ಸಮಗ್ರ ಸುದ್ದಿ

ಭವಿಷ್ಯದ ಕೈಗಾರಿಕಾ ಬೆಳವಣಿಗೆ: 4 ವಿಷನ್ ಗ್ರೂಪ್ಸ್ ಸಭೆ ನಡೆಸಿದ ಸಚಿವ ಎಂ ಬಿ ಪಾಟೀಲ| 200 ಎಕರೆಯಲ್ಲಿ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಪಾರ್ಕ್, 100 ಎಕರೆಯಲ್ಲಿ ಏವಿಯಾನಿಕ್ಸ್-ಸೆನ್ಸರ್ ಪಾರ್ಕ್ ಸ್ಥಾಪನೆಗೆ ಚಿಂತನೆ

Share

ಬೆಂಗಳೂರು: ನಾನಾ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ಸರಕಾರವು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಸ್ವರೂಪ ಯಾವುದಾಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಏರೋಸ್ಪೇಸ್ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಆಟೋ/ಇ.ವಿ, ಮತ್ತು ಪರಿಸರಸ್ನೇಹಿ ಇಂಧನ ವಲಯಗಳ ವಿಷನ್ ಗ್ರೂಪ್ ಗಳ ಮಹತ್ವದ ಸಭೆ ನಡೆಸಿದರು.

ಖನಿಜ ಭವನದಲ್ಲಿ ಇಡೀ ದಿನ ನಡೆದ ಸಭೆಗಳಲ್ಲಿ ಪ್ರಮುಖ್ಯ ಉದ್ಯಮಿಗಳು ಹಾಗೂ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಕೆಎಫ್ ಸಿಇಒ ಜೋತ್ಸ್ನಾ, ಉದ್ಯೋಗ ಮಿತ್ರ ಎಂಡಿ ದೊಡ್ಡ ಬಸವರಾಜು ಸೇರಿದಂತೆ ಇತರರು ಇದ್ದರು.

ಈ ಬಗ್ಗೆ ಮಾತನಾಡಿರುವ ಸಚಿವ ಎಂ.ಬಿ. ಪಾಟೀಲ ಅವರು, ಇಡೀ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಜಪಾನಿನಲ್ಲಿ 2028ರ ಹೊತ್ತಿಗೆ ಸುಝುಕಿ ಮತ್ತು ಟೊಯೊಟಾ ಕಂಪನಿಗಳು ಏರಿಯಲ್ ಟ್ಯಾಕ್ಸಿ ಸೇವೆ ಆರಂಭಿಸುತ್ತಿವೆ. ಅದಕ್ಕೆ ಬೆಂಗಳೂರಿನ ಸಾಸ್ಮೋಸ್ ಕಂಪನಿಯೇ ವಿದ್ಯುತ್ ಸಾಧನ-ಸಲಕರಣೆಗಳನ್ನು ಪೂರೈಸುತ್ತಿದೆ. ನಮ್ಮಲ್ಲೂ ಸಹ `ಫ್ಲೈ-ಟ್ಯಾಕ್ಸಿ’ ಸೇವೆಗೆ ಸಂಬಂಧಿಸಿದಂತೆ ಸಮರ್ಪಕ ನೀತಿ ರೂಪಿಸಿ, ಇಲ್ಲೂ ಅಂತಹ ಸೇವೆಯನ್ನು ಆರಂಭಿಸಬಹುದು ಎಂದು ಉದ್ಯಮಿಗಳು ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು’ ಎಂದಿದ್ದಾರೆ.

ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೆಗಳಿಗೆ ಅಗತ್ಯವಾದ ಪರೀಕ್ಷಾ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್ ಸ್ಥಾಪಿಸಬೇಕೆಂಬ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿತು. ಈ ಸೌಲಭ್ಯಗಳನ್ನು ಒದಗಿಸಲಾಗುವುದು. ನಾವು ಈ ಕ್ಷೇತ್ರಗಳ ಬೆಳವಣಿಗೆಗೆ ಅಗತ್ಯವಾದ ನೀಲನಕ್ಷೆ ತಯಾರಿಸಬೇಕೆಂಬ ಸಲಹೆ ಕೇಳಿಬಂದಿದೆ. ನಾವು ಈಗಾಗಲೇ ಬೆಂಗಳೂರು ಉತ್ತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಧಾರವಾಡ-ವಿಜಯಪುರ-ಬೆಳಗಾವಿ ರಕ್ಷಣಾ ಕಾರಿಡಾರ್ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರ ಸರಕಾರದ ಬಳಿ ಕೇಳಿದ್ದೇವೆ. ಇವುಗಳ ಜೊತೆಗೆ ಬೆಂಗಳೂರು ಮತ್ತು ಮೈಸೂರು ನಡುವೆ ಕೂಡ ಇಂತಹ ಕಾರಿಡಾರ್ ಬೆಳವಣಿಗೆಗೆ ಸದಾವಕಾಶ ಇದೆ ಎಂದು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯ ರಾಜಧಾನಿಯಾಗಬೇಕು. ಇದಕ್ಕಾಗಿ 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಸ್ಥಾಪಿಸಬೇಕು. ಇದೇ ರೀತಿಯಲ್ಲಿ 100 ಎಕರೆಯಲ್ಲಿ ಏವಿಯಾನಿಕ್ಸ್ ಮತ್ತು ಸೆನ್ಸರ್ ಪಾರ್ಕ್ ಆರಂಭಿಸಬೇಕು ಎಂಬ ಚಿಂತನೆಗಳ ಪ್ರಸ್ತಾಪವಾಗಿದೆ. ವಿಶೇಷ ಹೂಡಿಕೆ ವಲಯ ಅಸ್ತಿತ್ವಕ್ಕೆ ಬಂದಮೇಲೆ ಇವುಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ಭೂಮಿಗೆ ಯಾವ ತೊಂದರೆಯೂ ಇಲ್ಲ ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಮಶೀನ್ ಟೂಲ್ಸ್ ಕ್ಷೇತ್ರದಲ್ಲಿ ವಾರ್ಷಿಕ 36,500 ಕೋಟಿ ರೂ. ವಹಿವಾಟು ನಡೆದಿದ್ದು, ಒಳ್ಳೆಯ ಬೆಳವಣಿಗೆ ಇದೆ. ಇದರ ಉತ್ತೇಜನಕ್ಕೆಂದೇ ನಾವು ಬೃಹತ್ ಪ್ರಮಾಣದ ಪ್ರದರ್ಶನ ಮೇಳಗಳನ್ನು ನಡೆಸಿದ್ದೇವೆ. ಇದಾದ ಮೇಲೆ ಈ ಕ್ಷೇತ್ರದಲ್ಲಿ ವಿಪರೀತ ಬೇಡಿಕೆ ಕಂಡುಬರುತ್ತಿದೆ. ಬೃಹತ್ ಯಂತ್ರಗಳಿಗೆ ಬೇಕಾದ ಕಂಟ್ರೋಲ್ ಸಿಸ್ಟಂ ನಮ್ಮಲ್ಲೇ ಇರುವಂತೆ ನಾವು ಸುಧಾರಿಸಿಕೊಳ್ಳಬೇಕಿದೆ. ಇದಕ್ಕೆ ಬೇಕಾದ ಒಂದು ಪರೀಕ್ಷಾರ್ಥ ಘಟಕ ಈಗ ಬೆಂಗಳೂರಿನಲ್ಲಿದೆ. ಮತ್ತೊಂದು ಘಟಕವನ್ನು ತುಮಕೂರಿನಲ್ಲಿ ತೆರೆಯಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ವೃತ್ತಿ ತರಬೇತಿ ಸಂಸ್ಥೆಗಳನ್ನು ಹೆಚ್ಚು ಮಾಡುವ ಆಲೋಚನೆ ಇದೆ ಎಂದು ಪಾಟೀಲ ಹೇಳಿದ್ದಾರೆ.

