ಸಮಗ್ರ ಸುದ್ದಿ

ಬ್ರಿಡ್ಜ್‌ ಟು ಬೆಂಗಳೂರು: ಕರ್ನಾಟಕದ ಕ್ರಮಕ್ಕೆ ರಾಜತಾಂತ್ರಿಕರ ಮೆಚ್ಚುಗೆ |ʼತಂತ್ರಜ್ಞಾನದ ಜೊತೆಗೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕದ ಒಲವು: ಮುಖ್ಯಮಂತ್ರಿ ಸಿದ್ದರಾಮಯ್ಯ

Share

ನವದೆಹಲಿ: ʼತಂತ್ರಜ್ಞಾನದ ಜೊತೆಗೆ ವ್ಯಾಪಾರ, ನಾವೀನ್ಯತೆ, ಜನರ ಸಹಯೋಗ ಹಾಗೂ ವಿಶ್ವದೊಂದಿಗಿನ ಪಾಲುದಾರಿಕೆಯತ್ತ ಕರ್ನಾಟಕ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ನವದೆಹಲಿಯಲ್ಲಿ ನಡೆದ ಬ್ರಿಡ್ಜ್ ಟು ಬೆಂಗಳೂರು: ವಿವಿಧ ದೇಶಗಳ ರಾಯಭಾರಿಗಳು ಹಾಗೂ ರಾಜತಾಂತ್ರಿಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರು ಕನಸುಗಳನ್ನು ಕಟ್ಟಿಕೊಳ್ಳುವ, ಭವಿಷ್ಯ ರೂಪಿಸುವ ನಗರ:

ಕರ್ನಾಟಕವು ಜಾಗತಿಕ ನಾವೀನ್ಯತಾ ಕೇಂದ್ರ ಮತ್ತು ಹೂಡಿಕೆಯ ಆದ್ಯತಾ ತಾಣವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು, ಬೆಂಗಳೂರು ಕೇವಲ ಭೇಟಿ ನೀಡುವ ನಗರವಲ್ಲ. ಕನಸುಗಳನ್ನು ಕಟ್ಟಿಕೊಳ್ಳುವ, ಭವಿಷ್ಯ ರೂಪಿಸುವ ನಗರವಾಗಿದೆ. ಎಲ್ಲರನ್ನೂ, ಎಲ್ಲದನ್ನೂ ಸ್ವಾಗತಿಸುವ ಅದರ ಮುಕ್ತ ಧೋರಣೆ, ಸದೃಢ ಪರಿಸರ ವ್ಯವಸ್ಥೆ ಮತ್ತು ಉತ್ತಮ ಜೀವನಮಟ್ಟದಿಂದ ಜಾಗತಿಕ ಪ್ರತಿಭೆ, ನಾವೀನ್ಯತೆ ಹಾಗೂ ಹೂಡಿಕೆಗಳನ್ನು ನಿರಂತರವಾಗಿ ಸೆಳೆಯುತ್ತಾ, ಅವಕಾಶಗಳ ನಗರವಾಗಿ ಮುಂದುವರಿಯುತ್ತಿದೆ ಎಂದರು.

ದೀರ್ಘಾವಧಿಯ ಪಾಲುದಾರಿಕೆಯಲ್ಲಿ ಆಸಕ್ತಿ

ನಾವೀನ್ಯತೆ ನೇತೃತ್ವದಲ್ಲಿನ ಬೆಳವಣಿಗೆ ಮತ್ತು ಅಂತರರಾಷ್ಟ್ರೀಯ ಪಾಲುದಾರಿಕೆ ಕುರಿತು ಮಾತನಾಡಿದ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಕರ್ನಾಟಕವು ಬಂಡವಾಳ ಹೂಡಿಕೆಗಷ್ಟೇ ಸೀಮಿತವಾದ ʼಸುಪ್ತ ಪಾಲುದಾರಿಕೆʼಯಲ್ಲಿ ಆಸಕ್ತಿ ಹೊಂದಿರದೆ, ದೀರ್ಘಾವಧಿಯ, ನಿರ್ದಿಷ್ಟ ಫಲಿತಾಂಶ ಆಧಾರಿತ ನಾವೀನ್ಯತೆಯ ಸಹಯೋಗಗಳನ್ನು ಕಾರ್ಯಗತಗೊಳಿಸಲು ನೆರವಾಗುವ ಪಾಲುದಾರರ ಹುಡುಕಾಟದಲ್ಲಿ ಇದೆ” ಎಂದರು.

ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಬೆಂಗಳೂರು ಆಕರ್ಷಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ: ರಾಜತಾಂತ್ರಿಕರ ಮೆಚ್ಚುಗೆ

ಕರ್ನಾಟಕವು ತಂತ್ರಜ್ಞಾನ ಕೇಂದ್ರದಿಂದ ಜಾಗತಿಕ ನಾವೀನ್ಯತೆಯ ಪ್ರಮುಖ ಪಾಲುದಾರ ತಾಣವಾಗಿ ಅಭಿವೃದ್ಧಿಗೊಂಡಿದ್ದು, ನೀತಿ- ನಿರೂಪವಣೆಯ ನೆರವು, ನವೋದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ಅಗತ್ಯ ಬೆಂಬಲ, ಸಂಶೋಧನಾ ಸಹಯೋಗ ಮತ್ತು ಮಾರುಕಟ್ಟೆ ಲಭ್ಯತೆ ಅವಕಾಶಗಳನ್ನು ಒದಗಿಸುವ ಮೂಲಕ, ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಆಕರ್ಷಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ವಿವಿಧ ದೇಶಗಳ ರಾಜತಾಂತ್ರಿಕರು ಬಣ್ಣಿಸಿದ್ದಾರೆ.

ʼಬೆಂಗಳೂರಿಗೆ ಸೇತುವೆʼ ಉಪಕ್ರಮದ ಮೂಲಕ ಕರ್ನಾಟಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ರಚನಾತ್ಮಕವಾಗಿ ಕಾರ್ಯೋನ್ಮುಖವಾಗಿರುವುದನ್ನು ಶ್ಲಾಘಿಸಿದರು.

ಇದು ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಸಹಭಾಗಿತ್ವಗಳ ಮೇಲೆ ಕೇಂದ್ರೀಕೃತವಾಗಿದ್ದ, ರಾಜ್ಯ ಸರ್ಕಾರದ ನೇತೃತ್ವದಲ್ಲಿ ನಡೆದ ಭಾರತದ ಅತ್ಯಂತ ಪ್ರಮುಖ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ ಪಾಟೀಲ ಮತ್ತು ಎಲೆಕ್ಟ್ರಾನಿಕ್ಸ್, ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಜಾಗತಿಕ ಉದ್ಯಮ ದಿಗ್ಗಜರು ಭಾಗವಹಿಸಿದ್ದರು.

45ಕ್ಕೂ ಹೆಚ್ಚು ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳ ಹಿರಿಯ ರಾಜತಾಂತ್ರಿಕ ಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಜಾಗತಿಕ ಸಂಸ್ಥೆಗಳು ಮತ್ತು ಕೈಗಾರಿಕೆ ಮತ್ತು ಸರ್ಕಾರದ ಹಿರಿಯ ಪಾಲುದಾರರನ್ನು ಒಳಗೊಂಡ 140ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಅಂತರರಾಷ್ಟ್ರೀಯ ಪ್ರಮುಖ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಗಳ ಭಾಗವಹಿಸುವಿಕೆಯೂ ಗಮನ ಸೆಳೆಯಿತು. ಇದು ಸರ್ಕಾರದಿಂದ ಸರ್ಕಾರಕ್ಕೆ ಮತ್ತು ವಾಣಿಜ್ಯ ವಹಿವಾಟಿನಿಂದ ಸರ್ಕಾರದ ಜೊತೆಗಿನ ಸಹಯೋಗವನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಸ್ವಿಟ್ಜರ್ಲೆಂಡ್, ಸೌದಿ ಅರೇಬಿಯಾ, ಡೆನ್ಮಾರ್ಕ್, ಫ್ರಾನ್ಸ್, ಈಜಿಪ್ಟ್, ಮಲೇಷ್ಯಾ, ಜಪಾನ್, ಜರ್ಮನಿ ಹಾಗೂ ಭೂತಾನ್ ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿದ್ದರು. ಹಲವಾರು ರಾಯಭಾರಿಗಳು ಮತ್ತು ಪ್ರತಿನಿಧಿಗಳು ಮಾತನಾಡಿ ಕರ್ನಾಟಕದ ಜೊತೆಗಿನ ವಿವಿಧ ದೇಶಗಳ ಗಾಢವಾದ ಮತ್ತು ಬೆಳೆಯುತ್ತಿರುವ ಪಾಲುದಾರಿಕೆಯ ಮೇಲೆ ಬೆಳಕು ಚೆಲ್ಲಿದರು.
ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ) -ದಂತಹ ರಚನಾತ್ಮಕ ವೇದಿಕೆಗಳ ಮೂಲಕ ಭಾರತದ ನಾವೀನ್ಯತೆ ವ್ಯವಸ್ಥೆಯ ಜೊತೆ ಗಾಢ ಸಂಬಂಧವನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು.


Share

You cannot copy content of this page