗಿಯ ತೆನೆ ಹೇಗಿರುತ್ತದೆ? ಎಂಬ ಕುರಿತು ತಿಳುವಳಿಕೆ ಕಡಿಮೆ. ಹೀಗಾಗಿ ನಮ್ಮ ಮಕ್ಕಳಿಗೆ ಹಳ್ಳಿಯ ಬದುಕಿನ ಶ್ರೀಮಂತಿಕೆಯನ್ನು ಪರಿಚಯಿಸುವ ಮತ್ತು ಆಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವೇ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಎಂದು ಅವರು ಅಭಿಪ್ರಾಯಪಟ್ಟರು.
“ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಜನರ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಇದೀಗ ಈ ಕಾರ್ಯಕ್ರಮವನ್ನು ಎರಡು ದಿನ ನಡೆಸಲಾಗುತ್ತಿದೆ. ನಾವು ಈ ಕಾರ್ಯಕ್ರಮ ಆರಂಭಿಸಿದ ನಂತರ ಬೆಂಗಳೂರಿನ ಹಲವೆಡೆ ಸಂಕ್ರಾಂತಿಗೆ ಇದೇ ರೀತಿಯ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಬ್ಯಾಟರಾಯನಪುರದಲ್ಲೂ ಕೆಲವರು ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ, ಇದರ ಮುಖಾಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದರೆ ನಮ್ಮ ಉದ್ದೇಶ ಈಡೇರಿದಂತೆ” ಎಂದು ತಿಳಿಸಿದರು.
“ನಮ್ಮ ಜಾನಪದ ಕಲಾವಿದರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು, ಇಂತಹಾ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅಧಿಕ ಸಂಖ್ಯೆಯಲ್ಲಿ ನಡೆಯಬೇಕು ಹಾಗೂ ಜನ ಕುಟುಂಬ ಸಮೇತರಾಗಿ ಸಂತೋಷದಿಂದ ಕೆಲವು ಗಂಟೆಗಳು ಕಳೆಯುವಂತಾಗಬೇಕು ಎಂಬ ಕಾರಣದಿಂದಲೇ ನಾವು ಸುಗ್ಗಿ-ಹುಗ್ಗಿ ಕಾರ್ಯಕ್ರಮದ ಆಯೋಜನೆ ಮುಂದಾಗಿದ್ದು. ಈಗ ನಮ್ಮಿಂದ ಸ್ಫೂರ್ತಿಯಾಗಿ ಇತರರು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಚಾರ” ಎಂದು ಸಂತಸ ಹಂಚಿಕೊಂಡರು.
“ಈಗೆಲ್ಲಾ ಮನರಂಜನೆಗಾಗಿ ಮಾಲ್ಗೆ ಹೋಗಬೇಕು. ಅಲ್ಲಿ ಹೋದರೆ ಮಿತಿಮೀರಿ ಖರ್ಚು ಮಾಡಬೇಕು.ಖರ್ಚು ಮಾಡದಿದ್ದರೆ ಮನಸ್ಸಿಗೆ ಸಂಕಟ. ಆದರೆ, ಇಲ್ಲಿ ಅಂತಹ ಸಂಕಟಗಳಿಗೆ ಆಸ್ಪದವೇ ಇಲ್ಲ. ಹಿರಿಯರು-ಕಿರಿಯರು ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗ್ರಾಮೀಣ ಆಟಗಳಲ್ಲಿ ತೊಡಗಬಹುದು. ಇಡೀ ಕುಟುಂಬ ಒಟ್ಟಾಗಿ ಸಂತೋಷದಿಂದ ಸಮಯ ಕಳೆಯಬಹುದು. ಜನ ಕುಟುಂಬ ಸಮೇತರಾಗಿ ಬಂದು ಸಂತೋಷದಿಂದ ಇಲ್ಲಿ ಸಮಯ ಕಳೆದರೆ ಸಾಕು, ನಮಗೆ ಅದಕ್ಕಿಂತ ಹೆಚ್ಚಿನ ಭಾಗ್ಯ ಏನಿದೆ” ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಜಕ್ಕೂರು ಕ್ರೀಡಾಂಗಣದಲ್ಲಿ ಹಳ್ಳಿಭಾಗದ ತಿನಿಸುಗಳನ್ನು ನಗರದ ಜನರಿಗೆ ಪರಿಚಯಿಸುವ ಸಲುವಾಗಿ 80ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು. ಈ ಮಳಿಗೆಗಳಲ್ಲಿ ಸಾವಿರಾರು ಜನ ತಮ್ಮ ಮಕ್ಕಳೊಂದಿಗೆ ಹಳ್ಳಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು. ಜತೆಗೆ ಎರಡೂ ದಿನದ ಕಾರ್ಯಕ್ರಮದಲ್ಲಿ ಸಚಿವರ ಕೃಷ್ಣ ಬೈರೇಗೌಡ ಅವರು ತಂಡ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಚಿತವಾಗಿ ಸಿಹಿ ಮತ್ತು ಖಾರ ಪೊಂಗಲ್ ವಿತರಿಸಿದರು.
ಸುಗ್ಗಿ-ಹುಗ್ಗಿ 2026 ಕಾರ್ಯಕ್ರಮಕ್ಕಾಗಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಅನೇಕ ತಂಡಗಳು ಜನಪದ ನೃತ್ಯ ತಂಡ ನೀಡಿದ ಪ್ರದರ್ಶನ ಜನ ಗಮನ ಸೆಳೆಯಿತು. ಸ್ಥಳೀಯ 30ಕ್ಕೂ ಅಧಿಕ ತಂಡಗಳು ಜನಪದ ಪ್ರದರ್ಶನ ನೀಡಿದ್ದು ವಿಶೇಷ. ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಸಲುವಾಗಿಯೇ ಹಲವರು ಪ್ರತಿನಿತ್ಯ ಜನಪದ ಕಲೆ-ನೃತ್ಯದ ಅಭ್ಯಾಸದಲ್ಲಿ ತೊಡಗಿರುವ ಕುರಿತು ವೇದಿಕೆಯಲ್ಲೇ ಸಚಿವ ಕೃಷ್ಣ ಬೈರೇಗೌಡ ಅವರು ಹರ್ಷ ವ್ಯಕ್ತಪಡಿಸಿದರು. ಮೊದಲ ದಿನ ಸ್ಥಳೀಯ “ಬರ್ಫಿ” ತಂಡ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು.
