ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳನ್ನು ಅಭಿವೃದ್ದಿಪಡಿಸಲು ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲಾಗುತ್ತಿದೆ. ಅದರ ಮೊದಲ ಪ್ರಯತ್ನವಾಗಿ ಫೆಬ್ರುವರಿ 21 ರಿಂದ 28 ರವರೆಗೆ ಕಲಬುರಗಿ ನಾಟಕೋತ್ಸವ ೨೬, ಆಯೋಜನೆ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರಾಂತ ರಂಗಕರ್ಮಿ ಆರುಂಧತಿ ನಾಗ್ ಅವರ ರಂಗಶಂಕರ ನಾಟಕ ತಂಡದ ಸಹಭಾಗಿತ್ವದಲ್ಲಿ ಈ ನಾಟಕೋತ್ಸವ ಆಯೋಜನೆ ಮಾಡಲಾಗುತ್ತಿದ್ದು, ಪ್ರೇಕ್ಷಕರಿಗಾಗಿ, ಮಕ್ಕಳಿಗಾಗಿ ನಾಟಕೋತ್ಸವ ಒಂದು ವಾರಗಳ ಕಾಲ ನಡೆಯಲಿದ್ದು, ಅದರ ಜೊತೆಗೆ ನಾಟಕ ಸಂವಾದಗಳು ನಡೆಯಲಿವೆ.
ಕಲಬುರಗಿ ಜಿಲ್ಲೆ ಶರಣರ ಸಂತರ ಸೂಫಿಗಳ ನಾಡಾಗಿದ್ದು ನಾಟಕೋತ್ಸವ ಆಯೋಜನೆ ಮಾಡುವುದರಿಂದ ಅವರ ತತ್ವಗಳನ್ನು ನಾಟಕಗಳ ಮೂಲಕ ಪ್ರೇಕ್ಷಕರಿಗೆ ನುರಿತ ಹಾಗೂ ಪರಿಣಿತ ನಾಟಕ ತಂಡಗಳ ಹಾಗೂ ರಂಗಕರ್ಮಿಗಳ ಮೂಲಕ ತಲುಪಿಸುವ ಕ್ರಿಯೆ ಮುಂದಿನ ಐದು ವರ್ಷಗಳ ಕಾಲ ನಡೆಯಲಿದೆ. ಸಧ್ಯ ಈಗ ಏರ್ಪಡಿಸುತ್ತಿರುವ ನಾಟಕೋತ್ಸವವನ್ನು ರಂಗಶಂಕರದೊಂದಿಗೆ ಸಹಭಾಗಿತ್ವ ಇದ್ದು ಸಾರ್ವಜನಿಕರು ನಾಟಕಗಳನ್ನು ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಕಲಬುರಗಿ ನಾಟಕೋತ್ಸವ ರಾಷ್ಟ್ರೀಯ ಸ್ವರೂಪದಲ್ಲಿರಲಿದ್ದು, ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಸುಮಾರು 200 ಕ್ಕೂ ಅಧಿಕ ಕಲಾವಿದರ ಹಾಗೂ ರಂಗಕರ್ಮಿಗಳು ಭಾಗವಹಿಸಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊರತೆ ಇದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಷ್ಟು ವರ್ಷಗಳ ಕಾಲ ರಂಗ ಚಟುವಟಿಕೆಗಳೇ ಅಷ್ಟೊಂದು ನಡೆಯುತ್ತಿರಲಿಲ್ಲ. ಅದಕ್ಕಾಗಿ ನಿರಂತರ ಚಟುವಟಿಕೆ ನಡೆಸುವ ಉದ್ದೇಶದಿಂದ ಐದು ವರ್ಷಗಳ ಕಾಲದ ಯೋಜನೆ ಹಾಕಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ಕಲಾವಿದ ರಂಗಕರ್ಮಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಒಂದು ವಾರಗಳ ಕಾಲ ನಡೆಯುವ ನಾಟಕೋತ್ಸವದಲ್ಲಿ ಹಿರಿಯರಿಗೆ ಕನಿಷ್ಟ ಮೊತ್ತ ನಿಗದಿಪಡಿಸಲಾಗಿದ್ದು, ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