ಆಟೋ ಮತ್ತು ಇ.ವಿ. ವಲಯದಲ್ಲಿ ಡ್ರೈಪೋರ್ಟ್ ಜಾಲದ ಅಗತ್ಯವಿದೆ ಎಂದು ವಿಷನ್ ಗ್ರೂಪ್ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇ.ವಿ. ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುವುದು. ಈಗ ಟಾಟಾ ಸಮೂಹದವರು ಧಾರವಾಡದಲ್ಲಿ ಇ.ವಿ. ಬಸ್ ಗಳನ್ನು ತಯಾರಿಸುತ್ತಿದ್ದು, ಇಲ್ಲಿಂದಲೇ ದೇಶದಾದ್ಯಂತ ಪೂರೈಸುತ್ತಿದ್ದಾರೆ. ಈಗ ಅದೇ ಸಮೂಹವು ಮಿನಿ ಎಸ್ಕವೇಟರ್ ಉತ್ಪಾದನೆಗೆ ಸಜ್ಜಾಗಿದೆ. ಇದರ ರಫ್ತಿಗೆ ಸೂಕ್ತ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಜತೆಗೆ ದ್ವಿಚಕ್ರ ಇ.ವಿ. ವಾಹನಗಳ ಪರೀಕ್ಷಾ ಘಟಕ ಅಗತ್ಯವೆಂದು ಹೇಳಿದ್ದು, ಇವುಗಳನ್ನು ಪರಿಶೀಲಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಹಸಿರು ಇಂಧನ ಕ್ಷೇತ್ರದಲ್ಲಿ ಬ್ಯಾಟರಿಗಳಲ್ಲಿ ವಿದ್ಯುತ್ ಸಂಗ್ರಹಕ್ಕೆ ಸಮರ್ಪಕ ನೀತಿ ಬೇಕೆಂದು ಹೇಳಿದ್ದಾರೆ. ಡೇಟಾ ಸೆಂಟರುಗಳ ಸ್ಥಾಪನೆಯ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಇವೆಲ್ಲವನ್ನೂ ಕುರಿತು ಸರಕಾರ ಗಂಭೀರವಾಗಿ ಆಲೋಚಿಸಿ, ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ಹೇಳಿದ್ದಾರೆ.

ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಷನ್ ಗ್ರೂಪ್ ಸಭೆಯಲ್ಲಿ ಉದ್ಯಮಿಗಳಾದ ಉದ್ಯಮಿಗಳಾದ ಸೆಂಟಮ್ ಎಲೆಕ್ಟ್ರಾನಿಕ್ಸ್ ಸಿಇಒ ಅಪ್ಪಾರಾವ್ ವೆಂಕಟ ಮಲ್ಲವರಪು, ಹನಿವೆಲ್ ಮುಖ್ಯಸ್ಥ ಜೀವೀಶ್ ಗುರುಮೂರ್ತಿ, ಸಾಫ್ರಾನ್ ಸಿಇಒ ಜೆ ಎಸ್ ಗಾಂವ್ಕರ್, ಎಐಎ ಪ್ರಧಾನ ವ್ಯವಸ್ಥಾಪಕ ಎಸ್. ದ್ವಾರಕಾನಾಥ್, ಸಾಸ್ಮೋಸ್ ಸಂಸ್ಥಾಪಕ ಎಚ್ ಜಿ. ಚಂದ್ರಶೇಖರ್, ಕಾಲಿನ್ಸ್ ಏರೋಸ್ಪೇಸ್ ಉಪಾಧ್ಯಕ್ಷ ಸಮಿತ್ ರೇ ಇದ್ದರು. ಅಲ್ಲದೆ ಗ್ರೀವ್ಸ್ ಎಲೆಕ್ಟ್ರಿಕ್ಸ್ ಉಪಾಧ್ಯಕ್ಷ ಚೇತನ್ ಗೌಡ, ಟೊಯೊಟಾ ಉಪಾಧ್ಯಕ್ಷ ರಮೇಶ್ ರಾವ್, ಪ್ರಧಾನ ವ್ಯವಸ್ಥಾಪಕ ಕಿರಣ್ ಕುಮಾರ್, ಕೈಗಾರಿಕಾ ಪರಿಣತರಾದ ವಿಕ್ರಂ ಸಾಳುಂಕೆ, ಸುರೇಶ್ ಪಾಟೀಲ್, ದಿನೇಶ್ ರಾವ್, ರವಿ ಕುಳದೇಮಠ ಮುಂತಾದವರೂ ಪಾಲ್ಗೊಂಡಿದ್ದರು.


Share

You cannot copy content of this page