ಬೆಂಗಳೂರು: ಸ್ವಯಂ ಚಾಲಿತ ಮ್ಯುಟೇಷನ್ ಗೆ ಚಾಲನೆ ನೀಡುವ ಮೂಲಕ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರ್ಕಾರದ ಉದ್ದೇಶ ಈಡೇರಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಚಾಲಿತ ಮ್ಯುಟೇಶನ್ ಗೆ ಚಾಲನೆ ನೀಡಿ ಮಾತನಾಡಿದ ಅವರು, “ಕಂದಾಯ ಇಲಾಖೆಯನ್ನು ಜನಪರಗೊಳಿಸಬೇಕು, ಆಡಳಿತದಲ್ಲಿ ಸುಧಾರಣೆ ಮತ್ತು ಸರಳೀಕರಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಿಂದ ಹೆಜ್ಜೆ ಹೆಜ್ಜೆಗೂ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದೆ. ಆ ಬದಲಾವಣಾ ಪರ್ವದ ಮತ್ತೊಂದು ಮಹತ್ವದ ಹೆಜ್ಜೆಯೇ ಸ್ವಯಂ ಚಾಲಿತ ಮ್ಯುಟೇಶನ್ ಗೆ ಚಾಲನೆ. ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ ಸಾಧಕ ಪರಿಶೀಲಿಸಿ ಇಂದಿನಿಂದ ಶೇ.98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲು ಮುನ್ನುಡಿ ಇಟ್ಟಿದ್ದೇವೆ” ಎಂದು ಸಂತಸ ವ್ಯಕ್ತಪಡಿಸಿದರು.
“ಖಾತೆ ಬದಲಾವಣೆ ಕಂದಾಯ ಇಲಾಖೆಯ ಮೂಲ ಜವಾಬ್ದಾರಿಗಳಲ್ಲೊಂದು. ಈ ಹಿಂದೆ ಶಾನುಬೋಗರು ಮಾಡುತ್ತಿದ್ದ ಕೆಲಸವನ್ನು ಈಗ ಭೂಮಿ ತಂತ್ರಾಂಶದ ಮೂಲಕ ಮಾಡಲಾಗುತ್ತಿದೆ. ಆದರೆ, ಇದಕ್ಕಾಗಿ ಜನ ಸಾಮಾನ್ಯರು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಕೆಲ ಅಧಿಕಾರಿಗಳ ಸ್ವೇಚ್ಛಾಚಾರದಿಂದ, ಅವ್ಯವಸ್ಥೆ ಮತ್ತು ಮಧ್ಯವರ್ತಿಗಳ ಕಿರುಕುಳದಿಂದ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದರು. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಉಂಟಾಗುತ್ತಿತ್ತು. ಪ್ರಸ್ತುತ ಸ್ವಯಂ ಚಾಲಿತ ಮ್ಯುಟೇಷನ್ಗೆ ಚಾಲನೆ ನೀಡಲಾಗಿದ್ದು, ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿದಂತಾಗಿದೆ. ಇನ್ನೂ ಜನ ಸಾಮಾನ್ಯರು ಖಾತೆ ಬದಲಾವಣೆಗಾಗಿ ಸರ್ಕಾರಿ ಕಚೇರಿಗೆ ಅಲೆಯುವಂತಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆನ್ ಲೈನ್ ನಲ್ಲಿ ತಮ್ಮ ಖಾತೆ ಬದಲಾವಣೆ ಕೆಲಸಗಳನ್ನು ನಿರ್ವಹಿಸಬಹುದು” ಎಂದು ವಿವರಿಸಿದರು.
“ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವ್ಯಾವ ಸೇವೆಗಳಿಗೆ ನೊಟೀಸ್ ನೀಡುವ ಅಗತ್ಯ ಇರುವುದಿಲ್ಲವೋ ಅವುಗಳನ್ನು 2024 ರ ಏಪ್ರಿಲ್ ತಿಂಗಳಿನಿಂದಲೇ ಸ್ವಯಂ ಚಾಲಿತವಾಗಿ ವರ್ಗಾವಣೆಯಾಗುವಂತೆ ಮಾಡಲಾಗಿತ್ತು. ಹಕ್ಕು-ಬಾಧ್ಯತೆ ದಾಖಲಾತಿ, ಋಣ ತೆಗೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರ್ಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು ಈಗಾಗಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತವೆ. ಈ ಪೈಕಿ 1.75 ಲಕ್ಷ ಖಾತೆ ಬದಲಾವಣೆಯನ್ನು ಈಗಾಗಲೇ ಸ್ಚಯಂ ಚಾಲಿತವಾಗಿ ನೆರವೇರಿಸಲಾಗಿದೆ. ಅಂದರೆ ಶೇ.65 ರಿಂದ ಶೇ.71 ರಷ್ಟು ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತಗೊಳಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
ಮುಂದುವರೆದು, “2024 ಏಪ್ರಿಲ್ 01 ರಿಂದ 2026 ಫೆಬ್ರವರಿ 20ರ ವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದೇವೆ. ಖಾತೆ ಬದಲಾವಣೆಗೆ ಮೊದಲೆಲ್ಲಾ ಕಂದಾಯ ನಿರೀಕ್ಷಕರು (ಆರ್ಐ) ಕಚೇರಿಗೆ ಬಂದು ಬೆರಳಚ್ಚು ಕೊಡುವವರೆಗೆ ಈ ಕೆಲಸಗಳು ಆಗುತ್ತಿರಲಿಲ್ಲ. ಆದರೆ, ಈಗ ಅಧಿಕಾರಿಗಳ ಡಿಜಿಟಲ್ ಸಹಿಯ ಮೂಲಕ ಎಲ್ಲಾ ಕೆಲಸವೂ ಆನ್ಲೈನ್ನಲ್ಲೇ ಆಗುತ್ತಿದೆ. ಖಾತೆ ಬದಲಾವಣೆ ಮತ್ತು ತಕರಾರು ಸಲ್ಲಿಸಲು ಅಧಿಕಾರಿಗಳು ಕಚೇರಿಗೆ ಬರುವ ಅಗತ್ಯವೂ ಇಲ್ಲದ ಕಾರಣ ಅವರ ಸಮಯವೂ ಉಳಿಯುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಖಾತೆ ಬದಲಾವಣೆ ಹೇಗೆ?
“ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೊಟೀಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದ ಮೂಲಕ ತಕರಾರು ಸಲ್ಲಿಸಬಹುದು. ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ. ನೋಂದಣಿಯೇತರವಾಗಿ ಖಾತೆ ಬದಲಾವಣೆಗೆ ಮನವಿ ಬಂದಂತಹ ಪ್ರಕರಣಗಳಿಗೆ 15 ದಿನ ನೊಟೀಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ” ಎಂದು ತಿಳಿಸಿದರು.
“2024 ಏಪ್ರಿಲ್ 01 ರಿಂದ 2026 ಫೆಬ್ರವರಿ 20ರ ವರೆಗಿನ ಅವಧಿಯಲ್ಲಿ 35,11,987 ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತವಾಗಿ ಮಾಡಿದ್ದರೆ, ಕೇವಲ 5207 ಪ್ರಕರಣಗಳಲ್ಲಿ ಮಾತ್ರ ತಕರಾರು ದಾಖಲಾಗಿವೆ. ಅಂದರೆ ನಾವು ಒಟ್ಟು ಮ್ಯುಟೇಶನ್ ಶೇ.98 ರಷ್ಟು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಮಾಡಿದಂತಾಗಿದೆ. ತಕರಾರು ದಾಖಲಿಸಿದ ಪ್ರಕರಣಗಳನ್ನೂ 60 ದಿನಗಳಲ್ಲಿ ಇತ್ಯರ್ಥಗೊಳಿಸಿ ಆದೇಶ ಹೊರಡಿಸುತ್ತಿದ್ದೇವೆ” ಎಂದು ವಿವರಿಸಿದರು.
ಪಹಣಿ ಜೊತೆಗೆ ಆಧಾರ್ ಜೋಡಿಸಲು ಕರೆ:
ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ವೇಳೆ ಈ ಬಗ್ಗೆಯೂ ಗಮನ ಸೆಳೆದ ಅವರು, “ಪಹಣಿಯ ಜೊತೆಗೆ ಆಧಾರ್ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲೀಕರ ಮೊಬೈಲ್ಗೆ ಕಳುಹಿಸಲಾಗುತ್ತದೆ. ಆಗ ಆಸ್ತಿ ಮಾಲೀಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು. ಆ ಮೂಲಕ ಆಸ್ತಿ ಮಾಲೀಕತ್ವಕ್ಕೆ ಖಾತರಿ ಪಡೆಯಬಹುದು. ಇದಲ್ಲದೆ, ನ್ಯಾಯಾಲಯ ಆದೇಶ ನಮೂದಿಸಿದರೆ ಅಥವಾ ಪಹಣಿಯಲ್ಲಿ ಬೇರೆಯವರ ಹೆಸರು ಸೇರಿಸಿದರೂ ಸಹ ಎಸ್ಎಂಎಸ್ ಮೂಲಕ ಮಾಹಿತಿ ಬರುತ್ತೆ. ಆಧಾರ್ ಜೋಡಣೆ ಮಾಡದಿದ್ದರೆ ಆಸ್ತಿ ಮಾಲೀಕರ ಗಮನಕ್ಕೆ ಬಾರದೆ ಖಾತೆ ಬದಲಾವಣೆ ಆಗುವಂತಹ ಅಪರೂಪದ ಸಾಧ್ಯತೆಗಳಿವೆ. ಹೀಗಾಗಿ ಮಾಲಿಕತ್ವ ಸುಭದ್ರವಾಗಿರಬೇಕಾದರೆ ಮೊದಲು ಪಹಣಿ ಜೊತೆಗೆ ಆಧಾರ್ ಜೋಡಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಉಪಸ್ಥಿತರಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಸಂಬಂಧಿತ ಎಲ್ಲಾ ಅಧಿಕಾರಿಗಳೂ ಭಾಗವಹಿಸಿದ್ದರು.
