ಬೆಂಗಳೂರು: ಇರಾನ್ ಸರ್ವೋಚ್ಛ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ. ಇರಾನ್ ಸರ್ಕಾರ ಆಯಾತೊಲ್ಲಾ ಅಲಿ ಖಮೇನಿಯ ಸಾವನ್ನು ದೃಢಪಡಿಸಿದ್ದು, ದೇಶಾದ್ಯಂತ ತುರ್ತು ಪರಿಸ್ಥಿತಿ ಸಹಿತ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ನಿನ್ನೆಯಿಂದ ಇರಾನ್ ನ ರಾಜಧಾನಿ ಟೆಹರಾನ್ ಸೇರಿದಂತೆ ಇರಾನ್ ನ ಬಹುತೇಕ ಎಲ್ಲ ನಗರಗಳ ಮೇಲೆ ಅಮೆರಿಕ- ಇಸ್ರೇಲ್ ಸೇನಾಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಕ್ಷಿಪಣಿ ದಾಳಿ ನಡೆಸಿದ್ದವು.
ಈ ಸಂದರ್ಭದಲ್ಲಿ ಆಯಾತುಲ್ಲಾ ಅಲಿ ಖಮೇನಿ ಸೇರಿದಂತೆ ಇರಾನ್ ರಕ್ಷಣಾ ಸಚಿವ ಅಮೀರ್ ನಾಸೀರ್ ಜಾದೇ, ಐಆರ್ ಜಿಸಿ ಕಮಾಂಡರ್, ಮೊಹಮ್ಮದ್ ಫಕ್ಪೂರ್, ಖಮೇನಿ ಅವರ ಮಗಳು, ಅಳಿಯ ಹಾಗೂ ಮೊಮ್ಮಗ ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಆಯಾತುಲ್ಲಾ ಅಲಿ ಖಮೇನಿ ಅಡಗಿದ್ಧ ರಹಸ್ಯ ಬಂಕರ್ ಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಬಂಕರ್ ಬ್ಲಾಸ್ಟ್ ಮೂಲಕ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಆಯಾತುಲ್ಲಾ ಅಲಿ ಖಮೇನಿ ಹಾಗೂ ಇತರೆ 7 ಮಂದಿ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಇರಾನ್ ನ ಅಧ್ಯಕ್ಷರ ಅರಮನೆಯ ಸಮೀಪವೇ ಇರುವ ಬಂಕರ್ ನ ಸನಿಹದಲ್ಲೇ ಖಮೇನಿ ಅವರ ಪಾರ್ಥಿವ ಶರೀರ ಪತ್ತೆಯಾಗಿದೆ. ಪಾರ್ಥಿವ ಶರೀರವನ್ನು ಇರಾನ್ ನ ಸೇನಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಏಳು ದಿನಗಳ ಕಾಲ ಟೆಹರಾನ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಿದೆ.
ಈ ವೇಳೆ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ ನಲ್ಲಿ ಖಮೇನಿಯ ಹತ್ಯೆಯನ್ನು ಘೋಷಿಸಿದ್ದರು. ಇರಾನ್ ನ ಸರ್ವೋಚ್ಛ ನಾಯಕನ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ರೆವಲ್ಯೂಷನರಿ ಗಾರ್ಡ್ಸ್ ಸೇರಿದಂತೆ ಇರಾನ್ ಸೇನೆ ಹಾಗೂ ಎಲ್ಲ ಬಗೆಯ ಭದ್ರತಾ ಅಧಿಕಾರಿಗಳು ಯುದ್ಧ ಮುಂದುವರೆಸಲು ಇಚ್ಚಿಸದೇ ಶರಣಾಗಲು ಬಯಸಿದ್ದಾರೆ ಎಂದು ಸಹ ಟ್ರಂಪ್ ತಿಳಿಸಿದ್ದಾರೆ.
