ಬೆಂಗಳೂರು: ಬೆಂಗಳೂರು ಪೂರ್ವನಗರ ಪಾಲಿಕೆ ಕೆ.ಆರ್.ಪುರ ವಲಯ ವ್ಯಾಪ್ತಿಯಲ್ಲಿ 6 ಸ್ವತ್ತುಗಳ ಪೈಕಿ 2 ಆಸ್ತಿಗಳನ್ನು ಹರಾಜು ಮಾಡಲಾಗಿದೆ ಎಂದು ವಲಯದ ಜಂಟಿ ಆಯುಕ್ತರಾದ ಡಾ. ಸುಧಾ ರವರು ತಿಳಿಸಿದರು.
ನಗರ ಪಾಲಿಕೆಗೆ ಒಂದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಸ್ವತ್ತುಗಳ ಹರಾಜಿನ ಮೂಲಕ ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025ರ ಅಡಿಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ತರಹದ ಸ್ವತ್ತುಗಳ ಮಾಲೀಕರು ಅಥವಾ ಅಧಿಭೋಗದಾರರ ಪ್ರತಿವರ್ಷ ಆಸ್ತಿತೆರಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ಸಾಲಿನ ಆಸ್ತಿ ತೆರಿಗೆ ಪಾವತಿಸದೇ ಇರುವ ಪ್ರಕರಣಗಳಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡುವ ಕಾರ್ಯವಿಧಾನವನ್ನು ಆಸ್ತಿ ತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು 2024ರ ಅಡಿಯಲ್ಲಿ ರೂಪಿಸಲಾಗಿರುತ್ತದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಹಾಗೂ ನಿಯಮಗಳಲ್ಲಿ ತಿಳಿಸಿರುವಂತೆ ಆಸ್ತಿ ತೆರಿಗೆ ಸುಸ್ಥಿದಾರರಿಗೆ ಕಾರಣ ಕೇಳಿ ನೋಟೀಸ್, ಆಸ್ತಿ ತೆರಿಗೆ ಬೇಡಿಕೆ ಪತ್ರ ಜಾರಿ ಮಾಡಲಾಗಿದ್ದು, ಸಾಕಷ್ಟು ಕಾಲಾವಕಾಶವನ್ನು ನೀಡಿದ್ದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುತ್ತಾರೆ. ಅಂತಹ ಪ್ರಕರಣಗಳ ಮಾಲೀಕರಿಗೆ ನಿಯತಕಾಲಿಕವಾಗಿ ಮೊಬೈಲ್ ಸಂದೇಶಗಳ ಮೂಲಕ ಸ್ವತ್ತಿನ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸುವಂತೆ ಹಲವು ಬಾರಿ ತಿಳಿಸಲಾಗಿರುತ್ತದೆ.
ಮುಂದುವರೆದು, ಸಾಕಷ್ಟು ಅವಕಾಶಗಳನ್ನು ನೀಡಿದ ನಂತರವು ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸದ ಕೆ.ಆರ್ ಪುರ ವಲಯ ವ್ಯಾಪ್ತಿಯಲ್ಲಿನ 6 ಸ್ವತ್ತುಗಳನ್ನು ಕಾಯ್ದೆ ಹಾಗೂ ನಿಯಮಗಳನ್ವಯ ಹರಾಜು ಪ್ರಕ್ರಿಯೆಗೆ ಒಳಪಡಿಸಲು ತಿರ್ಮಾನಿಸಲಾಗಿರುತ್ತದೆ.
ಅದರಂತೆ, ಇಂದು ನಡೆದ ಹರಾಜು ಪ್ರಕ್ರಿಯಲ್ಲಿ 4 ಆಸ್ತಿ ಮಾಲೀಕರು ಸ್ಥಳದಲ್ಲಿಯೇ ಬಾಕಿ ಆಸ್ತಿ ತೆರಿಗೆ ಪಾವತಿಸಿದ ಕಾರಣ ಹರಾಜು ಪ್ರಕ್ರಿಯೆಯಿಂದ ಸ್ವತ್ತನ್ನು ಕೈ ಬಿಡಲಾಯಿತು. ಉಳಿದ 2 ಆಸ್ತಿ ಗಳನ್ನು ಹರಾಜು ಹಾಕಿದ್ದು, ಬಿಡ್ ಮಾಡಿ ಖರೀದಿಸಿರುತ್ತಾರೆ.
ಹರಾಜು ಪ್ರಕ್ರಿಯೆ ವೇಳೆ ಕಂದಾಯ ಅಧಿಕಾರಿಯಾದ ಡಾ. ಬಸವರಾಜು ಮಗಿ, ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ವಿಭಾಗದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
