ಬೆಂಗಳೂರು: “ಸುಸ್ಥಿರ ಇಂಧನ, ಭಾರತದ ಕಾರ್ಯಸೂಚಿ 2047-ಇಂಧನ ಭದ್ರತೆಗಾಗಿ ಕಾನೂನು, ನೀತಿ ಹಾಗೂ ಆವಿಷ್ಕಾರಗಳ ಹೊಸ ಚಿಂತನೆ” ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಏಪ್ರಿಲ್ 18 ರಂದು ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್ನಲ್ಲಿ ನಡೆಯಲಿದ್ದು, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಕಾಮನ್ವೆಲ್ತ್ ಲೀಗಲ್ ಎಜುಕೇಷನ್ ಅಸೋಸಿಯೇಷನ್ (CLEA) ಮತ್ತು ಇಂಧನ ಇಲಾಖೆ ಜಂಟಿಯಾಗಿ ಆಯೋಜಿಸುತ್ತಿರುವ ಈ ಸಮ್ಮೇಳನವು ದೇಶ- ವಿದೇಶಗಳ ಪ್ರಮುಖ ನ್ಯಾಯಶಾಸ್ತ್ರಜ್ಞರು, ನೀತಿ ನಿರೂಪಕರು, ಉದ್ಯಮ ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ಈ ವೇದಿಕೆಯಲ್ಲಿ ಒಟ್ಟುಗೂಡಿಸಲಾಗುತ್ತದೆ.
ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಲಿರುವ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಸುಸ್ಥಿರತೆ, ನಾವೀನ್ಯತೆ ಮತ್ತು ಇಂಧನ ಭದ್ರತೆಗೆ ಒತ್ತು ನೀಡಲಿರುವ ಈ ಉನ್ನತ ಮಟ್ಟದ ಉದ್ಘಾಟನಾ ಅಧಿವೇಶನವು ದೇಶದ ಇಂಧನ ಭವಿಷ್ಯದ ಕುರಿತ ಚರ್ಚೆಗಳಿಗೆ ನಾಂದಿ ಹಾಡಲಿದೆ.
ಈ ಸಮ್ಮೇಳನವು ಇಂಧನ ವಲಯದಲ್ಲಿ ಕರ್ನಾಟಕದ ಮುಂದಾಳತ್ವವನ್ನು ಸಾರಲಿದೆ. ಪ್ರಗತಿಪರ ಇಂಧನ ನೀತಿಗಳೊಂದಿಗೆ ನಾವೀನ್ಯತೆಯನ್ನು ಬೆಳೆಸುವಲ್ಲಿ ಮತ್ತು ಭಾರತದ ದೀರ್ಘಕಾಲೀನ ಇಂಧನ ಗುರಿಗಳು ಮತ್ತು ನಿವ್ವಳ ಶೂನ್ಯ ಬದ್ಧತೆಗಳಿಗೆ ರಾಜ್ಯದ ಕೊಡುಗೆಯನ್ನು ಬಲಪಡಿಸುವಲ್ಲಿ ಇಂಧನ ಇಲಾಖೆಯು ಪ್ರಮುಖ ಪಾತ್ರ ವಹಿಸುತ್ತದೆ.
ಈ ಸಮ್ಮೇಳನವು ಭಾರತದ ಇಂಧನ ಪರಿವರ್ತನೆ, ನೀತಿ ಮತ್ತು ಆಡಳಿತದ ಕುರಿತು ಸಂವಾದಕ್ಕೆ ವೇದಿಕೆಯನ್ನು ಒದಗಿಸಲಿದ್ದು, 2047ರ ವೇಳೆಗೆ ಇಂಧನ ಭದ್ರತೆ ಮತ್ತು ಸುಸ್ಥಿರತೆಗಾಗಿ ರಾಷ್ಟ್ರೀಯ ಗುರಿಗೆ ಅನುಗುಣವಾಗಿರುತ್ತದೆ.
ಈ ಸಮ್ಮೇಳನವು ಏಪ್ರಿಲ್ 19 ರಂದು ನಡೆಯುವ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದ್ದು, ಪ್ರಮುಖ ಶಿಫಾರಸುಗಳು ಮತ್ತು ಒಳನೋಟಗಳ ಮೂಲಕ ಮುಂದಿನ ದಾರಿಯನ್ನು ವಿವರಿಸಲಾಗುವುದು.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಮತ್ತು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಈ ಸಮ್ಮೇಳನ ನಡೆಯಲಿದೆ. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್; ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್; ಮತ್ತು ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಸೇರಿದಂತೆ ಇತರ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
